ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ನೀಡಲು ನಿಗದಿಗೊಳಿಸಿರುವ ₹1.20 ಲಕ್ಷ ಕನಿಷ್ಠ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆ : ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ನೀಡಲು ನಿಗದಿಗೊಳಿಸಿರುವ ₹1.20 ಲಕ್ಷ ಕನಿಷ್ಠ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಮಂಗಳವಾರ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ವಿಚಾರ ಪ್ರಸ್ತಾಪಿಸಿದರು. ಆಹಾರ ಭದ್ರತಾ ಕಾಯ್ದೆಯಡಿ ನಗರ ಪ್ರದೇಶದಲ್ಲಿ ಶೇ.50ರಷ್ಟು ಜನಕ್ಕೆ ಬಿಪಿಎಲ್ ಕಾರ್ಡ್ ಕೊಡಬೇಕು. ಪ್ರಸ್ತುತ ಬೆಂಗಳೂರು ನಗರದಲ್ಲಿ ಶೇ.15 ರಷ್ಟೂ ಇಲ್ಲ. ಹೀಗಾಗಿ ಕಾಯ್ದೆ ಪ್ರಕಾರ ಬೆಂಗಳೂರು ನಗರಕ್ಕೆ ಶೇ.50ರಷ್ಟು ಬಿಪಿಎಲ್ ಕಾರ್ಡ್ ಕೊಡಬೇಕು. ಜೊತೆಗೆ ಕನಿಷ್ಠ ಆದಾಯ ಮಿತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಶೇ.73 ಬಿಪಿಎಲ್:
ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 1.24 ಕೋಟಿ ಬಿಪಿಎಲ್ ರೇಷನ್ ಕಾರ್ಡ್ಗಳಿವೆ. 4.50 ಕೋಟಿ ಫಲಾನುಭವಿಗಳಿದ್ದಾರೆ. ರಾಜ್ಯದ ಜನಸಂಖ್ಯೆಯ ಶೇ.73ರಷ್ಟು ಮಂದಿ ಫಲಾನುಭವಿಗಳಾಗಿದ್ದಾರೆ. ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಶೇ.52 ದಾಟಿಲ್ಲ. ಪ್ರಗತಿ ಪಥದಲ್ಲಿರುವ ಕರ್ನಾಟಕದಲ್ಲಿ ಫಲಾನುಭವಿಗಳ ಪ್ರಮಾಣ ಜನಸಂಖ್ಯೆಯ ಶೇ.73ರಷ್ಟಿದೆ ಎಂದು ಹೇಳಿದರು.
ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ ಪ್ರಸ್ತಾಪ:
ಆಡಳಿತ ಸುಧಾರಣಾ ಆಯೋಗವು ಬಿಪಿಎಲ್ ರೇಷನ್ ಕಾರ್ಡ್ ನೀಡಲು ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಸುವ ಪ್ರಸ್ತಾಪವಿಟ್ಟಿದೆ. ರಾಜ್ಯದ ಶೇ.73ರಷ್ಟು ಜನ ಫಲಾನುಭವಿಗಳಿದ್ದರೂ ಹೊಸದಾಗಿ ಬಿಪಿಎಲ್ ಕಾರ್ಡ್ಗೆ ಅರ್ಜಿಗಳು ಬರುತ್ತಿವೆ. ಈ ನಡುವೆ ಕೇಂದ್ರ ಸರ್ಕಾರವು ರಾಜ್ಯದಲ್ಲಿ 7.76 ಲಕ್ಷ ಕಾರ್ಡ್ಗಳು ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಮರುಪರಿಶೀಲಿಸಿ ಎಪಿಎಲ್ ಕಾರ್ಡ್ ವ್ಯಾಪ್ತಿಗೆ ತನ್ನಿ ಎಂದು ಸೂಚಿಸಿದೆ. ಅದರಂತೆ ಈಗಾಗಲೇ ರಾಜ್ಯದಲ್ಲಿ ಶೇ.50ರಷ್ಟು ಬಿಪಿಎಲ್ ಕಾರ್ಡ್ಗಳ ಪರಿಶೀಲನೆ ಆಗಿದೆ. ಉಳಿದದ್ದನ್ನು ಪರಿಶೀಲಿಸಿ ಎಪಿಎಲ್ ಕಾರ್ಡ್ ವ್ಯಾಪ್ತಿಗೆ ತರಲಿದ್ದೇವೆ ಎಂದರು.
ಎರಡು ತಿಂಗಳೊಳಗೆ ಕ್ರಮ:
ಬೆಂಗಳೂರು ನಗರದಲ್ಲಿ ಬಿಪಿಎಲ್ ಕಾರ್ಡ್ದಾರರ ಸಂಖ್ಯೆ ಶೇ.15ಕ್ಕೂ ಕಡಿಮೆ ಇರುವ ಬಗ್ಗೆ ಪರಿಶೀಲಿಸಲಾಗುವುದು. ಈ ಸಂಬಂಧ ಸರ್ವೆ ಮಾಡಿ ವರದಿ ಪಡೆದು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕನಿಷ್ಠ ಎರಡು ತಿಂಗಳು ಸಮಯಬೇಕಾಬಹುದು ಎಂದು ಸಚಿವರು ಹೇಳಿದರು.
ನಗರದಲ್ಲಿ ಬಡತನ ಹೆಚ್ಚಳ:
ಇದಕ್ಕೂ ಮುನ್ನ ಮಾತನಾಡಿದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬೆಂಗಳೂರು ನಗರದಲ್ಲಿ 1.50 ಕೋಟಿ ಜನಸಂಖ್ಯೆಯಿದೆ. ಈ ಪೈಕಿ 24.90 ಲಕ್ಷ ಮಾತ್ರ ಬಿಪಿಎಲ್ ವ್ಯಾಪ್ತಿಯಲ್ಲಿದ್ದಾರೆ. ಅಂದರೆ, ಶೇ.15ರಷ್ಟೂ ದಾಟ್ಟಿಲ್ಲ. ನಗರದ ಶೇ.50ರಷ್ಟು ಜನ ಮಾಸಿಕ 20 ಸಾವಿರಕ್ಕಿಂತ ಕಡಿಮೆ ಸಂಬಳವಿದೆ. ಇದರಲ್ಲಿ ಅವರು ಜೀವನ ಮಾಡುವುದು ಹೇಗೆ? ನಗರದಲ್ಲಿ ಬಡವರಿಗೆ ಕಳೆದ 25 ವರ್ಷಗಳಿಂದ ಮನೆ ಕೊಟ್ಟಿಲ್ಲ. ಮುಖ್ಯಮಂತ್ರಿಗಳ 1 ಲಕ್ಷ ಮನೆ ಯೋಜನೆಯಡಿ ಅರ್ಜಿ ಸಲ್ಲಿಸಲು 50 ಸಾವಿರ ರು. ಕಟ್ಟಲು ಹಣವಿಲ್ಲ. ನಗರದ ಬಡವರ ಸ್ಥಿತಿ ಹೆದಗಟ್ಟಿದೆ ಎಂದರು.
ಆಟೋ ಚಾಲಕರು, ಮ್ಯಾಕ್ಸಿ ಕ್ಯಾಬ್ ಚಾಲಕರು, ವಿದವೆಯರು, ವಿಶೇಷ ಚೇತನರಿಗೆ ಬಿಪಿಎಲ್ ಕಾರ್ಡ್ ಇಲ್ಲ. ಇದು ಬಹಳ ನೋವಿನ ಸಂಗತಿಯಾಗಿದೆ. ಈ ಬಡವರಿಗೆ ಬಿಪಿಎಲ್ ಕಾರ್ಡ್ ಕೊಟ್ಟು ಅನುಕೂಲ ಮಾಡಿಕೊಡಬೇಕು. ಕನಿಷ್ಠ ಆದಾಯ ಮಿತಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.


