ಕಾಂಗ್ರೆಸ್, ಜೆಡಿಎಸ್ ಜಾರಿಗೊಳಿಸಿದ್ದ ಮತ್ತೊಂದು ಮಹತ್ವದ ಯೋಜನೆಗೆ ಬ್ರೇಕ್?
‘ಮಹಾಲಕ್ಷ್ಮೀ’ ಯೋಜನೆಗೆ ಬ್ರೇಕ್?| ಕಾಂಗ್ರೆಸ್-ಜೆಡಿಎಸ್ ಜಾರಿಗೆ ತಂದಿದ್ದ ಯೋಜನೆ ತಡೆಗೆ ಬಿಜೆಪಿ ಚಿಂತನೆ
ಬೆಂಗಳೂರು[ಫೆ.04]: ಕಾಂಗ್ರೆಸ್ ಹಾಗೂ ಜೆಡಿಎಸ್ನ ಮಹತ್ವಕಾಂಕ್ಷಿ ಮಹಾಲಕ್ಷ್ಮೇ ಯೋಜನೆಗೆ ಮುಂಬರುವ 2020-21ರ ಪಾಲಿಕೆ ಬಜೆಟ್ನಲ್ಲಿ ಬ್ರೇಕ್ ಹಾಕಲು ಆಡಳಿತಾರೂಢ ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತದ 2018-19ನೇ ಸಾಲಿನ ಬಜೆಟ್ನಲ್ಲಿ ಪಿಂಕ್ಬೇಬಿ ಯೋಜನೆಯಡಿ ಹೊಸ ವರ್ಷದಂದು ಪಾಲಿಕೆಯ ಎಲ್ಲ ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರು. ಬಾಂಡ್ ನೀಡಿವ ಯೋಜನೆ ಜಾರಿ ಮಾಡಲಾಗಿತ್ತು. ತದ ನಂತರ 2019-20ನೇ ಸಾಲಿನ ಬಜೆಟ್ನಲ್ಲಿ ಪಾಲಿಕೆಯ 6 ರೆಫರಲ್ ಹಾಗೂ 26 ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ವರ್ಷವಿಡೀ ಜನಿಸುವ ಎಲ್ಲ ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮೀ ಯೋಜನೆಯಡಿ ಒಂದು ಲಕ್ಷ ರು. ಬಾಂಡ್ ವಿತರಿಸುವ ಯೋಜನೆ ಘೋಷಿಸಿ 60 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು.
ತಂದೆಗೆ ಕೊಟ್ಟಂತೆ ನನಗೂ ಸಹಕಾರ ಕೊಡಿ: ವಿಜಯೇಂದ್ರ
ಅದರಂತೆ ಪ್ರಸಕ್ತ ವರ್ಷ ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಎಲ್ಲ ಹೆಣ್ಣು ಮಕ್ಕಳಿಗೆ ಬಾಂಡ್ ವಿತರಿಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಯೋಜನೆಯ ಫಲಾನುಭವಿಗಳನ್ನು ಆಯ್ಕೆಗೆ ಮಾನದಂಡಗಳನ್ನು ರೂಪಿಸಿ ಸಂಬಂಧಪಟ್ಟ ಸ್ಥಾಯಿ ಸಮಿತಿಯಿಂದ ಒಪ್ಪಿಗೆ ಪಡೆದುಕೊಂಡಿದೆ. ಇತ್ತ ಆಡಳಿತ ಪಕ್ಷ ಬಿಜೆಪಿ ಮೈತ್ರಿ ಆಡಳಿತಾವಧಿಯಲ್ಲಿ ಜಾರಿಗೆ ತಂದ ಮಹಾಲಕ್ಷ್ಮೀ ಯೋಜನೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದೆ.
ಈ ಕುರಿತು ಮಾತನಾಡಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್, ರಾಜ್ಯ ಸರ್ಕಾರ ಈಗಾಗಲೇ ಭಾಗ್ಯಲಕ್ಷ್ಮೀ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ರುಪಾಯಿ ಮೊತ್ತ ಬಾಂಡ್ ನೀಡಲಾಗುತ್ತಿದೆ. ಪಾಲಿಕೆ ಮಹಾಲಕ್ಷ್ಮೀ ಯೋಜನೆಯಡಿ ಅದೇ ಮಾದರಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಾಗಾಗಿ, ಬಿಬಿಎಂಪಿಯ 2020-21ರ ಬಜೆಟ್ನಲ್ಲಿ ಮಹಾಲಕ್ಷ್ಮೀ ಯೋಜನೆಗೆ ಬದಲಾಗಿ ಬೇರೆ ಸೌಲಭ್ಯನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಾಲಕ್ಷ್ಮೀ ಯೋಜನೆ ಕೈ ಬಿಡುವ ಬಗ್ಗೆ ಇನ್ನು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ: ಕೊನೆಗಳಿಗೆಯಲ್ಲಿ ಸಚಿವ ಸ್ಥಾನದ ಆಸೆ ಕೈಬಿಟ್ಟ ಅನರ್ಹ ಶಾಸಕ