ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಪುನೀತ್ ರಾಜ್ಕುಮಾರ್ ಅವರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆಯಾಚಿಸಿದ್ದಾರೆ. ತಮ್ಮ ಚಿತ್ರ 'ಕಾಟನ್ಪೇಟೆ ಗೇಟ್' ಬಿಡುಗಡೆಯಾಗದ ದುಃಖದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾಗಿ ಕ್ಷಮೆ ಕೋರಿದ್ದಾರೆ.
ಬೆಂಗಳೂರು (ಫೆ.19) ‘ದೇವರಂತಹ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ. ದಯವಿಟ್ಟು ಪುನೀತ್ ಅವರ ಅಭಿಮಾನಿಗಳು ನನ್ನನ್ನು ಕ್ಷಮಿಸಿ’ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೈ ಜೋಡಿಸಿ ಕ್ಷಮೆ ಕೋರಿದ್ದಾರೆ.
ಬುಧವಾರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ.ಜಯಮಾಲಾ ಸುಮ್ಮುಖದಲ್ಲಿ ಕ್ಷಮೆ ಕೋರಿದ ಕನಕಪುರ ಶ್ರೀನಿವಾಸ್, ‘ಕಾಟನ್ಪೇಟೆ ಗೇಟ್ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಪುನೀತ್ ಅವರ ಅಗಲಿಕೆ ಕುರಿತು ತಪ್ಪಾಗಿ ಮಾತನಾಡಿದ್ದೇನೆ. ಎರಡು ವರ್ಷಗಳಿಂದ ನನ್ನ ನಿರ್ಮಾಣದ ಕಾಟನ್ಪೇಟೆ ಗೇಟ್ ಸಿನಿಮಾ ಬಿಡುಗಡೆ ಆಗಿಲ್ಲ. ಬಿಡುಗಡೆ ಮಾಡಲು ಥಿಯೇಟರ್ಗಳು ಮುಂಗಡವಾಗಿ ಹಣ ಕೊಡಬೇಕೆಂದು ಕೇಳುತ್ತಿದ್ದರು. ನನ್ನ ಬಳಿ ಹಣ ಇಲ್ಲ. ಆ ದುಃಖದಲ್ಲಿ ಭಾವನಾತ್ಮಕವಾಗಿ ತಪ್ಪಾಗಿ ಮಾತನಾಡಿದ್ದೇನೆ. ದಯವಿಟ್ಟು ಪುನೀತ್ ಅವರ ಅಭಿಮಾನಿಗಳು ನನ್ನ ಕ್ಷಮಿಸಿ’ ಎಂದರು.
‘ದರ್ಶನ್ ಅವರ ಜೊತೆಗೆ ಸಿನಿಮಾ ಮಾಡಬೇಕಿತ್ತು. ಕೊಟ್ಟಿದ್ದ ಹಣ ವಾಪಸ್ಸು ಕೇಳಿದಾಗ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ, ನಾನು ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಬಿಟ್ಟಿದ್ದೇನೆ. ದರ್ಶನ್ ಅಣ್ಣ, ದೇವರು ನಿಮಗೆ ಒಳ್ಳೆಯದೇ ಮಾಡುತ್ತಾರೆ. ನಿಮ್ಮ ಜೊತೆಗೆ ನಾನು ಸಿನಿಮಾ ಮಾಡುತ್ತೇನೆ. ನನ್ನ ಈ ಆಸೆ ಈಡೇರಿಸಿ’ ಎಂದರು.
‘7 ಕೋಟಿ ಕನ್ನಡಿಗರ ಮುಂದೆ ನನ್ನ ಈ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ. ಪುನೀತ್ ಅವರು ದೇವರಾಗಿಯೇ ನಮ್ಮ ನಡುವೆ ಇದ್ದಾರೆ. ರಾಜ್ಕುಮಾರ್ ಅಂದರೆ ನನಗೆ ಗೌರವ, ಅಭಿಮಾನ. ಶಿವರಾಜ್ಕುಮಾರ್ ಅವರು ಮಾಡಿದ ಉಪಕಾರವನ್ನು ನಾನು ಮರೆಯಲ್ಲ. ಅವರ ಜೊತೆಗೆ ನಾನು ಸಿನಿಮಾಗಳನ್ನು ಮಾಡಿದ್ದೇನೆ. ಮತ್ತೆ ಸಿನಿಮಾ ಮಾಡುತ್ತೇನೆ ಎಂದಾಗ ಮಾಡು ಅಂತ ಹೇಳಿದ್ದಾರೆ. ಆದರೆ, ಏನೋ ಕೆಟ್ಟ ಗಳಿಗೆಯಲ್ಲಿ ಪುನೀತ್ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನೆ. ದುಃಖದಲ್ಲಿ ಆಡಿರುವ ಮಾತುಗಳು ಅಷ್ಟೇ. ಶಿವಣ್ಣ, ಗೀತಕ್ಕ ನನ್ನ ನೀವು ಕೂಡ ಕ್ಷಮಿಸಿ’ ಎಂದು ಕನಕಪುರ ಶ್ರೀನಿವಾಸ್ ಮನವಿ ಮಾಡಿಕೊಂಡಿದ್ದಾರೆ.
‘ನಾನು ಹೆಚ್ಚು ಓದಿಲ್ಲ. ತೋಚಿದಂತೆ ಹೇಳಿದ್ದೇನೆ. ಧ್ರುವ ಸರ್ಜಾ ಒಳ್ಳೆಯ ನಟ. ಅಂಥ ಹೀರೋ ಕನ್ನಡಕ್ಕೆ ಬೇಕು. ಧ್ರುವ ಸರ್ಜಾ ಅವರೇ ನನಗೆ ಕಾಲ್ಶೀಟ್ ಕೊಡಿ, ದಯವಿಟ್ಟು ನನ್ನ ಜೊತೆಗೆ ಸಿನಿಮಾ ಮಾಡಿ. ನಿರ್ದೇಶಕ ಪ್ರೇಮ್, ಎ.ಪಿ. ಅರ್ಜುನ್ ವಾಣಿಜ್ಯ ಮಂಡಳಿಗೆ ಬಂದು ಮಾತನಾಡಿದ್ದಾರೆ. ಸಿನಿಮಾ ಮಾಡಿ ಕೊಡುತ್ತೇವೆ ಎಂದಿದ್ದಾರೆ. ನನಗೆ ಅವರು ದುಡ್ಡು ಕೊಡೋದು ಬೇಡ. ಸಿನಿಮಾ ಮಾಡಿಕೊಡಿ. ನನ್ನಂಥ ನಿರ್ಮಾಪಕರನ್ನು ಉಳಿಸಿಕೊಳ್ಳಿ’ ಎಂದು ಅವರು ತಿಳಿಸಿದ್ದಾರೆ.



