ರೈತರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಪುಂಡಾನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

Add Asianetnews Kannada as a Preferred SourcegooglePreferred

ರಾಮನಗರ (ಜೂ.15): ರೈತರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಪುಂಡಾನೆ, ಕಳೆದ ಒಂದು ವಾರದಿಂದ ತಪ್ಪಿಸಿಕೊಂಡು ಓಡಾಡ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.

ಒಂದು ವಾರದ ರೋಚಕ ಕಾರ್ಯಾಚರಣೆ, ಬೇರೆ ಬೇರೆ ಪ್ರದೇಶಗಳಲ್ಲಿ ಅರಣ್ಯ ಇಲಾಖೆ‌ ಅಧಿಕಾರಿಗಳ ಕಣ್ತಪ್ಪಿಸಿ ಕಾಡಿನಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಒಂಟಿ ಸಲಗ, ಕೊನೆಗೂ ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ 10 ಘಂಟೆ ಸುಮಾರಿಗೆ ಸಾಕಾನೆಗಳ ಸಹಾಯದೊಂದಿಗೆ ಅರವಳಿಕೆ ನೀಡುವ ಮೂಲಕ ಸೆರೆಹಿಡಿದಿದ್ದಾರೆ. ರೈತರ ಬೆಳೆ ನಾಶ ಮಾಡಿ ಪುಂಡಾಟ ನಡೆಸುತ್ತಿದ್ದ ಒಂಟಿ ಸಲಗ ಸೆರೆಹಿಡಿಯಲು ಕಳೆದ ಒಂದು ವಾರದ ಹಿಂದೆ ಕ್ಯಾಂಪ್ ಹಾಕಲಾಗಿತ್ತು. 

ಐದು ವರ್ಷದಲ್ಲಿ ದುಪ್ಪಟ್ಟಾದ ಕಾಡಾನೆಗಳ ಸಂತತಿ: ಮಾನವರ ಮೇಲಿನ ದಾಳಿಯೂ ಹೆಚ್ಚಳ

ಪ್ರತಿನಿತ್ಯ ರೈತರಿಗೆ ಆತಂಕ ಹುಟ್ಟಿಸಿದ್ದ ಆನೆ: ರೈತರಿಗೆ ಪುಂಡಾನೆ ಸಾಕಷ್ಟು ತೊಂದರೆ ನೀಡುತ್ತಿತ್ತು. ಪ್ರತಿನಿತ್ಯ ಬೇರೆ ಬೇರೆ ಅರಣ್ಯ ಪ್ರದೇಶದಲ್ಲಿ ಓಡಾಟ ನಡೆಸುತ್ತಿದ್ದರಿಂದ, ಆನೆಗೆ ಡಾಟ್ ಮಾಡಲು ಆಗ್ತಿರಲಿಲ್ಲ. ಕಳೆದ ಮೂರು ದಿನಗಳ‌ ಹಿಂದೆ ಕೂಡ ವೈದ್ಯರು ಅರವಳಿಕೆ ಡಾಟ್ ಮಾಡಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣು‌ ತಪ್ಪಿಸಿ ಎಸ್ಕೇಪ್ ಆಗಿತ್ತು‌. ಸತತವಾಗಿ ಒಂಟಿ ಸಲಗವನ್ನು ಫಾಲೋ ಮಾಡಿದ್ದರಿಂದ ಇಂದು ಮತ್ತೆ ಡಾಟ್ ಮಾಡಿ ಸೆರೆಹಿಡಿದಿದ್ದೇವೆ. 42 ವರ್ಷದ ಗಂಡಾನೆ ಇದಾಗಿದ್ದು, ಮತ್ತಷ್ಟು ಆನೆಗಳನ್ನು ಸೆರೆಹಿಡಿಯುವ ಕೆಲಸ ಮಾಡಲಾಗುತ್ತದೆ. 

ಐದು ಆನೆಗಳನ್ನು ಸೆರೆ ಹಿಡಿಯಲು ಅನುಮತಿ: ಅಂದಹಾಗೆ ಈಗ ಸೆರೆ ಹಿಡಿದಿರುವ ಪುಂಡಾನೆ ರೈತರಿಗೆ ಸಾಕಷ್ಟು ತೊಂದರೆ ನೀಡ್ತಿತ್ತು. ಕಳೆದ ಒಂದು ವಾರದಲ್ಲಿ ಎರಡು ಆನೆಯನ್ನು ಸೆರೆಹಿಡಿಯಲಾಗಿದೆ. ಐದು ಆನೆಗಳನ್ನು ಸೆರೆ ಹಿಡಿಯಲು ನಾವು ಸರ್ಕಾರದ ಪರ್ಮಿಷನ್ ಕೇಳಿದ್ದೇವೆ. ಇದೀಗ ಎರಡು ಆನೆಗಳನ್ನು ಸೆರೆ ಹಿಡಿದಿದ್ದೇವೆ. ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಇನ್ನೂ ಹಲವು ಆನೆಗಳು ಇರುವ ಬಗ್ಗೆ ನಾವು ಗುರುತಿಸಿದ್ದೇವೆ. ಇಲಾಖೆಯ ಉನ್ನತ ಅಧಿಕಾರಿಗಳ‌ ನಿರ್ದೇಶನದಂತೆ ಸೆರೆ ಹಿಡಿಯುವ ಕೆಲಸ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ರಾಮನಗರದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆ: ನಾಗರಹೊಳೆ ಅಭಿಮನ್ಯು ಸಾಹಸಕ್ಕೆ ಮೆಚ್ಚುಗೆ

ಮತ್ತಷ್ಟು ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಿ: ಇನ್ನೂ ಈ ಭಾಗದಲ್ಲಿ ಸಾಕಷ್ಟು ಆನೆಗಳಿವೆ. ಈ ಎರಡು ಆನೆಗಳು ಸೆರೆಹಿಡಿದಿರೋದರಿಂದ ರೈತರ ಸಮಸ್ಯೆ ಬಗೆಹರಿಯೋದಿಲ್ಲ. ಇನ್ನೂಳಿದ ಆನೆಗಳನ್ನು ಆದಷ್ಟು ಬೇಗ ಸೆರೆಹಿಡಿಯುವ ಮೂಲಕ ರೈತರಿಗೆ ನೆರವಾಗಬೇಕಿದೆ ಎಂದು ಈ ಭಾಗದ ರೈತರು ಒತ್ತಾಯ ಮಾಡಿದ್ದಾರೆ. ಒಟ್ಟಾರೆ ಎರಡು ಆನೆಗಳನ್ನು ಸೆರೆಹಿಡಿದಿದ್ದು, ಈ ಮೂಲಕ ರೈತರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ, ಇನ್ನೂಳಿದ ಆನೆಗಳನ್ನು ಆದಷ್ಟು ಬೇಗ ಸೆರೆಹಿಡಿಯಬೇಕೆಂದು ರೈತರು ಮನವಿ ಮಾಡಿದ್ದಾರೆ.