ವಿದೇಶ ಪ್ರವಾಸದಿಂದ ರಾಹುಲ್ ಗಾಂಧಿ ಹಿಂತಿರುಗಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವು ನಾಯಕರು ಹೈಕಮಾಂಡ್ ಅನುಮೋದನೆಗೆ ದೆಹಲಿಗೆ ತೆರಳಲು ಸಜ್ಜು, ಜುಲೈ 15ರೊಳಗೆ ವಿಸ್ತರಣೆ ನಡೆಯುವ ಸಾಧ್ಯತೆ

  • ವಿದೇಶ ಪ್ರವಾಸಕ್ಕೆ ತೆರಳಿದ್ದ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಭಾನುವಾರ ದೆಹಲಿಗೆ ವಾಪಸ್‌
  • ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ ಕಸರತ್ತು
  • ಸಂಪುಟ ವಿಸ್ತರಣೆ ಮಾತುಕತೆ ನಡೆಸಲು ರಾಹುಲ್‌ ಬಳಿ ಸಮಯ ಕೋರಿದ ರಾಜ್ಯ ನಾಯಕರು
  • ಸಂಭಾವ್ಯ ಸಚಿವರ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ನೀಡಲು ಸಜ್ಜಾಗಿರುವ ರಾಜ್ಯ ನಾಯಕತ್ವ
  • ಸಮಯ ಸಿಕ್ಕರೆ ಮಂಗಳವಾರ ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದು, ಕೆಪಿಸಿಸಿ ಅಧ್ಯಕ್ಷ ಹರಿ ದಿಲ್ಲಿಗೆ
  • ವಿಸ್ತರಣೆಗೆ ಹೈಕಮಾಂಡ್‌ ಗ್ನೀನ್‌ಸಿಗ್ನಲ್‌ ನೀಡಿದರೆ ಜು.15ಕ್ಕೆ ಮೊದಲೇ ವಿಸ್ತರಣೆ ಬಹುತೇಕ ಖಚಿತ
  • ರಾಹುಲ್‌ ಭೇಟಿಗೆ ಅವಕಾಶ ಸಿಗದೇ ಹೋದಲ್ಲಿ ಆಷಾಡ ಮಾಸ ಮುಗಿಯುವವರೆಗೆ ವಿಸ್ತರಣೆ ಡೌಟ್‌

 ಬೆಂಗಳೂರು (ಜು.13): ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ ಜತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಮಂಗಳವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದೇಶ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಭಾನುವಾರ ತಡ ರಾತ್ರಿ ದೆಹಲಿಗೆ ವಾಪಸಾಗಿದ್ದಾರೆ. ಸಹಜವಾಗಿ ಸೋಮವಾರ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ನಂತರ ರಾಜ್ಯ ನಾಯಕರಿಗೆ ಲಭ್ಯವಾಗಲಿದ್ದಾರೆ. ಹಾಗಾಗಿ ಮೂವರೂ ರಾಜ್ಯ ನಾಯಕರು ಹೈಕಮಾಂಡ್‌ ನಾಯಕರ ಭೇಟಿಗಾಗಿ ಒಟ್ಟಿಗೆ ಮಂಗಳವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಸಂಪುಟ ವಿಸ್ತರಣೆಗೆ ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ರಾಹುಲ್‌ಗಾಂಧಿ ಅವರು ವಿದೇಶದಿಂದ ವಾಪಸ್‌ ಬರುವುದನ್ನು ರಾಜ್ಯ ನಾಯಕರು ಕಾಯುತ್ತಿದ್ದರು. ಇದೀಗ ಭಾನುವಾರ ರಾತ್ರಿ ಅವರ ವಾಪಸಾತಿ ಖಚಿತವಾದ ಬೆನ್ನಲ್ಲೇ ಭೇಟಿಗೆ ಅವಕಾಶ ಕೋರಲಾಗಿದೆ. ಅವಕಾಶ ನೀಡಿದರೆ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸೇರಿ ವರಿಷ್ಠರೊಂದಿಗೆ ಚರ್ಚಿಸಿ ಒಂದೆರಡು ದಿನದಲ್ಲಿ ಪಟ್ಟಿಗೆ ಅನುಮೋದನೆ ಪಡೆಯಬಹುದು. ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದರೆ ಆಷಾಢ ಆರಂಭಕ್ಕೂ ಮೊದಲೇ ಅಂದರೆ ಜು.15ರ ಒಳಗಾಗಿಯೇ ಸಂಪುಟ ವಿಸ್ತರಣೆ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.

ಒಂದು ವೇಳೆ ರಾಹುಲ್‌ ಭೇಟಿ ವಿಳಂಬವಾದರೆ ಆಷಾಢ ಮಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಒಂದು ತಿಂಗಳು ಮುಂದೂಡಲಾಗುತ್ತದೆಯೇ? ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲ ಐದು ನಗರ ಪಾಲಿಕೆಗಳ ಚುನಾವಣೆಗೆ ಮುಂದೂಡಿಕೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಒಂದು ವೇಳೆ ನ್ಯಾಯಾಲಯ ಅರ್ಜಿ ಮುಂದೂಡಿಕೆಗೆ ನಿರಾಕರಿಸಿದರೆ, ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಲಿದೆ. ಹಾಗಾದರೆ ಸಂಪುಟ ವಿಸ್ತರಣೆ ನಿರ್ಧಾರದಲ್ಲಿ ಬದಲಾವಣೆಗಳು ಆಗಬಹುದಾ? ಎಂಬ ಚರ್ಚೆಯೂ ನಡೆದಿದೆ. ಆದರೆ, ಆಕಾಂಕ್ಷಿಗಳ ಒತ್ತಡ ಹೆಚ್ಚುತ್ತಿರುವುದರಿಂದ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.