ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಪ್ರಯುಕ್ತ ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ನಗರದಲ್ಲಿ ಗುರುವಾರ ‘ಶ್ರಮಿಕ ದಿವಸ-ವಿಶೇಷ ಸಂಜೆ ಮತ್ತು ಭೋಜನ’ ಕಾರ್ಯಕ್ರಮ ಆಯೋಜಿಸಿದ್ದರು.

ಬೆಂಗಳೂರು (ಮೇ.3) : ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಪ್ರಯುಕ್ತ ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ನಗರದಲ್ಲಿ ಗುರುವಾರ ‘ಶ್ರಮಿಕ ದಿವಸ-ವಿಶೇಷ ಸಂಜೆ ಮತ್ತು ಭೋಜನ’ ಕಾರ್ಯಕ್ರಮ ಆಯೋಜಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕಾರ್ಯಕ್ರಮದಲ್ಲಿ ಕಾರ್ಮಿಕರು, ಕೈಗಾರಿಕೋದ್ಯಮಿಗಳು, ಅವರ ಕುಟುಂಬಗಳು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಲಾಯಿತು.

ಈ ವೇಳೆ ಮಾತನಾಡಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ನಾನು ಕರ್ನಾಟಕ ಪ್ರಭಾರಿಯಾಗಿದ್ದ ದಿನಗಳಿಂದಲೂ ಲೆಹರ್‌ ಸಿಂಗ್‌ ಅವರ ಪರಿಚಯವಿದೆ. ಅವರು ಯಾವಾಗಲೂ ಅರ್ಥಪೂರ್ಣ ಉದ್ದೇಶಗಳಿಗಾಗಿ ಕೆಲಸ ಮಾಡಿದ್ದಾರೆ. ನಾನೂ ಕೂಡ ಕಾರ್ಮಿಕ ಹಿನ್ನೆಲೆಯಿಂದ ಬಂದಿದ್ದೇನೆ. ಎಲ್ಲಾ ಉದ್ಯಮಿಗಳ ಗುರಿಯಲ್ಲಿ ರಾಷ್ಟ್ರ, ಕೈಗಾರಿಕೆ ಮತ್ತು ಕಾರ್ಮಿಕರ ಹಿತಾಸಕ್ತಿಗಳೂ ಒಳಗೊಂಡಿರಬೇಕು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕರ್ನಾಟಕದ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯ ಸಮುದಾಯದವರ ಕೊಡುಗೆಗಳನ್ನು ಶ್ಲಾಘಿಸಿದರು. ಲೆಹರ್‌ ಸಿಂಗ್‌ ಅವರು ಕೇವಲ ಹಿರಿಯ ನಾಯಕರಲ್ಲ. ಅವರಿಗೆ ಸಮಗ್ರ ದೃಷ್ಟಿಕೋನ ಮತ್ತು ಸಾರ್ವಜನಿಕ ಸೇವೆಯಲ್ಲಿ ಬದ್ಧತೆ ಇದೆ. ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರೇ ಆಗಿರುವ ಅವರು ಯಾವಾಗಲೂ ಸಮಾಜದ ಹಿತದೃಷ್ಟಿಯಿಂದ ನಿರಂತರ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಾರ್ಮಿಕರ ದಿನದಂದು ತನ್ನ ಸಿಬ್ಬಂದಿಯನ್ನು ಉಚಿತವಾಗಿ ಬೆಂಗಳೂರು ವಿಮಾನ ಹತ್ತಿಸಿದ ಪುತ್ತೂರಿನ ಉದ್ಯಮಿ!

ಲೆಹರ್‌ ಸಿಂಗ್‌ ಮಾತನಾಡಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ಪ್ರಯಾಸ್‌ ಎಂಬ ತತ್ವವನ್ನು ನೀಡಿದ್ದಾರೆ. ಇಂದು ನಾವು ಪ್ರಯಾಸ್‌ ಅನ್ನು ಗೌರವಿಸಲು ಇಲ್ಲಿ ಸೇರಿದ್ದೇವೆ. ಪ್ರಗತಿಗೆ ಕಾರಣವಾಗಿರುವ ಕಾರ್ಮಿಕರು, ಅವರ ಕುಟುಂಬಗಳು ಹಾಗೂ ಸಮುದಾಯಗಳ ಕಠಿಣ ಪರಿಶ್ರಮವನ್ನು ನಾವು ಸದಾ ಗೌರವಿಸಬೇಕು ಎಂದರು.

ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯ ವೈ.ನಾರಾಯಣಸ್ವಾಮಿ, ಮಾಜಿ ಸಚಿವ ಶಂಕರ್‌ ಪಾಟೀಲ ಮುನೇನಕೊಪ್ಪ, ಉದ್ಯಮಿಗಳಾದ ಇರ್ಫಾನ್‌ ರಜಾಕ್‌, ಜೆ.ಸಿ.ಶರ್ಮಾ, ಸಮಾಜ ಸೇವಕರು ಹಾಗೂ ಮುಖಂಡರು ಉಪಸ್ಥಿತರಿದ್ದರು