Asianet Suvarna News Asianet Suvarna News

ಹೈಕೋರ್ಟ್‌ಗೇ ಸವಾಲು ಹಾಕಿದ ವಕೀಲನಿಗೆ 50,000 ದಂಡ..!

* ದಂಡ ವಿಧಿಸಿದ ರಾಜ್ಯ ಹೈಕೋರ್ಟ್‌
* ನೆಲಮಂಗಲ-ತುಮಕೂರು ಹೆದ್ದಾರೀಲಿ ಬೀದಿ ದೀಪಕ್ಕೆ ಅರ್ಜಿ
* ದುರುದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ ಎಂದ ನ್ಯಾಯಪೀಠ
 

Karnataka High Court 50000 Fine to Advocate  grg
Author
Bengaluru, First Published Sep 23, 2021, 7:56 AM IST

ಬೆಂಗಳೂರು(ಸೆ.23): ಬೆಂಗಳೂರು-ತುಮಕೂರು(Bengaluru-Tumakuru) ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ತುಮಕೂರು ನಡುವಿನ 32 ಕಿ.ಮೀ ಉದ್ದದ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್‌(HighCourt), ಅರ್ಜಿದಾರರಿಗೆ 50 ಸಾವಿರ ದಂಡ ವಿಧಿಸಿದೆ.

ಈ ಕುರಿತು ವಕೀಲ ರಮೇಶ್‌ ಎಲ್‌.ನಾಯ್ಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಸಿ.ಶರ್ಮಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ದಂಡ ಮೊತ್ತವನ್ನು 30 ದಿನದಲ್ಲಿ ಕರ್ನಾಟಕ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರ ರಮೇಶ್‌ ನಾಯ್ಕ್ ವಾದ ಮಂಡಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ತುಮಕೂರು ನಡುವಿನ 32.5 ಕಿ.ಮೀ ಉದ್ದದ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂಬುದನ್ನು ಯಾವ ಕಾನೂನು ಹೇಳುತ್ತದೆ ಎಂದು ಪ್ರಶ್ನಿಸಿದರು.

ಏಕಕಾಲಕ್ಕೆ ದಾಖಲೆ 8 ಹೈಕೋರ್ಟ್ ಸಿಜೆಗಳ ನೇಮಕಕ್ಕೆ ಶಿಫಾರಸು

ರಮೇಶ್‌ ನಾಯ್ಕ್ ಉತ್ತರಿಸಿ, 18 ವರ್ಷ ಕಾಲ ಈ ಹೆದ್ದಾರಿಯನ್ನು ನಿರ್ವಹಣೆ ಮಾಡಲು ಜೆಎಎಸ್‌ಎಸ್‌ ಟೋಲ್‌ ರೋಡ್‌ ಕಂಪನಿ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಒಪ್ಪಂದದಲ್ಲಿ ಈ ವಿಚಾರ ಹೇಳಲಾಗಿದೆ. ಆದರೆ, ಒಪ್ಪಂದದ ಪ್ರತಿಯನ್ನು ನಮಗೆ ಒದಗಿಸುತ್ತಿಲ್ಲ. ಅವಕಾಶ ನೀಡಿದರೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಆಗ ಅರ್ಜಿಯ ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠ, ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವುದನ್ನು ಪ್ರತಿಪಾದಿಸುವ ನಿಯಮಗಳು ಮತ್ತು ಆ ಕುರಿತ ದಾಖಲೆಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಒದಗಿಸಿಲ್ಲ. ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವುದನ್ನು ಕಡ್ಡಾಯ ಎಂದು ಹೇಳುವ ಯಾವ ನಿಯಮಗಳಿಲ್ಲ ಎಂಬುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಕೀಲರು ಹೇಳಿದ್ದಾರೆ ಎಂದು ನುಡಿಯಿತು.

‘ಸಾರ್ವಜನಿಕ ಹಿತಾಸಕ್ತಿ ಇಲ್ಲ’

ಅರ್ಜಿದಾರರು ಈ ರಸ್ತೆಯಲ್ಲಿ ಟೋಲ್‌ ಸಂಗ್ರಹದಿಂದ ವಿನಾಯಿತಿ ನೀಡುವಂತೆ ಟೋಲ್‌ ಸಂಸ್ಥೆಗೆ ಖುದ್ದು ಮನವಿ ಮಾಡಿದ್ದಾರೆ. .20 ಟೋಲ್‌ ಪಾವತಿ ವಿಚಾರದಲ್ಲಿ ಸಂಸ್ಥೆಯ ಸಿಬ್ಬಂದಿ ಗಲಾಟೆ ಮಾಡಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈ ಅಂಶಗಳನ್ನು ಗಮನಿಸಿದರೆ ದ್ವೇಷದಿಂದ ಈ ಅರ್ಜಿ ಸಲ್ಲಿಸಲಾಗಿದೆ. ಇದು ಕಾನೂನಿನ ಪ್ರಕ್ರಿಯೆ ದುರ್ಬಳಕೆಯಾಗಿದೆ. ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಅರ್ಜಿದಾರರಿಗೆ 25 ಸಾವಿರ ದಂಡ ವಿಧಿಸಿತ್ತು.

ಈ ವೇಳೆ ಮಧ್ಯಪ್ರವೇಶಿಸಿದ ರಮೇಶ್‌ ನಾಯ್ಕ್, ಸ್ವ-ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿಲ್ಲ. ನಿಜವಾದ ಸಾರ್ವಜನಿಕ ಹಿತಾಸಕ್ತಿಯಿಂದಲೇ ಅರ್ಜಿ ದಾಖಲಿಸಲಾಗಿದೆ. ಅಗತ್ಯವಾದರೆ ಈ ಬಗ್ಗೆ ತನಿಖೆ ನಡೆಸಬಹುದು. ಸ್ವ-ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿರುವುದು ಸಾಬೀತಾದರೆ 50 ಸಾವಿರ ದಂಡ ಬೇಕಾದರೂ ಪಾವತಿಸಲಾಗುತ್ತದೆ ಎಂದು ತಿಳಿಸಿದರು.

ಅದರಿಂದ ನ್ಯಾಯಪೀಠ, ಅರ್ಜಿದಾರರೇ 50 ಸಾವಿರ ದಂಡ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ದಂಡ ಮೊತ್ತವನ್ನು 25 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಆದೇಶಿಸಿತು.
 

Follow Us:
Download App:
  • android
  • ios