ಬೆಂಗಳೂರು: ನೂತನ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕಾರ
ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರಿಸಿದ ನಿರ್ಗಮಿತ ಆಯುಕ್ತ ಭಾಸ್ಕರ್ ರಾವ್|ಹಿರಿಯ ಅಧಿಕಾರಿಗಳ ಉಪಸ್ಥಿತಿ| ಆಯುಕ್ತ ಹುದ್ದೆಯಿಂದ ನಿರ್ಗಮಿಸುವ ವೇಳೆ ಭಾವುಕರಾದಎಸ್.ಭಾಸ್ಕರ್ ರಾವ್, ಆಯುಕ್ತರ ಕುರ್ಚಿಗೆ ಹಣೆ ಮುಟ್ಟಿಸಿ ನಮಸ್ಕರಿಸಿದರು. ಬಳಿಕ ಕಮಲ್ ಪಂತ್ ಅವರನ್ನು ಆತ್ಮೀಯಿಂದ ಅಪ್ಪಿಕೊಂಡ ಭಾಸ್ಕರ್ ರಾವ್ ಶುಭಕೋರಿ ನಿರ್ಗಮಿಸಿದರು|
ಬೆಂಗಳೂರು(ಆ.02): ರಾಜಧಾನಿಯ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ನಗರದ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಆಯುಕ್ತರಿಗೆ ಬ್ಯಾಟನ್ ನೀಡುವ ಮೂಲಕ ನಿರ್ಗಮಿತ ಆಯುಕ್ತ ಎಸ್.ಭಾಸ್ಕರ್ ರಾವ್ ಹಸ್ತಾಂತರಿಸಿದ್ದಾರೆ.
ಅಧಿಕಾರ ಸ್ವೀಕಾರಕ್ಕೂ ಮುನ್ನ ಆಯುಕ್ತರ ಕಚೇರಿಗೆ ಆಗಮಿಸಿದ ಕಮಲ್ ಪಂತ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಭಾಸ್ಕರ್ ರಾವ್ ಅವರು, ಬಳಿಕ ತಾವೇ ಆಯುಕ್ತರ ಕುರ್ಚಿ ಬಳಿಗೆ ಕರೆದೊಯ್ದು ಬಿಗಿದಪ್ಪಿ ಶುಭ ಕೋರಿದರು.
ಅಧಿಕಾರ ಸ್ವೀಕಾರದ ಬಳಿಕ ಆಯುಕ್ತ ಕಮಲ್ ಪಂತ್ ಅವರು, ಅಧಿಕಾರಿಗಳೊಂದಿಗೆ ಔಪಾಚಾರಿಕ ಸಭೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಆಯುಕ್ತರಾದ ಸೌಮೆಂದು ಮುಖರ್ಜಿ, ಎಸ್.ಮುರುಗನ್, ಹೇಮಂತ್ ನಿಂಬಾಳ್ಕರ್, ಜಂಟಿ ಆಯುಕ್ತರಾದ ಸಂದೀಪ್ ಪಾಟೀಲ್, ಡಾ. ಬಿ.ಆರ್.ರವಿಕಾಂತೇಗೌಡ ಸೇರಿದಂತೆ ಇತರರ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್
ಕುರ್ಚಿಗೆ ನಮಸ್ಕರಿಸಿ ಹೊರಟ ಭಾಸ್ಕರ್ ರಾವ್
ಆಯುಕ್ತ ಹುದ್ದೆಯಿಂದ ನಿರ್ಗಮಿಸುವ ವೇಳೆ ಭಾವುಕರಾದ ಎಸ್.ಭಾಸ್ಕರ್ ರಾವ್ ಅವರು, ಆಯುಕ್ತರ ಕುರ್ಚಿಗೆ ಹಣೆ ಮುಟ್ಟಿಸಿ ನಮಸ್ಕರಿಸಿದರು. ಬಳಿಕ ಕಮಲ್ ಪಂತ್ ಅವರನ್ನು ಆತ್ಮೀಯಿಂದ ಅಪ್ಪಿಕೊಂಡ ಭಾಸ್ಕರ್ ರಾವ್ ಶುಭಕೋರಿ ನಿರ್ಗಮಿಸಿದರು.
2 ಬಾರಿ ರಾಷ್ಟ್ರಪತಿ ಪುರಸ್ಕಾರ
ಉತ್ತರಖಂಡ ಮೂಲದ ಕಮಲ್ ಪಂತ್ ಅವರು, 1964ರ ಜೂನ್ 21ರಂದು ಜನಿಸಿದರು. ಎಂಎಸ್ಸಿ ಪದವೀಧರರು. 1990ರಲ್ಲಿ ಐಪಿಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಸೇವೆ ಆರಂಭಿಸಿದ ಅವರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಸ್ಪಿ ಆಗಿದ್ದರು. ನಾಲ್ಕು ವರ್ಷಗಳು ಸಿಬಿಐನಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ. ಕಾರಾಗೃಹ, ಗುಪ್ತದಳ, ಕೆಎಸ್ಆರ್ಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಹೆಚ್ಚುವರಿ ಆಯುಕ್ತ, ಕೇಂದ್ರ ವಲಯ ಮತ್ತು ಆಡಳಿತ ವಿಭಾಗದ ಐಜಿಪಿ ಸಹ ಕಾರ್ಯನಿರ್ವಹಿಸಿದ್ದಾರೆ. ಲೋಕಾಯುಕ್ತ ಭ್ರಷ್ಟಾಚಾರ ಹಗರಣದ ಎಸ್ಐಟಿ ಮುಖ್ಯಸ್ಥರಾಗಿ ಅವರ ತನಿಖಾ ಚಾತುರ್ಯಕ್ಕೆ ಜನರ ಮೆಚ್ಚುಗೆ ಸಿಕ್ಕಿತು. ಎರಡು ಬಾರಿ ರಾಷ್ಟ್ರಪತಿ ಪುರಸ್ಕಾರ ಸಂದಿದೆ. ಜಪಾನ್ ಹಾಗೂ ಅಮೆರಿಕ ದೇಶಗಳಿಗೆ ಸರ್ಕಾರದ ಪ್ರತಿನಿಧಿಯಾಗಿ ಭೇಟಿ ನೀಡಿದ್ದ ಗೌರವ ಲಭಿಸಿದೆ.