ರಾಜ್ಯ ಸರ್ಕಾರವು ದಲಿತ ನಿಗಮಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಶೇ.25ರಷ್ಟನ್ನು ಮಾತ್ರ ಬಿಡುಗಡೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ನಿಗಮಗಳ ಅನುದಾನ ಕಡಿತ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ಫೆ.24): ಗ್ಯಾರಂಟಿಗಾಗಿ ದಲಿತ ನಿಗಮಗಳ ಹಣಕ್ಕೂ ಸರ್ಕಾರ ಕತ್ತರಿ ಹಾಕಿದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ದಲಿತ ನಿಗಮಗಳಿಗೆ ಹಂಚಿಕೆಯಾದ ಹಣದಲ್ಲಿ ಶೇ.25ರಷ್ಟನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. 6 ನಿಗಮ, 2 ಆಯೋಗಗಳಿಗೆ ₹332 ಕೋಟಿ ಹಂಚಿಕೆಯಾಗಿತ್ತು. ಆದರೆ, ಇದರಲ್ಲಿ ಬಿಡುಗಡೆ ಮಾಡಿದ್ದು ಕೇವಲ 88.78 ಕೋಟಿ ರೂಪಾಯಿ ಮಾತ್ರ. 2 ಆಯೋಗಗಳಿಗೆ ಮಾತ್ರ ನಿಗದಿಯಷ್ಟು ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಫಲ ಸಿಕ್ಕಿಲ್ಲ ಗ್ಯಾರಂಟಿ ಯೋಜನೆಗಳಿಗೆ ಆದಾಯ ಹೊಂದಿಸಲು ನಿಗಮಗಳಿಗೆ ಹಂಚಿಕೆಯಾದ ಅನುದಾನಕ್ಕೆ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ.
ಎಸ್ ಸಿಎಸ್ಪಿ/ಟಿಎಸ್ಪಿ ಅನುದಾನವನ್ನು ಗ್ಯಾರಂಟಿಗೆ ನೀಡಿದ್ದರಿಂದ ಕಲ್ಯಾಣ ಯೋಜನೆಗಿಲ್ವಾ ಹಣ ಎನ್ನುವ ಪ್ರಶ್ನೆ ಎದ್ದಿದೆ. ಪರಿಶಿಷ್ಟರ ವಿವಿಧ ಜಾತಿವಾರು 6 ನಿಗಮ ಮತ್ತು 2 ಆಯೋಗಗಳಿಗೆ ಹಂಚಿಕೆಯಾದ ಶೇ.25ರಷ್ಟು ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಅನುದಾನ ಕೊರತೆ ಹಿನ್ನಲೆ ನಿಗಮ ಹಾಗೂ ಆಯೋಗಗಳ ಆರ್ಥಿಕ ಸಾಧನೆ ಕೇವಲ ಶೇ. 25.68ರಷ್ಟು ಮಾತ್ರ ದಾಖಲಾಗಿದೆ.
ಗಂಗಾ ಕಲ್ಯಾಣ, ಐರಾವತ ವಾಹನ, ಭೂ ಒಡೆತನ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣಕ್ಕೂ ಕತ್ತರಿ ಬಿದ್ದಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗ, ಪ್ರೇರಣಾ (ಮೈಕ್ರೋ ಫೈನಾನ್ಸ್) ಕಿರು ಸಾಲ, ಸ್ವ ಉದ್ಯೋಗಕ್ಕಾಗಿ ಆರ್ಥಿಕ ನೆರವು ಯೋಜನೆಗಳ ಫಲದಿಂದ ಪರಿಶಿಷ್ಟರು ವಂಚಿತರಾಗಿದ್ದಾರೆ.
ಯಾವ ನಿಗಮಕ್ಕೆ ಎಷ್ಟು: ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು 100 ಕೋಟಿ ಬಿಡುಗಡೆಯಾಗಿರೋದು ಕೇವಲ 25 ಕೋಟಿ ರೂಪಾಯಿ. ತಾಂಡಾ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು 60 ಕೋಟಿ ಬಿಡುಗಡೆಯಾಗಿರೋದು ಕೇವಲ 15 ಕೋಟಿ ರೂಪಾಯಿ. ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ
ಹಂಚಿಕೆಯಾಗಿದ್ದು 35 ಕೋಟಿ ಬಿಡುಗಡೆಯಾಗಿರೋದು ಕೇವಲ 8.75 ಕೋಟಿ ರೂಪಾಯಿ. ಬೋವಿ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು 55 ಕೋಟಿ ಬಿಡುಗಡೆಯಾಗಿರೋದು ಕೇವಲ 13.75 ಕೋಟಿ ರೂಪಾಯಿ. ಆದಿ ಜಾಂಭವ ಅಭಿವೃದ್ಧಿ ನಿಗಮಕ್ಕ ಹಂಚಿಕೆಯಾಗಿದ್ದು 50 ಕೋಟಿ ಬಿಡುಗಡೆಯಾಗಿರೋದು ಕೇವಲ 12.5 ಕೋಟಿ ರೂಪಾಯಿ. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು 25 ಕೋಟಿ, ಬಿಡುಗಡೆಯಾಗಿದ್ದು ಕೇವಲ 6.25 ಕೋಟಿ ರೂಪಾಯಿ ಮಾತ್ರ ಎಂದು ದಾಖಲೆಗಳು ತೋರಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿ, ಮಂಡ್ಯದಲ್ಲಿ ಎಸ್ಸಿ, ಎಸ್ಟಿ ಹಣ ದುರುಪಯೋಗ ಬಹಿರಂಗ
ಆದರೆ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ 3.75 ಕೋಟಿ ಹಂಚಿಕೆಯಾಗಿದ್ದು, ಅಷ್ಟೂ ಹಣ ಬಿಡುಗಡೆಯಾಗಿದೆ. ಜಾತಿ ಮತ್ತು ಬುಡಕಟ್ಟು ಆಯೋಗಕ್ಕೆ ಹಂಚಿಕೆಯಾಗಿರುವ 3.75 ಕೋಟಿ ರೂಪಾಯಿ ಹಣದಲ್ಲಿ ಅಷ್ಟೂ ಹಣ ಬಿಡುಗಡೆಯಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಎಸ್ಸಿಪಿ/ಟಿಎಸ್ಪಿ ಹಣ ದುರುಪಯೋಗ; ಪರಿಶೀಲನೆಗೆ ಜಿಲ್ಲಾಧಿಕಾರಿ ಆದೇಶ

