* ಕರ್ನಾಟಕದ ಜನತೆಗೆ ಸಿಹಿಸುದ್ದಿ * ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ರದ್ದು* ಜನವರಿ 31 ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ಇರಲ್ಲ

ಬೆಂಗಳೂರು, (ಜ.29): ಕೊರೋನಾ ಸೋಂಕು(Coronavirus) ನಿಯಂತ್ರಣಕ್ಕೆ ಕರ್ನಾಟಕದಲ್ಲಿ(Karnataka) ಜಾರಿಗೆ ತರಲಾಗಿದ್ದ ನೈಟ್​ ಕರ್ಫ್ಯೂ (Night Curfew) ರದ್ದು ಮಾಡಲಾಗಿದೆ. ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ಇರಲ್ಲ. ಈ ಬಗ್ಗೆ ಕಂದಾಯ ಸಚಿವ ಆರ್​.ಅಶೋಕ್ (R Ashok) ಮಾಹಿತಿ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಕೊರೋನಾ ಕಠಿಣ ನಿಯಮ ಪರಿಶೀಲನೆ ಸಂಬಂಧ ರಾಜ್ಯ ಸರ್ಕಾರ ಇಂದು(ಶನಿವಾರ) ತಜ್ಞರ ಸಭೆ ನಡೆಸಿತು. ಈ ಸಭೆ ಬಳಿಕ ಮಾಧ್ಯಮಗಳಿಗೆ ಸಚಿವ ಅಶೋಕ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ವಿಧಿಸಲಾಗಿರುವ ನೈಟ್​ ಕರ್ಫ್ಯೂ ಜನವರಿ 31 ರಿಂದ ಇರುವುದಿಲ್ಲ ಎಂದು ಘೋಷಣೆ ಮಾಡಿದರು.

Covid Crisis: ಬೆಂಗ್ಳೂರಲ್ಲಿ ಕೊರೋನಾ ಸೋಂಕು ಇಳಿಕೆ..!

ಹೋಟೆಲ್, ರೆಸ್ಟೋರೆಂಟ್, ಪಬ್ ಬಾರ್‌ಗಳಿಗೆ ಸಂಪೂರ್ಣವಾಗಿ ತೆರೆಯಲು ಅನುಮತಿ ನೀಡಲಾಗಿದೆ. ಆದ್ರೆ, ಸಿನೆಮಾ, ಮಲ್ಟಿಪ್ಲೆಕ್ಸ್, ಥಿಯೇಟರ್ ಗಳು, ರಂಗಮಂದಿರಗಳು, ಆಡಿಟೋರಿಯಂ ಗಳು ಮತ್ತು ಇತರ ಸ್ಥಳಗಳಲ್ಲಿ ಶೇ. 50ರ ಆಸನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಇನ್ನು ಕಚೇರಿಗಳು ಸಹ ತೆರೆಯಲು ಅನುಮತಿ ನೀಡಲಾಗಿದೆ. ದೇವಾಲಯಗಳಲ್ಲಿ ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗುವುದು. ಶೇ. 50ರ ಸಾಮರ್ಥ್ಯದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು. ಜಾತ್ರೆ, ಧರಣಿ, ರ್ಯಾಲಿ, ಪ್ರತಿಭಟನೆಗಳಿಗೆ ನಿರ್ಬಂಧ ಹೇರಲಾಗಿದೆ. ಜಿಮ್, ಈಜುಕೊಳ, ಸ್ಪೋಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ 5೦%ರ ನಿಯಮ ಮುಂದುವರೆಯಲಿದೆ.

ವಿವಾಹ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞರ ಮಾಹಿತಿ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರು ಹೇಳಿದ ಪ್ರಕಾರ ಈ ಆದೇಶವನ್ನು ಹೊರಡಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಶಾಲೆಗಳು ಪುನಾರಂಭ
ಬೆಂಗಳೂರು ಸೇರಿದಂತೆ ಕೋವಿಡ್ ಹೆಚ್ಚಳವಿದ್ದ ಜಿಲ್ಲೆಗಳಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳ ಭೌತಿಕ ತರಗತಿಗಳು ಕೂಡ ಸೋಮವಾರ (ಜ.31)ದಂದು ಪುನಾರಂಭವಾಗಲಿದೆ. ಒಂದು ವೇಳೆ ಶಾಲೆಯ ಯಾವ ತರಗತಿಯ ಮಕ್ಕಳಿಗೆ ಕೋವಿಡ್ ಬಂದಲ್ಲಿ ಆ ತರಗತಿ ಮಾತ್ರ ಮುಚ್ಚಲಾಗುತ್ತದೆ. ಆ ತರಗತಿಯ ಎಲ್ಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ,ಆಯಾ ನಿರ್ದಿಷ್ಟ ತರಗತಿಯನ್ನು ಆನ್‌ಲೈನ್ ಮೋಡ್‌ಗೆ ವರ್ಗಾಯಿಸಲಾಗುತ್ತದೆ. ಶಾಲೆಗಳು ಆರಂಭವಾದ ನಂತರ ಕೋವಿಡ್ ಪಾಸಿಟಿವ್ ಕಂಡುಬಂದರೆ ಶಾಲೆಗಳನ್ನು ಮುಚ್ಚುವ ತೀರ್ಮಾನ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ತಿಳಿಸಿದರು.