ಕರ್ನಾಟಕ ಬರ ಪರಿಹಾರಕ್ಕೆ ಒಂದೇ ಮೆಟ್ಟಿಲು ಬಾಕಿ; ಸುಪ್ರೀಂ ಮುಂದೆ 7 ದಿನ ಗಡುವು ಪಡೆದ ಕೇಂದ್ರ ಸರ್ಕಾರ
ಕೇಂದ್ರ ಚುನಾವಣಾ ಆಯೋಗವು ಕರ್ನಾಟಕಕ್ಕೆ ಬರ ಪರಿಹಾರದ ಕುರಿತು ಸಭೆ ನಡೆಸಲು ಅನುಮತಿ ನೀಡಿದ್ದು, ಒಂದು ವಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ನಿಂದ ಕೇಂದ್ರ ಸರ್ಕಾರ 7 ದಿನ ಗಡುವು ಪಡೆದುಕೊಂಡಿದೆ.
ನವದೆಹಲಿ (ಏ.22): ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರದ ಹಣ ನೀಡುತ್ತಿಲ್ಲವೆಂದು ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈ ಅರ್ಜಿಯನ್ನು ಎರಡನೇ ಬಾರಿಗೆ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಕೇಂದ್ರ ಸರ್ಕಾರ ಒಂದು ವಾರಗಳ ಗಡುವು ತೆಗೆದುಕೊಂಡಿದೆ. ಜೊತೆಗೆ, ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಬಗ್ಗೆ ಹೈಕಮಿಟಿ ಮೀಟಿಂಗ್ ನಡೆಸಲು ಚುನಾವಣಾ ಆಯೋಗವು ಸಮ್ಮತಿ ಸೂಚಿಸಿದೆ ಎಂದು ಕೇಂದ್ರ ಸರ್ಕಾರದ ತಿಳಿಸಿದೆ.
ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದಿಂದ ಬರ ಪರಿಹಾರಕ್ಕೆ 3 ತಿಂಗಳು ವಿಳಂಬವಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವರು ಹೇಳುತ್ತಿದ್ದರು. ಇನ್ನು ನಾವು ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಕೆ ಮಾಡಿದರೂ ರಾಜಕಾರಣ ಮಾಡುವ ಉದ್ದೇಶದಿಂದಲೇ ಬರ ಪರಿಹಾರ ವಿಳಂಬ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದಿಂದ ಆರೋಪ ಮಾಡಲಾಗುತ್ತಿತ್ತು. ಇಬ್ಬರ ನಡುವಿನ ತಿಕ್ಕಾಟವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಅಂಗಳಕ್ಕೆ ತೆಗೆದುಕೊಂಡು ಹೋಗಲಾಗಿತ್ತು.
ಸುಪ್ರೀಂ ಕೋರ್ಟ್ನ ಮೊದಲ ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ವಕೀಲರು ಕರ್ನಾಟಕದಲ್ಲಿ ಕುಡಿಯಲೂ ನೀರಿಲ್ಲ, ಹಸುಗಳಿಗೆ ಮೇವು ಸಿಗುತ್ತಿಲ್ಲ. ರೈತರಿಗೆ ಬರ ಪರಿಹಾರ ನೀಡಲಾಗುತ್ತಿಲ್ಲ ಎಂದು ರಾಜ್ಯದ ಪರ ವಕೀಲರು ನ್ಯಾಯಾಲಯದ ಮುಂದೆ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡು, ಒಕ್ಕೂಟದ ವ್ಯವಸ್ಥೆಯ ಜಗಳವನ್ನು ನ್ಯಾಯಾಲಯದವರೆಗೆ ತರಬಾರದು ಎಂದು ತಿಳಿಸಿದತ್ತು. ಆದರೆ, ಕೇಂದ್ರ ಪರ ವಕೀಲರು ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಹೈಕಮಿಟಿ ಸಭೆ ನಡೆಸಲು ಅವಕಾಶವಿಲ್ಲ. ಹೀಗಾಗಿ, ಬರ ಪರಿಹಾರ ವಿಳಂಬವಾಗಲಿದೆ ಎಂದು ತಿಳಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಬರ ಪರಿಹಾರದ ಅನುದಾನ ಬಿಡುಗಡೆಗೆ ಸೂಕ್ತ ತೀರ್ಮಾನ ಕೈಗೊಳ್ಳಲು 15 ದಿನ ಗಡುವು ನೀಡಿತ್ತು.
ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಿಂದ ನ್ಯಾಯ ಸಿಕ್ಕಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಈ ಕುರಿತು ಸೋಮವಾರ (ಏ.22) ಎರಡನೇ ಬಾರಿಗೆ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಬರ ಪರಿಹಾರ ನೀಡುವ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿದೆ. ಈ ವೇಳೆ ನಮಗೆ ಇನ್ನೂ ಒಂದು ವಾರ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡಿದೆ. ಜೊತೆಗೆ, ಬರ ಪರಿಹಾರ ಬಿಡುಗಡೆ ಕುರಿತಂತೆ ಹೈಕಮಿಟಿ ಮೀಟಿಂಗ್ ಮಾಡಲು ಕೇಂದ್ರ ಚುನಾವಣಾ ಆಯೋಗವು ಕೂಡ ಸಮ್ಮತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಬರ ಪರಿಹಾರದ ಬಿಡುಗಡೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಒಂದು ವಾರ ಗಡುವು ಕೇಳಿಕೊಂಡಿದೆ.
ಸುಪ್ರೀಂ ಕೋರ್ಟ್ನಲ್ಲಿನ ವಿಚಾರಣೆಯನ್ನು ಖುದ್ದಾಗಿ ವೀಕ್ಷಣೆ ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಇದು ಕರ್ನಾಟಕ ಸರ್ಕಾರದ ಹೋರಾಟಕ್ಕೆ ಸಂದ ಜಯ. ಪರಿಹಾರ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದೆವು. ಇಂದು ಕೇಂದ್ರ ಸರ್ಕಾರ ಈ ವಾರದಲ್ಲಿ ತಿರ್ಮಾನ ಕೈಗೊಳ್ಳುವ ಭರವಸೆ ನೀಡಿದೆ. ರಾಜ್ಯ ಸರ್ಕಾರ ಕೋರ್ಟ್ ಮೂಲಕ ಪರಿಹಾರ ಪಡೆಯುವಂತಾಗಿದೆ. 18,172 ಕೋಟಿ ರೂ. ಹಣ ಕೇಳಿದೆ. 5,663 ಕೋಟಿ ರೂ. ರೈತರಿಗೆ ಸಲ್ಲಬೇಕಿದೆ. ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ನಮ್ಮ ಹೋರಾಟದಿಂದ ನ್ಯಾಯ ಸಿಗುವ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ. ಕೋರ್ಟ್ ಮಧ್ಯಪ್ರವೇಶ ಮಾಡದಿದ್ದರೆ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ದೇವೇಗೌಡರು ರಾಜ್ಯಕ್ಕೆ ಅವಲಕ್ಕಿಯನ್ನಾದ್ರೂ ಕೊಡಿಸಲಿ: ಸಚಿವ ಕೃಷ್ಣ ಬೈರೇಗೌಡ
ನಮಗೆ ರಾಜ್ಯದ ರೈತರ ಹಿತ ಮುಖ್ಯ, ರಾಜಕೀಯ ಮಾಡುವ ವಿಷಯ ಅಲ್ಲ. ಅವರಿಗೆ ಅನಿವಾರ್ಯ ಇದ್ದಾಗ ಪರಿಹಾರ ನೀಡಬೇಕು. ಯಾರಿಗೆ ಲಾಭ ಯಾರಿಗೆ ನಷ್ಟ ಮುಖ್ಯವಲ್ಲ. ಕೇಂದ್ರ ಸರ್ಕಾರ ಈಗಾಗಲೇ ನಮ್ಮಗೆ ಅನ್ಯಾಯ ಮಾಡಿದೆ. ಕೋರ್ಟ್ ಮೂಲಕ ನಾವು ಪರಿಹಾರ ಪಡೆಯುವ ಸನ್ನಿವೇಶ ಬಂದಿದೆ. ನಮ್ಮನ್ನು ಟೀಕೆ ಮಾಡಲು ಅವರ ಬಳಿ ಒಂದು ಅಂಶವೂ ಇಲ್ಲ. ತಡ ಆಗಿರುವುದು ಕೇಂದ್ರ ಸರ್ಕಾರದ ಕಡೆಯಿಂದ ಮಾತ್ರ. ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎನ್ನುವುದಕ್ಕೆ ಇದೆ ಸಾಕ್ಷಿ. ಇಂತಹ ಪ್ರಕರಣದಲ್ಲಿ ಯಾಕೆ ರಾಜ್ಯಗಳು ಯಾಕೆ ಕೋರ್ಟ್ ಗೆ ಬರಬೇಕು ಎಂದು ಪೀಠ ಕೇಳಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.