Asianet Suvarna News Asianet Suvarna News

ಕಲಬುರಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆ

ಕನ್ನಡ ಸಾರಸ್ವತ ಲೋಕದ ಮೇರು ಕವಿಗಳಲ್ಲಿ ಒಬ್ಬರಾದ ಡಾ||ಎಚ್.ಎಸ್.ವೆಂಕಟೇಶ್ ಮೂರ್ತಿ ಅವರನ್ನು ಕಲಬುರಗಿಯಲ್ಲಿ ನಡೆಯುವ 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ

Kannada Poet HS Venkatesh Murthy Has Been Selected As President For 85 Kannada Sahithya Sammelana
Author
Bengaluru, First Published Dec 4, 2019, 1:42 PM IST

ಕಲಬುರಗಿ [ಡಿ.04]:   ಕಲಬುರಗಿಯಲ್ಲಿ 2020ರ ಫೆಬ್ರವರಿ 5, 6 ಮತ್ತು 7 ರಂದು 3 ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟ ಎಚ್.ಎಸ್.ವೆಂಕಟೇಶ ಮೂರ್ತಿ ಪಾಲಿಗೆ ಒಲಿದಿದೆ.

ಕನ್ನಡ ಸಾರಸ್ವತ ಲೋಕದ ಮೇರು ಕವಿಗಳಲ್ಲಿ ಒಬ್ಬರಾದ ಡಾ||ಎಚ್.ಎಸ್.ವೆಂಕಟೇಶ್ ಮೂರ್ತಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗಾಗಿ ಇಂದು ಕಸಾಪ ಕೇಂದ್ರ ಸಮಿತಿ ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದವರೇ ಸಮ್ಮೇಳನಾಧ್ಯಕ್ಷರಾಗಬೇಕು ಎಂಬ ಬಲವಾದ ಕೂಗಿನ ನಡುವೆ ಪ್ರತಿಭೆ, ಹಿರಿತನ, ಸಾಧನೆ, ಸಾಮಾಜಿಕ ನ್ಯಾಯಕ್ಕೆ ಅಪಚಾರವಾಗಬಾರದು ಎಂಬ ಅಂಶವೂ ಸೇರಿದಂತೆ ಎಲ್ಲಾ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನೆಲ್ಲ ಪರಿಗಣಿಸುವ ಮೂಲಕ ಸಮ್ಮೇಳನದ  ಅಧ್ಯಕ್ಷರಾಗಿ ಎಚ್.ಎಸ್ ವೆಂಕಟೇಶ ಮೂರ್ತಿ ಆಯ್ಕೆ ನಡೆದಿದೆ.

ಕಲಬುರಗಿಯಲ್ಲಿ 3 ದಶಕಗಳ ನಂತರ ಸಮ್ಮೇಳನಕ್ಕೆ ಸಿದ್ಧತೆ

32 ವರುಷಗಳ ನಂತರ ಕಲಬುರಗಿಯಲ್ಲಿ ಅಭಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.  ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಕ್ಯಾಂಪಸ್‌ನಲ್ಲಿ ಸಮ್ಮೇಳನ ನಡೆಸುವ ನಿರ್ಣಯವಾಗಿದ್ದು ಸಿದ್ಧತೆಗಳು ಸಾಗಿವೆ.

ಪರಿಚಯ : ಎಚ್.ಎಸ್. ವೆಂಕಟೇಶಮೂರ್ತಿ ಕವಿತೆ, ನಾಟಕ ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.  ಆಧುನಿಕ ಸಾಹಿತ್ಯದಲ್ಲಿ ಕೃಷಿ ಮಾಡಿದ ಅವರು ಸಾಹಿತ್ಯ ಪ್ರಿಯರಿಗೆ ಕೊಟ್ಟ ಕೊಡುಗೆ ಅಪಾರ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗ್ಗೆರೆಯಲ್ಲಿ ಜೂನ್ 23,1944ರಲ್ಲಿ ಜನಿಸಿದರು. ತಂದೆ ನಾರಾಯಣ ಭಟ್, ತಾಯಿ ನಾಗರತ್ನಮ್ಮ, ಪತ್ನಿ ರಾಜಲಕ್ಷ್ಮಿ.

ಬರಹಗಳು
ಬಾಗಿಲು ಬಡಿವ ಜನಗಳು, ಪರಿವೃತ್ತ, ಒಣಮರದ ಗಿಳೀ,ಹರಿಗೋಲು,ವಿಮುಕ್ತಿ, ಬಾನಸವಾಡಿಯ ಬೆಂಕಿ ಎಂಬ ಕಥಾಸಂಕಲನ ಸೇರಿ ಹಲವು ರೀತಿಯ ಸಾಹಿತ್ಯದಲ್ಲಿ ತೊಡಗಿದ್ದು, ಇವರ ಸಾಹಿತ್ಯ ಸಾಧನೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದಿವೆ.

ಪ್ರಮುಖ ಭಾವಗೀತೆಗಳು

ಲೋಕದಕಣ್ಣಿಗೆ ರಾಧೆಯೂ ಕೂಡ

ಅಮ್ಮಾ ನಾನು ದೇವರಾಣೆ

ತೂಗುಮಂಚದಲ್ಲಿ ಕೂತು ಸೇರಿದಂತೆ ಪ್ರಮುಖ ಗೀತೆಗಳನ್ನು ರಚಿಸಿದ್ದಾರೆ.

Follow Us:
Download App:
  • android
  • ios