ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್‌ ಆತ್ಮಹತ್ಯೆ ಯತ್ನ| 12 ನಿದ್ರೆ ಮಾತ್ರೆ ಸೇವಿಸಿದ್ದ ಸಂತೋಷ್‌|  ರಾಮಯ್ಯ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ| ಪ್ರಾಣಾಪಾಯದಿಂದ ಪಾರು| ಆಸ್ಪತ್ರೆಗೆ ಬಿಎಸ್‌ವೈ ಭೇಟಿ, ಆರೋಗ್ಯ ವಿಚಾರಣೆ| ಸಂತೋಷ್‌ ಯತ್ನಕ್ಕೆ ಆಘಾತ ವ್ಯಕ್ತಪಡಿಸಿದ ಸಿಎಂ

ಬೆಂಗಳೂರು(ನ.28): ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌. ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ಇಲ್ಲಿ ನಡೆದಿದೆ. ಸಂತೋಷ್‌ ಅವರನ್ನು ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಸಂತೋಷ್‌ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು. ಡಾಲರ್ಸ್‌ ಕಾಲೋನಿಯಲ್ಲಿ ಅವರ ನಿವಾಸವಿದ್ದು, ರಾತ್ರಿ 8 ಗಂಟೆ ಹೊತ್ತಿಗೆ 12 ನಿದ್ರೆ ಮಾತ್ರೆ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಇದ್ದರು. ಇದನ್ನು ಗಮನಿಸಿದ ಅವರ ಪತ್ನಿ ಕೂಡಲೇ ಸಮೀಪದ ರಾಮಯ್ಯ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಕ್ಷ ಒಪ್ಪಿದರೆ ಅರಿಸೀಕೆರೆಯಿಂದ ಕಣಕ್ಕೆ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್‌

ವೈದ್ಯರು ಅವರನ್ನು ತುರ್ತು ನಿಗಾ ಘಟಕಕ್ಕೆ (ಐಸಿಯು) ದಾಖಲಿಸಿದ್ದು, ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. ಆದರೆ ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅವು ತಿಳಿಸಿವೆ.

ಸಿಎಂ ಭೇಟಿ:

ಸಂತೋಷ್‌ ಆತ್ಮಹತ್ಯೆ ಯತ್ನ ಸುದ್ದಿ ತಿಳಿದ ಕೂಡಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಹಾಗೂ ಸಂತೋಷ್‌ ಪತ್ನಿಗೆ ಧೈರ್ಯ ತುಂಬಿದರು.

BJP ನಾಯಕರ ಭೇಟಿ : JDS ಮತ್ತೊಂದು ವಿಕೆಟ್ ಪತನ ?

‘2 ದಿನಗಳ ಹಿಂದಷ್ಟೇ ಸಂತೋಷ್‌ ನನ್ನನ್ನು ಭೇಟಿ ಆಗಿದ್ದರು. ನನ್ನ ಜತೆ ಬೆಳಗ್ಗೆ ವಾಕಿಂಗ್‌ ಕೂಡ ಮಾಡಿದ್ದರು. ಆತ್ಮಹತ್ಯೆ ಯತ್ನದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಸಂತೋಷ್‌ ಪತ್ನಿ ಹಾಗೂ ವೈದ್ಯರ ಜತೆ ಮಾತನಾಡಿದ್ದೇನೆ. ಈ ಯತ್ನಕ್ಕೆ ಕಾರಣ ತಿಳಿದಿಲ್ಲ. ಘಟನೆಗೆ ಕಾರಣ ಪತ್ತೆ ಹಚ್ಚಬೇಕು. ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಸುದ್ದಿಗಾರರಿಗೆ ಯಡಿಯೂರಪ್ಪ ತಿಳಿಸಿದರು. ಪುತ್ರ ಬಿ.ವೈ. ರಾಘವೇಂದ್ರ ಕೂಡ ಈ ಸಂದರ್ಭದಲ್ಲಿದ್ದರು.

ಸಂತೋಷ್‌ ಅವರು ಯಡಿಯೂರಪ್ಪ ಅವರ ಬಂಧುವೂ ಆಗಿದ್ದು, ಅವರ ಪರಮಾಪ್ತ ವಲಯದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದರು. ತುಮಕೂರು ಜಿಲ್ಲೆ ತುರುವೇಕೆರೆ ಮೂಲದವರಾದ ಅವರು ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಅವರು ಇಚ್ಛೆ ಹೊಂದಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸ್ಥಳೀಯ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿತ್ತು ಎಂದೂ ಹೇಳಲಾಗಿತ್ತು.