ಬಿಡುಗಡೆಯಾದ ಅನುದಾನ ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂಬುದಾಗಿ  ಷರತ್ತು ವಿಧಿಸಿದ ಸರ್ಕಾರ

ಬೆಂಗಳೂರು(ಆ.06): ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯ ನಿಧಿಗಾಗಿ 800 ಕೋಟಿ ರು. ಮತ್ತು ಇಂಧನ ವೆಚ್ಚವಾಗಿ 259.27 ಕೋಟಿ ರು. ಸೇರಿದಂತೆ ಒಟ್ಟು 1,059 ಕೋಟಿ ರು.ಗಳನ್ನು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ. ಈ ಹೆಚ್ಚುವರಿ ಅನುದಾನವನ್ನು ಸರ್ಕಾರವು 2022-23ನೇ ಸಾಲಿನ ಪೂರಕ ಅಂದಾಜುಗಳ ಕಂತಿನಲ್ಲಿ ಒದಗಿಸುವ ಮೂಲಕ ಸರಿದೂಗಿಸುವುದಾಗಿ ತಿಳಿಸಿದೆ. ಬಿಡುಗಡೆಯಾದ ಅನುದಾನವನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂಬುದಾಗಿ ಸರ್ಕಾರ ಷರತ್ತು ವಿಧಿಸಿದೆ. ಇದರಿಂದ ಹಲವು ತಿಂಗಳುಗಳಿಂದ ಸಾವಿರಾರು ನೌಕರರ ಭವಿಷ್ಯ ನಿಧಿ ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ಗೊಂದಲದಲ್ಲಿದ್ದ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಡುಗಡೆ ಮಾಡಲಾದ ಅನುದಾನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಕ್ಕೆ 330 ಕೋಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ 279 ಕೋಟಿ ರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ(ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ)320 ಕೋಟಿ ರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಕ್ಕೆ 130 ಕೋಟಿ ರು.ಗಳನ್ನು ಹಂಚಿಕೆ ಮಾಡಲಾಗಿದೆ.

KSRTC Transfer Scam; ಶ್ರೀರಾಮುಲು ವಿರುದ್ಧ ಬಹುದೊಡ್ಡ ಭ್ರಷ್ಟಾಚಾರ ಆರೋಪ!

ಸಾರಿಗೆ ನಿಗಮಗಳ ನೌಕರರ ಭವಿಷ್ಯ ನಿಧಿ ಮೊತ್ತ ನಿಗದಿತ ಅವಧಿಯೊಳಗೆ ಪಾವತಿಯಾಗಿಲ್ಲ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಚೇರಿಯಿಂದ ಗಂಭೀರವಾದ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಜತೆಗೆ, ನಿಗಮದ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲೂ ಅವಕಾಶ ಇದೆ ಎಂದು ನಾಲ್ಕು ನಿಗಮಗಳು ಭವಿಷ್ಯನಿಧಿ ಬಾಕಿ ಮೊತ್ತ ಪಾವತಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಹಣಕಾಸಿನ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ಭವಿಷ್ಯ ನಿಧಿ ಮತ್ತು ಇಂಧನಕ್ಕೆ ಹಣ ಬಿಡುಗಡೆ ಮಾಡಿರುವ ವಿವರ (ಕೋಟಿ ರು.ಗಳಲ್ಲಿ)

ನಿಗಮ ಭವಿಷ್ಯ ನಿಧಿ ಡೀಸೆಲ್‌ ಒಟ್ಟು

ಕೆಎಸ್‌ಆರ್‌ಟಿಸಿ 200 130 330
ಬಿಎಂಟಿಸಿ 250 29.27 279.27
ಎನ್‌ಡಬ್ಲುಕೆಆರ್‌ಟಿಸಿ 250 70 320
ಕೆಕೆಆರ್‌ಟಿಸಿ 100 30 130
ಒಟ್ಟು 800 259.27 1,059.27.