Asianet Suvarna News Asianet Suvarna News

Breaking: ಸರ್ಕಾರದ ತಿಜೋರಿಯೊಂದಲೇ ಜಾತಿ ಗಣತಿಯ ಮೂಲ ಪ್ರತಿ ನಾಪತ್ತೆ?

ಸಿಎಂ ಸಿದ್ಧರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡುವ ಸೂಚನೆ ಕೊಟ್ಟ ನಡುವೆಯೇ ಸರ್ಕಾರದ ತಿಜೋರಿಯಿಂದಲೇ ಜಾತಿ ಗಣತಿಯ ಮೂಲ ಪ್ರತಿ ನಾಪತ್ತೆಯಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದಲೇ ಈ ಮಾಹಿತಿ ಬಹಿರಂಗವಾಗಿದೆ.
 

Karnataka caste census original copy missing from the government treasury san
Author
First Published Nov 22, 2023, 12:39 PM IST | Last Updated Nov 23, 2023, 5:44 PM IST

ಬೆಂಗಳೂರು (ನ.22): ರಾಜ್ಯದಲ್ಲಿ ಜಾತಿ ಗಣತಿ ವರದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಈಗಾಗಲೇ ಜಾತಿ ಗಣತಿಯನ್ನು ಸಿದ್ಧ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಲಿದ್ದಾರೆ ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲಿಯೇ ಜಾತಿ ಗಣತಿಯ ಮೂಲ ಪ್ರತಿ ಅಥವಾ ಹಸ್ತಪ್ರತಿ ನಾಪತ್ತೆಯಾಗಿದೆ ಎನ್ನುವ ಮಾಹಿತಿ ಬಂದಿದೆ. ಹಿಂದುಳಿದ ವರ್ಗಗಳ ಆಯೋಗದ ಕಚೇರಿಯ ತಿಜೋರಿಯಲ್ಲಿದ್ದ ಜಾತಿಗಣತಿಯ ಮೂಲ ಪ್ರತಿ ನಾಪತ್ತೆಯಾಗಿದೆ ಎಂದು ಸುದ್ದಿಯಾಗಿದೆ.  ಜಾತಿ ಜನಗಣತಿಗೆ ಸಂಬಂಧಿಸಿ ಮೂಲ ಪ್ರತಿ ಅಲಭ್ಯ ಕುರಿತು ಜಯಪ್ರಕಾಶ್‌ ಹೆಗ್ಡೆ ಪತ್ರ ಬರೆದಿದ್ದರು. ಸೀಲ್ಡ್ ಬಾಕ್ಸ್‌ನಲ್ಲಿ ಇದ್ದ ಹಸ್ತಪ್ರತಿ ಕಾಣೆಯಾಗಿದೆ. ಈ ವಿಚಾರವಾಗಿ ಟ್ವೀಟ್ ಮೂಲಕ ಸರ್ಕಾರವನ್ನ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವ ಜಾತಿ ಗಣತಿ ವರದಿಯ ಮೂಲ ಪ್ರತಿ ಇಲ್ಲ. ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದ ಈ ದಾಖಲೆಯ ಸಿಂಧುತ್ವ ಪ್ರಶ್ನಾರ್ಹವಾಗಿದೆ. ಸರಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರ ಉದ್ದೇಶಪೂರ್ವಕವಾಗಿ ಮಾಡಿದ ನಾಟಕ ಎನಿಸುತ್ತಿದೆ. ಈ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲು ತೆರಿಗೆದಾರರ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗಿದೆ. ಮೂಲ ಪ್ರತಿ ಇಲ್ಲದಿರುವುದು ಗಮನಿಸಿದರೆ ಆಶ್ಚರ್ಯಕರವಾಗಿದೆ ಎಂದು ಅವರು ಬರೆದಿದ್ದಾರೆ.

ಇಲಾಖೆಯಲ್ಲಿ ಮೂಲ ಪ್ರತಿ ಕಳೆದು ಹೋದರೆ ಯಾವ ಠಾಣೆಯಲ್ಲಿ ದೂರು ದಾಖಲಾಗಿದೆ? ಈ ಲೋಪಕ್ಕೆ ಕಾರಣರಾದ ಅಧಿಕಾರಿಯ ವಿರುದ್ಧ ಯಾವ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ? ಈ ಲೋಪ ಕುರಿತು ಸರಕಾರ ಕೂಡಲೇ ಸ್ಪಷ್ಟನೆ ನೀಡಬೇಕು. ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ನಾಗರಿಕರನ್ನು ವಂಚಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರ ಇದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಮತ್ಕಾರವನ್ನು ರೂಪಿಸುತ್ತಿದೆ. ಅವರ ಕಾರ್ಯಗಳು ಸಾಮಾಜಿಕ ನ್ಯಾಯಕ್ಕೆ ನಿಜವಾದ ಬದ್ಧತೆ ಇದ್ದಂತಿಲ್ಲ. ಬದಲಾಗಿ ಮತದಾರರ ಒಲವು ಗಳಿಸುವ ಬಯಕೆಯಿಂದ ಹೆಚ್ಚು ಪ್ರೇರಿತವಾಗಿದೆ ಎಂದು ಯತ್ನಾಳ್‌ ಟ್ವೀಟ್‌ ಮಾಡಿ ಸರ್ಕಾರಕ್ಕೆ ತಿವಿದಿದ್ದಾರೆ. 



ಸರ್ಕಾರದ ಖಜಾನೆಯಿಂದಲೇ ಮೂಲ ಪ್ರತಿ ನಾಪತ್ತೆಯಾಗಿದೆ ಎನ್ನುವ ಮಾಹಿತಿ ಬಂದಿದೆ. 2018 ರಿಂದ 2020ರ ಅವಧಿಯಲ್ಲಿ ಶೇಖರಿಸಿಟ್ಟಿದ್ದ ಜಾತಿ ಜನಗಣತಿಯೇ ನಾಪತ್ತೆಯಾಗಿದೆ. ಹಿಂದುಳಿದ ವರ್ಗಗಳ ಆಯೋಗದ ತಿಜೋರಿಯಲ್ಲಿ ಮೂಲ ಪ್ರತಿ ಇತ್ತು. ಈಗ ಮೂಲ ಪ್ರತಿಗಳ ಬದಲಾಗಿ ಕೇವಲ ಜೆರಾಕ್ಸ್ ಪ್ರತಿಗಳನ್ನು ಹಾಗೂ ಸ್ಕ್ಯಾನ್ ಮಾಡಿದ ದಾಖಲೆ ಮಾತ್ರ ಲಭ್ಯವಿದೆ.

ಕರ್ನಾಟಕದ ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ: ಪ್ರಬಲ ಸಮುದಾಯಗಳಿಂದ ವಿರೋಧ

ಕಾಂತರಾಜ್ ಆಯೋಗ ವರದಿಯನ್ನು ಸಿದ್ಧಪಡಿಸಿ ಆಯೋಗದ ಭದ್ರತಾ ಕೊಠಡಿಯಲ್ಲಿತ್ತು. ವರದಿಯ ಮೂಲ ಪ್ರತಿ ಸಹಿತ ಹಲವು ದಾಖಲೆಗಳನ್ನು ಇರಿಸಿದ್ದ ಬಗ್ಗೆ ಆಯೋಗ ಮಾಹಿತಿ ಕೊಟ್ಟಿತ್ತು. 2021ರ ಆಗಸ್ಟ್ ನಲ್ಲಿ ಆಯೋಗವು ಜಾತಿಗಣತಿಯ ವರದಿಯ ಹುಡುಕಾಟ ನಡೆಸಿತ್ತು. ಹುಡುಕಾಟ ಮಾಡಿದಾಗ ಮೂಲ ಪ್ರತಿ ಕಣ್ಮರೆಯಾದ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಈ ಕುರಿತು ಆಯೋಗದ ಅಂದಿನ ಸದಸ್ಯ ಕಾರ್ಯದರ್ಶಿ ಡಾ ಏನ್ ವಿ ಪ್ರಸಾದ್ ರಿಂದ ಪತ್ರ ಬರೆಯಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದು ಮೂಲ ಪ್ರತಿ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು.

'ಜಾತಿ ಗಣತಿ ವರದಿ ಬಹಿರಂಗದಿಂದ ರಾಜಕೀಯ ಸ್ಥಿತ್ಯಂತರ'

ಜಾತಿಗಣತಿ ಮೂಲ ಪ್ರತಿ ನಾಪತ್ತೆ ಪ್ರಕರಣ ವಿಚಾರವಾಗಿ ಮಾತನಾಡಿರುವ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ, 'ಮೂಲ ಪ್ರತಿ ಇಲ್ಲದೇ ಇರುವುದು ವಿಷಯವೇ ಅಲ್ಲ. ನಾವು ವರದಿ ತಯಾರಿಸಿರುವುದು ಸಂಗ್ರಹಿಸಿರುವ ಅಂಕಿಅಂಶಗಳಿಂದ. ಮೂಲ ಪ್ರತಿ ಎನ್ನುವುದು ವರ್ಕ್  ಶೀಟ್ ಮಾತ್ರ. ಆ ವರ್ಕ್ ಶೀಟ್ ಮಾತ್ರ ಇಲ್ಲ. ನಾವು ವರದಿಯನ್ನ ಮೂಲ ಅಂಕಿ-ಅಂಶಗಳ ಮೇಲೆ ಮಾಡುವುದು. ವರದಿಯನ್ನ ಸಿಎಂ ಗೆ ಕೊಡುತ್ತೇವೆ. ಡೇಟಾ ಎಲ್ಲವೂ ಇದೆ‌ ಯಾವುದು ಮಿಸ್ ಅಗಿಲ್ಲ. ಸಾಫ್ಟ್‌ವೇರ್‌ನಲ್ಲೂ ಇದೆ. ಪ್ರತಿ ಜಿಲ್ಲಾಧಿಕಾರಿಗಳ ಬಳಿಯೂ ಡೇಟಾ ಇದೆ. ಹಿಂದೆ ಸಿದ್ದಪಡಿಸಿದ್ದ ಮೂಲ ಪ್ರತಿ ಇಲ್ಲ. ಡೇಟಾ ಆಧರಿಸಿ ನಾವು ವರದಿ ಸಿದ್ದಪಡಿಸುತ್ತೇವೆ. ಸಿದ್ದಪಡಿಸುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಆಯೋಗದ ಅವಧಿ ಮುಂದುವರೆಯುತ್ತದಾ ಎಂಬ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಸಿಎಂ ಹಾಗೂ ನಮ್ಮ ನಡುವೆ ನಡೆದಿರುವ ವಿಚಾರ. ಅದನ್ನ ನಾನು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.

 

Latest Videos
Follow Us:
Download App:
  • android
  • ios