ಮಾಧುಸ್ವಾಮಿ ಮತ್ತೊಂದು ದರ್ಪ: ಸರ್ಕಾರಕ್ಕೆ 10 ಸಾವಿರ ರು. ದಂಡ ವಿಧಿಸಿದ ಕೋರ್ಟ್
ತುಮಕೂರಿನ ಹಳಿಯಾರುನಲ್ಲಿ ಕನಕ ವೃತ್ತ ವಿಚಾರದಲ್ಲಿ ಹಾಲುಮತ ಶ್ರೀಗಳಿಗೆ ಅವಮಾನ ಮಾಡಿರುವ ವಿವಾದದಲ್ಲಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ ದರ್ಪದ ಮಾತಿಗೆ ಸರ್ಕಾರ ಬೆಲೆ ತೆತ್ತಬೇಕಿದೆ. ಏನದು..? ಮುಂದೆ ನೋಡಿ..
ಬೆಂಗಳೂರು, [ನ.22]: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಆಡಿದ್ದ ಮಾತಿಗೆ ಇದೀಗ ರಾಜ್ಯ ಸರ್ಕಾರ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ.
ಜಡ್ಜ್ ನಿಂದ ವ್ಯಾಜ್ಯ ವಿಳಂಬ ಎನ್ನವ ಸಚಿವ ಮಾಧುಸ್ವಾಮಿ ಹೇಳಿಕೆಗೆ ಹೈಕೋರ್ಟ್ ಗರಂ ಆಗಿದ್ದು, ಸರ್ಕಾರಕ್ಕೆ 10 ಸಾವಿರ ರು. ದಂಡ ವಿಧಿಸಿದೆ. ಪ್ರಕರಣವೊಂದರಲ್ಲಿ ಸಮಯ ಕೇಳಿದ ಸರ್ಕಾರಿ ವಕೀಲರಿಗೆ 10 ಸಾವಿರ ರು.ದಂಡ ಹಾಕಿದೆ.
ಕುರುಬರಿಗೆ ಅವಮಾನ ಬೆನ್ನಲ್ಲೇ ಸಚಿವ ಮಾಧುಸ್ವಾಮಿ ಮತ್ತೊಂದು ಅತಿರೇಕ
'ಸರ್ಕಾರದ ವ್ಯಾಜ್ಯಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕ ನೀಡುತ್ತಾ ಹೋಗುವುದೇ ಕಾರಣ' ಎಂದು ಮಾಧುಸ್ವಾಮಿ ಹೇಳಿದ್ದರು. ಕಾನೂನು ಮಂತ್ರಿಗಳು ಈ ರೀತಿ ಹೇಳಿಕೆ ನೀಡಿರುವುದು ಬೇಜವಾಬ್ದಾರಿಯದ್ದು ಎಂದು ಹೈಕೋರ್ಟ್ ಕಿಡಿಕಾರಿತ್ತು.
ಘಟನೆ ಹಿನ್ನೆಲೆ
2012ರಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯೊಂದು, ಮೊನ್ನೆ ಬುಧವಾರ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಇನ್ನಷ್ಟು ಸಮಯಾವಕಾಶಬೇಕೆಂದು ಕೋರಿದರು.
ಇದಕ್ಕೆ ಗರಂ ಆದ ನ್ಯಾಯಾಮೂರ್ತಿಗಳು 'ಹೊರಗೆ ನಿಮ್ಮ ಕಾನೂನು ಮಂತ್ರಿಗಳು ಬಹಿರಂಗವಾಗಿ ವೇದಿಕೆಗಳಲ್ಲಿ, ಸರ್ಕಾರಿ ವ್ಯಾಜ್ಯಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕ ನೀಡಿ ಮುಂದೂಡುವುದೇ ಕಾರಣ ಎನ್ನುತ್ತಾರೆ. ಆದ್ರೆ, ಕೋರ್ಟ್ ನಲ್ಲಿ ಸರ್ಕಾರದ ಪರ ವಕೀಲರು ಸಮಯವಕಾಶ ಬೇಕು ಎಂದು ಕೋರುತ್ತೀರಿ ಎಂದು ಮೌಖಿಖವಾಗಿ ತರಾಟೆಗೆ ತೆಗೆದುಕೊಂಡರು.
ಎಲ್ಲಾ ನ್ಯಾಯಮೂರ್ತಿಗಳು 365 ದಿನ ಕೆಲಸ ಮಾಡಲು ತಯಾರಿದ್ದಾರೆ. ನಮ್ಮ ಬದ್ಧತೆಯ ಬಗ್ಗೆ ಯಾರಿಗೂ ಅನುಮಾನ ಬೇಡ. ಸಚಿವರು ಜವಾಬ್ದಾರಿ ಅರಿತು ಹೇಳಿಕೆ ನೀಡಬೇಕೆಂದು ಎಚ್ಚರಿಕೆ ನೀಡಿ 2012ರಲ್ಲಿ ಸಲ್ಲಿಸಲಾದ ರಿಟ್ ಪ್ರಕರಣವನ್ನು ಕೋರ್ಟ್ ಇಂದಿಗೆ [ಶುಕ್ರವಾರ] ಮುಂದೂಡಿತ್ತು.
ಅದೇ ಪ್ರಕರಣವನ್ನು ಇಂದು ವಿಚಾರಣೆಗೆತ್ತುಕೊಂಡ ಕೋರ್ಟ್ , ಸಮಯ ಕೇಳಿದ್ದ ಸರ್ಕಾರಿ ಪರ ವಕೀಲರಿಗೆ 10 ಸಾವಿರ ರು. ದಂಡ ವಿಧಿಸಿದೆ. ಮೊದಲಿಗೆ 1 ಲಕ್ಷ ರು ದಂಡ ಹಾಕಿತ್ತು. ಆದ್ರೆ, ವಕೀಲರು ಗೋಗರೆದ ನಂತರ ದಂಡವನ್ನು 10 ಸಾವಿರಕ್ಕೆ ಇಳಿಕೆ ಮಾಡಿತು.
ಇದರ ತಾತ್ಪರ್ಯ ಇಷ್ಟೇ, ಸರ್ಕಾರದ ವ್ಯಾಜ್ಯಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕ ನೀಡುತ್ತಾ ಹೋಗುವುದೇ ಕಾರಣ ಅಲ್ಲ. ಪ್ರಕರಣಗಳ ವಿಚಾರಣೆಗೆ ನಿಮ್ಮ ಸರ್ಕಾರ ಪರ ವಕೀಲರುಗಳೇ ಕಾಲಾವಕಾಶ ಕೇಳುತ್ತಾರೆ ಎಂದು ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದಂತಿದೆ.