ಕಾಡು ಪ್ರಾಣಿಯಿಂದ ಹಸು ಸತ್ತರೆ 75,000 ರು. ಪರಿಹಾರ
ವನ್ಯಜೀವಿ ಸಂಘರ್ಷದಿಂದ ಹಸು, ಎಮ್ಮೆ , ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ನೀಡುವ ಪರಿಹಾರ ಹಣವನ್ನು 75 ಸಾವಿರ ರು.ಗಳಿಗೆ ಏರಿಕೆ ಮಾಡಲಾಗಿದೆ. ಕುರಿ, ಮೇಕೆಗಳಿಗೂ ಪರಿಹಾರ ನೀಡಲಾಗುತ್ತದೆ.
ಬೆಂಗಳೂರು (ಏ.22): ಮಾನವ-ವನ್ಯಜೀವಿ ಸಂಘರ್ಷದಿಂದ ಹಸು, ಎಮ್ಮೆ , ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ನೀಡುವ ಪರಿಹಾರ ಹಣವನ್ನು 75 ಸಾವಿರ ರು.ಗಳಿಗೆ, ಕುರಿ, ಮೇಕೆ ಮೃತಪಟ್ಟಲ್ಲಿ ಪರಿಹಾರ ಮೊತ್ತವನ್ನು 10 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಈ ಸಂಬಂಧ ಸರ್ಕಾರದಿಂದ ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ. ವನ್ಯಜೀವಿಗಳಿಂದ ಜಾನುವಾರುಗಳ ಹತ್ಯೆಯಾದಲ್ಲಿ ಈವರೆಗೆ 10 ಸಾವಿರ ರು. ಪರಿಹಾರ ನೀಡಲಾಗುತ್ತಿತ್ತು. ಇದನ್ನು ಈಗ 75 ಸಾವಿರ ರು.ಗೆ ಹೆಚ್ಚಿಸಲಾಗಿದೆ. ತಕ್ಷಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 20 ಸಾವಿರ ರು. ಬಿಡುಗಡೆಗೆ ಅವಕಾಶವಿದೆ. ನಂತರ ಸ್ಥಳೀಯ ಪಶು ವೈದ್ಯಾಧಿಕಾರಿಗಳು ಸತ್ತ ಸಾಕು ಪ್ರಾಣಿಯ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದ ನಂತರ ಉಳಿದ ಮೊತ್ತ (ಗರಿಷ್ಠ 75000 ರು. ಮಿತಿಗೆ ಒಳಪಟ್ಟು ) ಪಾವತಿಸಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕ ಬಜೆಟ್; ಗೋ ಹತ್ಯೆ ನಿಷೇಧ ಕಾಯ್ದೆ ನಂತರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ
ಇನ್ನು ಕುರಿ, ಮೇಕೆ ಮೃತಪಟ್ಟಲ್ಲಿ ಈವರೆಗೆ 5,000 ರು. ಪರಿಹಾರ ಧನ ನೀಡಲಾಗುತ್ತಿತ್ತು. ಇದನ್ನು 10 ಸಾವಿರ ರು.ಗಳಿಗೆ ಹೆಚ್ಚಿಸಿದ್ದು, ಇದರಿಂದ ರೈತರು ಮತ್ತು ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.