ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ  ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿರುವ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ  ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನಾರಾಯಣಗೌಡ ಸೇರಿದಂತೆ ಕನ್ನಡಪರ ಹೋರಾಟಗಾರರ ಬಿಡುಗಡೆಗೆ ಸರ್ಕಾರಕ್ಕೆ 24 ಗಂಟೆ ಗಡುವು ನೀಡಿದ್ದಾರೆ.

ಬೆಂಗಳೂರು (ಡಿ.28): ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿರುವ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನಾರಾಯಣಗೌಡ ಸೇರಿದಂತೆ ಕನ್ನಡಪರ ಹೋರಾಟಗಾರರ ಬಿಡುಗಡೆಗೆ ಸರ್ಕಾರಕ್ಕೆ 24 ಗಂಟೆ ಗಡುವು ನೀಡಿದ್ದಾರೆ.

ಕನ್ನಡಪರ ಹೋರಾಟಗಾರರನ್ನು ಜೈಲಿನಿಂದ ತಕ್ಷಣ ಬಿಡುಗಡೆ ಮಾಡದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ನಾಳೆ ಸಂಜೆವರೆಗೆ ಗಡುವು ಕೊಡಲಾಗಿದೆ. ಮುಂದಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. 

ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆ ಬಳಕೆ ಕಡ್ಡಾಯ; ಫೆ.28 ಗಡುವು ಕೊಟ್ಟ ಸಿಎಂ

ಕನ್ನಡಪರ ಹೋರಾಟಗಾರರ ಬಂಧನ ಕುರಿತಂತೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಇದು ಬಹಳ ಗಂಭೀರವಾದ ಪರಿಸ್ಥಿತಿ. ಕನ್ನಡಪರ ಸಂಘಟನೆಗಳ ನಡುವೆ ಯಾವುದೇ ವೈಮನಸಿಲ್ಲ. ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಸಿಎಂ ಸಿದ್ದರಾಮಯ್ಯನವರು ನಮ್ಮ ಬಗ್ಗೆ ಮಾತನಾಡಿರುವ ಮಾತು ಅವರಿಗೆ ಶೋಭೆ ತರುವುದಿಲ್ಲ. ನಾವು ಹಲವು ಹೋರಾಟಗಳನ್ನು ಮಾಡಿದ್ದೇವೆ ಆಗೆಲ್ಲಾ ಸಿದ್ದರಾಮಯ್ಯನವರು ಜೊತೆಗಿದ್ರು. ಈಗ ಸಿಎಂ ಆದ ಮೇಲೆ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಕರ್ನಾಟಕ ಯಾರ ಕೈಗೆ ಕೊಡಬೇಕು ಅಂತಿದ್ದೀರಿ?

ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ಈ ನಡೆಯನ್ನು ನಾವು ಯಾರೂ ಒಪ್ಪುವುದಿಲ್ಲ. ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ರು, ಬೆಂಕಿ ಹಚ್ಚಿದ್ರು, ಹೊಡೆದು ಹಾಕಿದ್ರು ಅಂತ ಹೇಳ್ತಿದ್ದಾರೆ. ಆದರೆ ನಾವು ಯಾಕೆ ಹೀಗೆ ಮಾಡಿದ್ವಿ ಅಂತ ಸರ್ಕಾರ ಯೋಚನೆ ಮಾಡ್ತಿಲ್ಲ. ಕನ್ನಡಕ್ಕಾಗಿ ಹೋರಾಡುವರನ್ನ ಬಂಧಿಸುತ್ತೀರಿ ಹಾಗಾದ್ರೆ ನಮ್ಮ ಕರ್ನಾಟಕ ಯಾರ ಕೈಯಲ್ಲಿ ಇರಬೇಕು ಅಂತ ಹೇಳ್ತೀರಾ ನೀವು? ಮಲಯಾಳಿಗಳು, ತಮಿಳರು, ಮಾರ್ವಾಡಿಗಳು, ಸಿಂಧಿಗಳು, ಹಿಂದಿಯವರ ಕೈಗೆ ಕರ್ನಾಟಕ ಕೊಡಬೇಕಾ? ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ವಾಟಾಳ್ ಗರಂ:

ಯಾರೇ ಆಗಲಿ ಕನ್ನಡ ಚಳವಳಿಗಾರರನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ನಿಮ್ಮ‌ ಪೊಲೀಸರು ಎಲ್ಲಾ ನಿಂತುಕೊಂಡು ನೋಡಿ ಈಗ ಕೇಸು ಹಾಕಿದ್ರೆ? ಇದು ಗಂಭೀರ ಪ್ರಕರಣ.. ಸರ್ಕಾರ ಕಣ್ಣು ಮುಚ್ಚಿ ಕೂರಬಾರದು. ನಿಮ್ಮ ಸರ್ಕಾರದಲ್ಲೇ ಹಲವು ಗೊಂದಲಗಳಿವೆ, ಕ್ಯಾಬಿನೆಟ್ ನಲ್ಲೇ ಸಚಿವರು ಕಿತ್ತಾಡ್ತಾರೆ. ಆದರೆ ಕನ್ನಡಪರ ಹೋರಾಟಗಾರರಲ್ಲಿ ಯಾವುದೇ ಗೊಂದಲ‌ ಇಲ್ಲ. ನಿಮಗೆ ದೆಹಲಿಯಿಂದ ಬರುವ ಮಾಹಿತಿ ಕೇಳಬೇಕು. ಆದರೆ ನಾವು ಹಾಗಲ್ಲ. ಕನ್ನಡ ಕರ್ನಾಟಕ ವಿಚಾರದಲ್ಲಿ ರಾಜೀಯೇ ಇಲ್ಲ. ಹಾಗೆ ನೋಡಿದ್ರೆ ಸಿಎಂ ಸಿದ್ದರಾಮಯ್ಯನವರೇ ಬಹಳ‌ ಗೊಂದಲಲ್ಲಿದ್ದಾರೆ. ಒಂದು ಕಡೆ ಕನ್ನಡಪರ ಮಾತನಾಡುತ್ತಾ ಕನ್ನಡ ಹೋರಾಟಗಾರರನ್ನೇ ಬಂಧಿಸುವ ಕೆಲಸ ಮಾಡ್ತಿದ್ದಾರೆ ಎಂದು ಹರಿಹಾಯ್ದರು.

ಅನ್ನ ಕೊಡುವ ಈ ನೆಲದ ನಿಯಮ ಪಾಲಿಸಿ: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸಿಎಂ ಖಡಕ್ ಸೂಚನೆ

ನಾವೆಲ್ಲ ನಾರಾಯಣಗೌಡ ಪರ ನಿಲ್ಲುತ್ತೇವೆ:

ನಾವು ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾರಾಯಣ ಗೌಡರ ಪರವಾಗಿ ನಾವೆಲ್ಲಾ ನಿಲ್ಲುತ್ತೇವೆ. ಇದು ಒಬ್ಬರ ಪ್ರಶ್ನೆ ಅಲ್ಲ. ಸಮಗ್ರ ಕನ್ನಡ ಹೋರಾಟಗಾರರ ಪ್ರಶ್ನೆ. ನಮ್ಮ ಕಾರ್ಯಕರ್ತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದರೆ ಪರಿಣಾಮ ಸರ್ಕಾರ ಎದುರಿಸಬೇಕಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯರಿಗೆ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್.