ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಮಾತನಾಡಿದ್ದಕ್ಕೆ ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಟ್ರೋಲ್‌ ಮಾಡಿದವರಿಗೆ ಶಾಸಕಿ ನಯನಾ ಮೋಟಮ್ಮ ಖಡಕ್‌ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರು (ಜು.09): ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಮಾತನಾಡಿದ್ದಕ್ಕೆ ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದ್ದ ಶಾಸಕಿ ನಯನಾ ಮೋಟಮ್ಮ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗಿತ್ತು. ಆದರೆ, ಇದಕ್ಕೆ ಖಾರವಾಗಿಯೇ ಉತ್ತರಿಸಿದ ಶಾಸಕಿ ನಯನಾ ಮೋಟಮ್ಮ, ಟ್ರೋಲರ್ಸ್‌ಗಳು ಸಮಾಧಾನದಿಂದ ವರ್ತಿಸಿ. ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಸ್ವಲ್ಪ ಮಾಹಿತಿ ಕೊರತೆಯಿತ್ತು. ಈಗಲೂ ನಾನು ಅವರ ಮಾತನ್ನು ಬೆಂಬಲಿಸುತ್ತೇನೆ ಎಂದು ಟ್ರೋಲರ್ಸ್‌ಗಳಿಗೆ ತಿರುಗೇಟು ಕೊಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಹೌದು, ಕರ್ನಾಟಕ ವಿಧಾನಸಭಾ ಕಲಾಪದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಭಾರಿ ಟ್ರೋಲ್‌ ಮಾಡುತ್ತಿದ್ದವರಿಗೆ ಶಾಸಕಿ ನಯನಾ ಮೋಟಮ್ಮ (MLA Nayana Motamma) ನೀಡಿದ ಪ್ರತಿಕ್ರಿಯೆಗೆ ಕೂಡ ಭಾರಿ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ನಯನಾ ಮೋಟಮ್ಮ ಅವರು, ಸಾವಾಗಿಲ್ಲ ಮಾರ್ರೆ ನಿಜ! ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು. ಪ್ರದೀಪ್ ಈಶ್ವರ್ (MLA Pradeep Eshwar) ಅವರು ಹೇಳಿರೋ ವಿಚಾರದಲ್ಲಿ ಯಾವ ತಪ್ಪು ಇಲ್ಲ. ಮಾಹಿತಿ ಕೊರತೆಯಿದ್ದಿರಬಹುದು ಅಷ್ಟೆ. ಆದರೆ, ಅವರು ಹೇಳಿರುವ ವಿಚಾರ, ಎತ್ತಿರುವ ಪ್ರಶ್ನೆ ಎರಡೂ ಸರಿಯಾಗಿಯೇ ಇದೆ. ಹಾಗಾಗಿಯೇ ನಾನೂ ಸಹ ಅವರ ಮಾತನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ್ದಾರೆ.

'ಸಾವಾಗ್ಲಿಲ್ಲ ಮರ್ರೆ ಪ್ರದೀಪ್, ಕೂತ್ಕೊ ಪ್ರದೀಪ್..' ಶಾಸಕ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಬುದ್ದಿವಾದ!

ಟ್ರೋಲಿಗರಿಗೆ ಸಲಹೆ: ತಮ್ಮನ್ನು ಟ್ರೋಲ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಟ್ರೋಲಿಗರಿಗೆ ಸಲಹೆ ನೀಡಿದ್ದಾರೆ. ಸದನದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತಿರುವ ವೇಳೆ ಮೇಜು ಕುಟ್ಟಿ ನಯನಾ ಮೋಟಮ್ಮ ಬೆಂಬಲ ಸೂಚಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ನಯನಾ ಮೋಟಮ್ಮ ಸ್ಪಷ್ಟನೆ ನೀಡಿದ್ದಾರೆ. ಸಾವಾಗಿಲ್ಲ ಮಾರ್ರೆ ಎಂಬ ಹೇಳಿಕೆಯ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

Scroll to load tweet…

ಪ್ರದೀಪ್‌ ಈಶ್ವರ್‌ ಸವಾಲು: ಕೋವಿಡ್‌ ವೇಳೆ ಭ್ರಷ್ಟಾಚಾರ ಮಾಡಿಲ್ಲ ಅಂತ ಸುಧಾಕರ್‌ ದೀಪ ಹಚ್ಚಲಿ

ವಿಧಾನಸಭಾ ಅಧಿವೇಶನದಲ್ಲಿ ನಡೆದಿದ್ದೇನು?: ವಿಧಾನಸಭಾ ಕಲಾಪದಲ್ಲಿ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಇಬ್ಬರ ನಡುವಿನ ವಾಕ್ಸಮರ ತಿಳಿಯಾಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಶಾಸಕರಾದ ಪ್ರದೀಪ್ ಈಶ್ವರ್, ಒಂದು ಸಾವು ಆಗಿದ್ದಕ್ಕೆ ಹೋರಾಟ ಮಾತನಾಡುತ್ತಿದ್ದಾರೆ ಅಲ್ಲವಾ? ಕೋವಿಡ್ ಸಮಯದಲ್ಲಿ ಸಾವಿರಾರು ಸಾವು ಆಯ್ತು ಅಲ್ಲವಾ? ಅದಕ್ಕೆ ನ್ಯಾಯ ಬೇಡ್ವಾ.. ಈ ಬಗ್ಗೆ ತನಿಖೆ ಮಾಡಿ ಎಂದು ಒತ್ತಾಯಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು ಸಾವಾಗಿಲ್ಲ ಮಾರ್ರೆ ಪ್ರದೀಪ್‌, ಕೋತ್ಕೋ ಪ್ರದೀಪ್‌ ಎಂದು ಸಲಹೆ ನೀಡಿದರು. ಆದರೆ, ಈ ವೇಳೆ ಮೇಜು ಕುಟ್ಟಿ ಪ್ರದೀಪ್‌ ಈಶ್ವರ್‌ಗೆ ಬೆಂಬಲಿಸಿದ್ದ ನಯನಾ ಮೋಟಮ್ಮ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಿದ್ದಕ್ಕೆ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.