- ಕೇಂದ್ರ, ರಾಜ್ಯ ಸರ್ಕಾರಿ ನೌಕರಿಯಿಂದ ವಜಾ ಆದವರು ಕಡ್ಡಾಯ ನಿವೃತ್ತರಿಗೆ ಅನ್ವಯ - ಗ್ರಾಪಂ, ತಾಪಂ, ಜಿಪಂ ಸದಸ್ಯತ್ವಕ್ಕೆ ಕಠಿಣ ಅರ್ಹತೆ - ವಿಧಾನಸಭೆಯಲ್ಲಿ ಹೊಸ ಮಸೂದೆ ಮಂಡನೆ

ಬೆಂಗಳೂರು(ಮಾ.22): ಕೇಂದ್ರ, ರಾಜ್ಯ ಸರ್ಕಾರ, ಸಹಕಾರ ಸಂಘ ಅಥವಾ ಸಂಸ್ಥೆಯ ಸೇವೆಯಿಂದ ಕಡ್ಡಾಯ ನಿವೃತ್ತಿ ಹಾಗೂ ವಜಾಗೊಂಡಿರುವ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಅನರ್ಹರನ್ನಾಗಿ ಮಾಡುವುದೂ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

Add Asianetnews Kannada as a Preferred SourcegooglePreferred

ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಕ್ಷೇತ್ರಕ್ಕೆ ಜನಸಂಖ್ಯೆ ಮಿತಿ ನಿಗದಿ ಮಾಡುವ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಅರ್ಹತೆಗಳನ್ನು ಬಿಗಿಗೊಳಿಸುವ ಮಹತ್ವದ ತಿದ್ದುಪಡಿ ಕಾಯಿದೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು.

PM Modi to visit Kashmir ಏ.24 ರಂದು ಮೋದಿ ಜಮ್ಮು-ಕಾಶ್ಮೀರ ಭೇಟಿ ಸಾಧ್ಯತೆ!

ತಿದ್ದುಪಡಿ ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿ ಅಥವಾ ವಜಾಗೊಂಡಿರುವ ವ್ಯಕ್ತಿ, ಸಹಕಾರ ಸಂಘ-ಸಂಸ್ಥೆಯ ಸೇವೆಯಿಂದ ಅಥವಾ ಅಧ್ಯಕ್ಷ- ಸದಸ್ಯತ್ವ ಸ್ಥಾನದಿಂದ ತೆಗೆದುಹಾಕಲಾಗಿರುವ ವ್ಯಕ್ತಿಯು ಮೂರು ಹಂತದ ಪಂಚಾಯ್ತಿ ವ್ಯವಸ್ಥೆಯ ಸದಸ್ಯರಾಗಲು ಅನರ್ಹರು ಎಂದು ಸ್ಪಷ್ಟಪಡಿಸಲಾಗಿದೆ.

ಉಳಿದಂತೆ ತಿದ್ದುಪಡಿಯಿಂದಾಗಿ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುವುದು. ಸಂಬಂಧಪಟ್ಟನಗರಸಭೆ, ಪಾಲಿಕೆ ಅಥವಾ ಆಯಾ ಜಿಲ್ಲಾ ಕೇಂದ್ರದ ಪೌರಾಡಳಿತದ ಮೇಯರ್‌/ಅಧ್ಯಕ್ಷರು ಜಿಲ್ಲಾ ಯೋಜನಾ ಸಮಿತಿಯ ಉಪಾಧ್ಯಕ್ಷರಾಗಿರಲಿದ್ದಾರೆ ಎಂದು ಪ್ರಸ್ತಾಪಿಸಲಾಗಿದೆ.

ZP-TP Election: ಆಯೋಗದ ವರದಿ ಬಳಿಕ ಜಿಪಂ, ತಾಪಂ ಚುನಾವಣೆ: ಈಶ್ವರಪ್ಪ

ತಾಲೂಕು, ಜಿಲ್ಲಾ ಪಂಚಾಯ್ತಿಗೆ ಜನಸಂಖ್ಯೆ ಮಿತಿ ನಿಗದಿ:
ಇದಲ್ಲದೆ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಿಗೆ ಜನಸಂಖ್ಯೆಯ ಮಿತಿ ನಿಗದಿಪಡಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. 2 ಲಕ್ಷಕ್ಕಿಂತ ಹೆಚ್ಚು ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 12 ಸಾವಿರಕ್ಕೆ ಕಡಿಮೆಯಿಲ್ಲದ ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯ, 1ರಿಂದ 2 ಲಕ್ಷ ನಡುವಿನ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 10 ಸಾವಿರಕ್ಕೆ ಕಡಿಮೆಯಿಲ್ಲದ ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯ, 50 ಸಾವಿರದಿಂದ 1 ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಕನಿಷ್ಠ ಒಂಬತ್ತು ಚುನಾಯಿತ ಸದಸ್ಯರಿರಬೇಕು. 50 ಸಾವಿರಕ್ಕಿಂತ ಕಡಿಮೆ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಕನಿಷ್ಠ ಏಳು ಚುನಾಯಿತ ಸದಸ್ಯರಿರಬೇಕು ಎಂದು ಹೇಳಲಾಗಿದೆ.

ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಪ್ರತಿ ತಾಲೂಕಿನಿಂದ 35ರಿಂದ 45 ಸಾವಿರದ ನಡುವಣ ಜನಸಂಖ್ಯೆ ಅಥವಾ ಅದರ ಭಾಗಕ್ಕೆ ಒಬ್ಬ ಸದಸ್ಯ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂದರ್ಭದಲ್ಲಿ ಜನಸಂಖ್ಯೆಯ ಪ್ರತಿ 30 ಸಾವಿರಕ್ಕೆ ಅಥವಾ ಅದರ ಭಾಗಕ್ಕೆ ಒಬ್ಬರು ಸದಸ್ಯ, ಕೊಡಗು ಜಿಲ್ಲೆಯಲ್ಲಿ ಪ್ರತಿ 18 ಸಾವಿರ ಜನಸಂಖ್ಯೆ ಅಥವಾ ಅದರ ಭಾಗಕ್ಕೆ ಒಬ್ಬರು ಸದಸ್ಯರಿರಬೇಕು ಎಂದು ತಿಳಿಸಲಾಗಿದೆ.

ದ.ಕ. ಜಿಲ್ಲೆಯ ಮೂವರಿಗೆ ನರೇಗಾ ರಾಜ್ಯ ಪುರಸ್ಕಾರ
ಕಡಬ ತಾಲೂಕಿನ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್‌ ರಾಜ್‌ ಕೆ. ಸೇರಿದಂತೆ ದ.ಕ.ಜಿಲ್ಲೆಯ ಮೂವರಿಗೆ ನರೇಗಾ ರಾಜ್ಯ ಮಟ್ಟದ ಪುರಸ್ಕಾರ ಲಭಿಸಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 2021- 22 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿ ಕಾಯಕಬಂದು ಮತ್ತು ವೈಯಕ್ತಿಕ ಫಲಾನುಭವಿಗಳಿಗೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ನರೇಗಾ ಹಬ್ಬ- 2022 ರಲ್ಲಿ ಪುರಸ್ಕಾರ ನೀಡಿ ಗೌರವಿಸಲಾಯಿತು.