Asianet Suvarna News Asianet Suvarna News

ಅನ್ನಭಾಗ್ಯ ಯೋಜನೆಯ 450 ಅಕ್ಕಿ ಮೂಟೆ ತುಂಬಿದ್ದ ಲಾರಿಯೇ ನಾಪತ್ತೆ!

ಅನ್ನಭಾಗ್ಯ ಯೋಜನೆ ಅಕ್ಕಿ ತುಂಬಿದ ಲಾರಿಯನ್ನೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಿಂದ ಕದ್ದೊಯ್ದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

Karnataka Anna Bhagya Yojana rice sacks loaded lorry was stolen in Yadgir sat
Author
First Published May 31, 2023, 7:47 PM IST

ಯಾದಗಿರಿ (ಮೇ 31): ಸಾಮಾನ್ಯವಾಗಿ ಊಟಕ್ಕೆ ಒಂದೆರಡು ಮೂಟೆ ಅಕ್ಕಿಯನ್ನು ಕದಿಯುವುದನ್ನು ನೋಡಿದ್ದೇವೆ. ಐಷಾರಾಮಿ ಜೀವನ ಮಾಡಲಿಕ್ಕೆ ಹಣವನ್ನು ಕದಿಯುವುದು ನೋಡಿದ್ದೇವೆ. ಆದರೆ, ಯಾದರಿಗಿಯಲ್ಲಿ ರಾಜ್ಯದ ಜನತೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಸಿದ್ಧಪಡಿಸಲಾಗಿದ್ದ ಅಕ್ಕಿ ತುಂಬಿದ ಲಾರಿಯನ್ನೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಿಂದ ಕದ್ದೊಯ್ದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಹೌದು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಪಡಿತರ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದೆ. ಆದರೆ, ಈಗ ಯಾದಗಿರಿ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ತುಂಬಿದ ಲಾರಿಯನ್ನೇ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ವಿತರಣೆ ಮಾಡುವ ಕಾರ್ಯಕ್ಕೆ ಭಾರಿ ಹಿನ್ನಡೆ ಉಂಟಾಗಿದೆ, ಸಾರ್ವಜನಿಕರಿಗೆ ಅಕ್ಕಿ ಸರಬರಾಜು ಮಾಡಬೇಕಾದ ಮಾಲೀಕ ಹಾಗೂ ಗುತ್ತಿಗರದಾರರು ಬರೋಬ್ಬರಿ ಒಂದು ಲಾರಿ ಲೋಡ್‌ನಷ್ಟು ಅಕ್ಕಿ ಕಾಣದ್ದರಿಂದ ಭಾರಿ ಪೇಚಾಟಕ್ಕೆ ಸಿಲುಕಿದ್ದಾರೆ.

ರಾಜ್ಯಾದ್ಯಂತ ಜೂ.15ರವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

ಎಪಿಎಂಸಿಯಲ್ಲಿ ನಿಲ್ಲಿಸಿದ್ದ ಲಾರಿ ಬೆಳಗಾಗುವಷ್ಟರಲ್ಲಿ ಕಾಣೆ: ಅಕ್ಕಿಯ ಲಾರಿಯೇ ಕಾಣೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ನಡೆದಿದೆ. ಲಾರಿ ಚಾಲಕ ಎಪಿಎಂಸಿ ಯಾರ್ಡ್ ನಲ್ಲಿ ಅಕ್ಕಿ ತುಂಬಿದ್ದ ಅನ್ನಭಾಗ್ಯ ಲಾರಿ ನಿಲ್ಲಿಸಿದ್ದನು. ರಾತ್ರಿ ಲಾರಿಯಲ್ಲಿ ಮಲಗುವುದನ್ನು ಬಿಟ್ಟು ತಮ್ಮ ಸ್ವಗ್ರಾಮ ಸುರಪುರಕ್ಕೆ ಹೋಗಿದ್ದನು. ಊರಿನಿಂದ ಬೆಳಗ್ಗೆ ವಾಪಸ್‌ ಬಂದು ನೋಡಿದರೆ ನಿಲ್ಲಿಸಿದ್ದ ಜಾಗದಲ್ಲಿ ಲಾರಿಯೇ ಇರಲಿಲ್ಲ. ಎಪಿಎಂಸಿ ಸೇರಿ ಇಡೀ ಪಟ್ಟಣದಲ್ಲಿ ಲಾರಿ ಹುಡುಕಿದರೂ ಎಲ್ಲಿಯೂ ಸಿಗಲಿಲ್ಲ. 

450 ಅಕ್ಕಿ ಮೂಟೆಗಳು ನಾಪತ್ತೆ: ಇನ್ನು ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಿಸಲು ಎಪಿಎಂಸಿಯಲ್ಲಿ ನಿಂತಿದ್ದ ಲಾರಿ ಕಾಣೆಯಾಗಿದ್ದು, ಇದರಲ್ಲಿ ಬರೋಬ್ಬರಿ 20 ಟನ್ ಅಕ್ಕಿಯನ್ನು ತುಂಬಿಸಲಾಗಿತ್ತು. ಅಂದರೆ ಬರೋಬ್ಬರಿ ತಲಾ 50 ಕೆ.ಜಿ. ತೂಕವುಳ್ಳ 450 ಮೂಟೆಗಳಿದ್ದ ಲಾರಿಯನ್ನು ಎಪಿಎಂಪಿ ಯಾರ್ಡ್‌ನಿಂದ ಖದೀಮರು ಕದ್ದೊಯ್ದಿದ್ದಾರೆ. ಇನ್ನು ಇದಕ್ಕೆ ಅಧಿಕಾರ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಲಾರಿ ಕಳ್ಳತನದಿಂದ ಬಡವರ ಹೊಟ್ಟೆ ತುಂಬಿಸುತಿದ್ದ ಅಕ್ಕಿಯೂ ಕೂಡ ಕಂಡವರ ಪಾಲಾಗುತ್ತಿದೆ.

ದೂಧಗಂಗಾದಲ್ಲಿ ಈಜಲು ಹೋಗಿ ಯುವಕ ಸಾವು: ಕಲ್ಲುಕ್ವಾರಿಯಲ್ಲಿ ಇಬ್ಬರು ಬಾಲಕರ ದುರ್ಮರಣ

ಪೊಲೀಸ್‌ ಠಾಣೆಗೆ ದೂರು ಸಲ್ಲಿಕೆ: ಅಕ್ಕಿ ತುಂಬಿದ್ದ ಲಾರಿ ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ಈ ಘಟನೆ ಕುರಿತಂತೆ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿ ಲಾರಿಯನ್ನು ಹುಡಕಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೋಲಿಸ್ ತನಿಖೆಯೂ ಚುರುಕುಗೊಂಡಿದೆ. ಜೊತೆಗೆ, ನಗರದ ಎಲ್ಲ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ಮಾಡಲಾಗುತ್ತಿದ್ದು, ಆದಷ್ಟು ಬೇಗ ಲಾರಿ ಸಿಕ್ಕು ಬಡವರಿಗೆ ಅಕ್ಕಿ ತಲುಪುವಂತಾಗಲಿ ಎನ್ನುವುದು ನಮ್ಮ ಆಶಯವಾಗಿದೆ.

Follow Us:
Download App:
  • android
  • ios