ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಪ್ರಕರಣದ ಬೆನ್ನಲ್ಲೇ  ಈ ಪ್ರಕರಣ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

ಬೆಂಗಳೂರು (ಅ.29): ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಪ್ರಕರಣದ ಬೆನ್ನಲ್ಲೇ ಹುಲಿ ಉಗುರು ಇಟ್ಟುಕೊಂಡವರಲ್ಲಿ ಆತಂಕ ಹೆಚ್ಚಿದೆ. ಸಂತೋಷ ಪ್ರಕರಣದ ನಂತರ ಅನಾಮಧೇಯ ಕಾಲ್‌ಗಳಿಗೆ ಉತ್ತರಿಸೋದೆ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಅರಣ್ಯಾಧಿಕಾರಿಗಳಿಗೆ ಸಾರ್ವಜನಿಕರು ಪ್ರಶ್ನೆ ಮೇಲೆ‌ ಪ್ರಶ್ನೆ ಮಾಡುತ್ತಿದ್ದಾರೆ. 

ಹುಲಿ ಉಗುರು ಹಿಂತಿರುಗಿಸಲು ನಿಯಮವೇನು? 2003ಕ್ಕಿಂತ ಹಳೆಯದಾದ್ರೆ ನಮ್ಮ ಬಳಿ ಉಳಿಸಿಕೊಳ್ಳುವುದು ಹೇಗೆ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನ ಸಾರ್ವಜನಿಕರು ಅಧಿಕಾರಿಗಳ ಮುಂದಿಡುತ್ತಿದ್ದಾರೆ. ಅರಣ್ಯ ಇಲಾಖೆಯ ಟೂಲ್ ಫ್ರೀ ನಂಬರ್ 1926 ಗೆ ಸರಣಿ ಕಾಲ್ ಗಳು ಬರುತ್ತಿದೆ.

ಹೆಸರು ಹೇಳದೇ ವನ್ಯಜೀವಿ ಗಳ ಉತ್ಪನಗಳ ಬಗ್ಗೆ  ಸಾರ್ವಜನಿಕರು ಮಾಹಿತಿ ಕೇಳುತ್ತಿದ್ದಾರೆ. ಈ ಹಿಂದೆ 2003 ರಲ್ಲಿ ಹಿಂತಿರುಗಿಸಲು ಇಲಾಖೆ ಅನುಮತಿ ನೀಡಿತ್ತು. ನಂತರದ ದಿನದಲ್ಲಿ ಈ ಅನುಮತಿಯನ್ನು ಸರ್ಕಾರ ಹಿಂಪಡೆದಿತ್ತು. ಅವಕಾಶ ನೀಡಿದಾಗ ಇಲಾಖೆಗೆ ಹಿಂತಿರುಗಿಸದೇ ತಮ್ಮ‌ಬಳಿಯಲ್ಲೆ ಇಟ್ಟುಕೊಂಡಿದ್ದ ಕೆಲವರು ಇದೀಗ ಸಂತೋಷ್ ಬಂಧನ ನಂತರ ಬೆಚ್ಚಿಬಿದ್ದು ಅರಣ್ಯ ಇಲಾಖೆ ಕದ ತಟ್ಟುತ್ತಿದ್ದಾರೆ.

ಪಿತೂರಿಯಿಂದ ವರ್ತೂರು ಬಂಧನ, ಅರಣ್ಯ ಇಲಾಖೆ ಎಡವಟ್ಟು ಎಳೆಎಳೆಯಾಗಿ ಬಿಚ್ಚಿಟ್ಟ ಸಂತೋಷ್‌ ಪರ ವಕೀಲ

ಚಿನ್ನದ ಅಂಗಡಿ ಮೇಲೆ ದಾಳಿ, ಶರವಣ ಖಂಡನೆ
ಹುಲಿ ಉಗುರು ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಭರಣ ಅಂಗಡಿಗಳ ಮೇಲೆ ದಾಳಿ ನಡೆಸಿ ಅಮಾಯಕ ಚಿನ್ನಾಭರಣ ವರ್ತಕರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಟಿ.ಎ.ಶರವಣ ಎಚ್ಚರಿಕೆ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯವನ್ನು ಬರಗಾಲ ಸೇರಿ ವಿವಿಧ ಸಮಸ್ಯೆಗಳು ಕಾಡುತ್ತಿದ್ದರೂ ಸರ್ಕಾರ ಅದರ ಕಡೆಗೆ ಗಮನ ನೀಡುತ್ತಿಲ್ಲ. ಈ ನಡುವೆ ಹುಲಿ ಉಗುರು ಹಾಗೂ ಚರ್ಮ, ಜಿಂಕೆ ಕೊಂಬು ಸೇರಿ ವಿವಿಧ ವನ್ಯಜೀವಿ ಉತ್ಪನ್ನಗಳ ಶೋಧಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ವಿಪರೀತವಾಗಿ ವರ್ತಿಸುತ್ತಿದ್ದಾರೆ. ಸಿಕ್ಕ ಹುಲಿ ಉಗುರಿನ ಅಸಲಿಯತ್ತಿನ ಬಗ್ಗೆ ಎಫ್ಎಸ್ಎಲ್ ವರದಿ ನೀಡುವ ಮೊದಲೇ ಕಾನೂನು ಕ್ರಮ ಕೈಗೊಳ್ಳುತ್ತಿರುವುದು ವಿಪರ್ಯಾಸ. ಇದೀಗ ಚಿನ್ನಾಭರಣ ವರ್ತಕರನ್ನೂ ಹಿಂಸಿಸಲು ಆರಂಭಿಸಿದ್ದು, ತುಮಕೂರಿನಲ್ಲಿ ಅಂಗಡಿ ಸಿಬ್ಬಂದಿ ಮೇಲೆ ಬಲವಂತದ ಕ್ರಮ ಜರುಗಿಸಿದ್ದು ಸರಿಯಲ್ಲ’ ಎಂದು ಖಂಡಿಸಿದರು.

ಅರಣ್ಯ ಇಲಾಖೆ ವಿರುದ್ಧ ಲೋಕಾಯುಕ್ತಕ್ಕೆ ದೂರು, ನವಿಲು ಗರಿ ಇದ್ದರೂ ಅಪರಾಧ, ನಿದ್ದೆಯಲ್ಲಿದ್ದ ಅಧಿಕಾರಿಗಳು

ಇಷ್ಟು ವರ್ಷ ಯಾವುದೇ ಜಾಗೃತಿ ಮೂಡಿಸದ ಇವರು ಹುಲಿಗಿಂತ ವೇಗವಾಗಿ ದಾಳಿ ಮಾಡಿ, ಭೀತಿ ಮೂಡಿಸುತ್ತಿದ್ದಾರೆ. ಹುಲಿ ಉಗುರು ಸೇರಿ ವಿವಿಧ ವ್ಯನ್ಯಜೀವಿ ಉತ್ಪನ್ನಗಳನ್ನು ಹಿಂದಿರುಗಿಸಲು ಸರ್ಕಾರ ಕಾಲಾವಕಾಶ ನೀಡಬೇಕು. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್, ಸಿಂಥೆಟಿಕ್‌ ಹಾಗೂ ಹಸುವಿನ ಕೊಂಬಿನಲ್ಲಿ ರೂಪಿಸಿ ಹುಲಿ ಉಗುರು ಎಂದು ಮಾರಲಾಗುತ್ತಿದೆ. ಅಸಲಿ ಎಂದು ದೃಢಪಟ್ಟ ಬಳಿಕ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಹುಲಿ ಬಳಿಯಿಂದ ಅದರ ಉಗುರನ್ನು ಪಡೆಯಲು ಸಾಧ್ಯವಿದೆಯೆ? ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಉಗುರಿಗೆ ಆಭರಣದಿಂದ ಪೆಂಡೆಂಟ್ ಮಾಡಿಸಿಕೊಳ್ಳುತ್ತಾರೆ. ಅಂತಹವರಿಗೂ ಇಲಾಖೆ ಅಧಿಕಾರಿಗಳು ಬೆದರಿಕೆ ಒಡ್ಡುತ್ತಿದ್ದಾರೆ. ನಾನು ಕೂಡಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಆನೆ ಬಾಲದ ಕೂದಲು ಮಾದರಿಯ ಉಂಗುರ ಧರಿಸುತ್ತೇನೆ. ಕಪ್ಪು ಬಣ್ಣದ ಇದನ್ನು ಧರಿಸಿದರೆ ಕೆಟ್ಟ ದೃಷ್ಟಿ ಬೀಳುವುದಿಲ್ಲವೆಂಬ ನಂಬಿಕೆಯಿದೆ ಎಂದು ಶರವಣ ಹೇಳಿದರು.