ಕಾಂಗ್ರೆಸ್ನಿಂದ ದೂರ ಸರಿಯಲಿದ್ದಾರಾ ಮತ್ತೋರ್ವ ಶಾಸಕ..?
ಕರ್ನಾಟಕ ಕಾಂಗ್ರೆಸ್ ನಲ್ಲಿ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದೀಗ ಇನ್ನೋರ್ವ ಶಾಸಕ ರೆಬೆಲ್ ಆಗುವ ಲಕ್ಷಣಗಳು ಕಂಡು ಬಂದಿದೆ.
ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ನಲ್ಲಿ ಅನೇಕರ ಅಸಮಾಧಾನ ಭುಗಿಲೆದ್ದಿದ್ದು, ಇದೇ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಾಗಿದೆ.
ಕಾಂಗ್ರೆಸ್ ಮುಖಂಡ ಉಮೇಶ್ ಜಾಧವ್ ಅವರೂ ಕೂಡ ರೆಬೆಲ್ ಆಗುವ ಲಕ್ಷಣಗಳು ಕಂಡು ಬಂದಿದೆ. ಶುಕ್ರವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಉಮೇಶ ಜಾಧವ್ ಗೈರಾಗುವ ಸಾಧ್ಯತೆ ಇದೆ.
ಇನ್ನೂ ಕೂಡ ಮುಂಬೈನಲ್ಲಿಯೇ ಉಮೇಶ್ ಜಾಧವ್ ಉಳಿದುಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಭೆ ನಡೆಲಿದ್ದು, ಸಭೆಗೆ ಆಗಮಿಸುವುದು ಅನುಮಾನವಾಗಿದೆ.
ಸಭೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಮೇಶ ಜಾಧವ್ ಸಹೋದರ ರಾಮಚಂದ್ರ ಜಾಧವ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸುವಂತೆ ದಿನೇಶ್ ಗುಂಡೂರಾವ್ ಕಟ್ಟಪ್ಪಣೆ ಮಾಡಿದ್ದರು.
ಕೆಪಿಸಿಸಿ ಅಧ್ಯಕ್ಷರ ಕಟ್ಟಪ್ಪಣೆ ನಡುವೆಯೂ ಇಂದಿನ ಶಾಸಕಾಂಗ ಸಭೆಗೆ ಉಮೇಶ್ ಜಾದವ್ ಗೈರಾಗುವ ಸಾಧ್ಯತೆ ಇದ್ದು, ರಾಜಕೀಯ ಮುಖಂಡರಿಗೆ ಮಾತ್ರವಲ್ಲ ಚಿಂಚೋಳಿ ಜನತೆಗೂ ಜಾಧವ್ ನಡೆ ಕುತೂಹಲ ಮೂಡಿಸಿದೆ.
ಸಚಿವ ಈಶ್ವರ ಖಂಡ್ರೆ ಭರವಸೆಯಿಂದ ಕಾಂಗ್ರೆಸ್ ನಲ್ಲೆ ಮುಂದುವರೆಯಲು ಉಮೇಶ್ ಜಾಧವ್ ನಿರ್ಣಯಿಸಿದ್ದರು. ಆದರೆ ಇದೀಗ ಕೈಗೆ ಕೈ ಕೊಡುವುದು ಬಹುತೇಕ ಖಚಿತವಾಗಿದೆ.
ಇವತ್ತಿನ ಸಿಎಲ್ಪಿ ಮಿಟಿಂಗ್ಗೆ ಜಾಧವ್ ಹೋಗುವ ಸಾಧ್ಯತೆ ಕಡಿಮೆ ಇದೆ ಎಂದು ಜಾಧವ್ ಸಹೋದರ ರಾಮಚಂದ್ರ ಜಾಧವ್ ಕೂಡ ಹೇಳಿದ್ದಾರೆ.