Asianet Suvarna News Asianet Suvarna News

ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮುತ್ತಪ್ಪ ರೈ ನಿಧನ

ಒಂದು ಕಾಲದಲ್ಲಿ ಭೂಗತ ಲೋಕವನ್ನು ಆಳಿ, ನಂತರ ಜಯ ಕರ್ನಾಟಕ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮುತ್ತಪ್ಪ ರೈ ಕೊನೆಯುಸಿರೆಳೆದಿದ್ದಾರೆ. 

Jaya Karnataka president former underworld don Muttappa Rais dies at 68
Author
Bengaluru, First Published May 15, 2020, 6:59 AM IST

ಬೆಂಗಳೂರು (ಮೇ 15): ಒಂದು ಕಾಲದ ಭೂಗತ ಪಾತಕಿ, ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 68 ವರ್ಷ ವಯಸ್ಸಾಗಿತ್ತು. 

"

ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ. 

ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೈ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಏ.30ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಜೀವನ್ಮರಣದ ಹೊರಾಟ ನೆಡೆಸುತ್ತಿದ್ದ ರೈ, ಬೆಳಗ್ಗಿನ ಜಾವ 2:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಹೀಗಾಗಿದ್ದರು ಮಾಜಿ ಭೂಗತ ಪಾತಕಿ

ಮುತ್ತಪ್ಪ ರೈ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ‌ ಅಧ್ಯಕ್ಷ. ತಂದೆ ದಿ. ಎನ್ ನಾರಾಯಾಣ‌ ರೈ, ತಾಯಿ ದಿ. ಸುಶೀಲ ರೈ. ರೈಯವರಿಗೆ ರಿಕ್ಕಿ ಹಾಗೂ ರಾಕಿ ಎಂಬ ಇಬ್ಬರು ಮಕ್ಕಳು. ಪತ್ನಿ ರೇಖಾ ರೈ 2013ರಲ್ಲಿ ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದರು. ಈಗ್ಗೆ ಕೆಲವು ವರ್ಷಗಳ ಹಿಂದೆ ಮತ್ತೊಂದು ವಿವಾಹವಾಗಿದ್ದರು. 

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಡಾವುನ ರೈ, ಸದ್ಯ ಬೆಂಗಳೂರಿನ ಬಿಡದಿ ಬಳಿ ವಾಸಿಸುತ್ತಿದ್ದರು. 

"

ಭೂಗತ ಲೋಕಕ್ಕೆ ಗುಡ್ ಬೈ:
ಭೂಗತ ಲೋಕದಿಂದ ವಿರಮಿಸಿ, ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜಯ ಕರ್ನಾಟಕ ಎಂಬ ರಾಜಕೀಯತೇರ ಸಾಮಾಜಿಕ ಸಂಘಟನೆ ಸ್ಥಾಪಿಸಿ, ಕೆಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದರು. 

ಪುತ್ತೂರಿನ ಫಿಲೊಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ರೈ, ಕೆಲಕಾಲ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಆ ಬಳಿಕ ಬೆಂಗಳೂರಿನಲ್ಲಿ ಸ್ನೇಹಿತರೊಬ್ಬರ ಉದ್ಯಮ ನಡೆಸುತಿದ್ದ ರೈ ಅವರಿಗೆ ಅದು ಹೇಗೆ ಭೂಗತ ಲೋಕದ ನಂಟು ಬೆಳೆದಿತ್ತೋ ಗೊತ್ತಿಲ್ಲ. 

2010ರಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ, ಹಾಗೂ 2019ರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅತಿ ಎತ್ತರದ ಬ್ರಹ್ಮರಥ ಸಮರ್ಪಣೆ‌ ಮಾಡಿದ್ದ ರೈ, ಕಳೆದ ಎರಡು ದಶಕಗಳಿಗಿಂತಲೂ ಅಧಿಕ ಕಾಲದಿಂದ ಪುತ್ತೂರಿನ ಐತಿಹಾಸಿಕ ಕೋಟಿ ಚೆನ್ನಯ ಕಂಬಳದ ಸಾರಥ್ಯ ವಹಿಸುತ್ತಿದ್ದರು.

"

ಆಸ್ಪತ್ರೆಯಿಂದ ಬಿಡದಿಗೆ ಪಾರ್ಥಿವ ಶರೀರ:
ದೊಮ್ಮಲೂರು , ರಿಚ್ಮಂಡ್ ಸರ್ಕಲ್, ಕಾರ್ಪೋರೇಷನ್, ಟೌನ್ ಹಾಲ್,  ಮೈಸೂರು ರಸ್ತೆ ಮೂಲಕ ರೈ ಪಾರ್ಥಿವ ಶರೀರ ಬಿಡದ ತಲುಪಲಿದೆ. ಕೆಂಗೇರಿ ನೈಸ್ ರಸ್ತೆ ಬಳಿ ಸ್ವಲ್ಪ ಹೊತ್ತು ಅಂಬ್ಯುಲೆನ್ಸ್‌ನಲ್ಲಿಯೇ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಬಿಡದಿಯಲ್ಲಿ ಯಾರನ್ನೂ ಬಿಡದಿರಲು ನಿರ್ಧರಿಸಲಾಗಿದ್ದು, ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ.  ಕೇವಲ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ. ಕೆನಡಾದಲ್ಲಿ ಕಿರಿಯ ಪುತ್ರ ರಾಕಿ ರೈ ಸಿಲುಕಿದ್ದು, ವಿಮಾನಯಾನ ಸೇವೆ ಇಲ್ಲದಿರುವುದರಿಂದ ಅಲ್ಲಿಯೇ ಉಳಿದಿದ್ದಾರೆ. 

ಪ್ರಭಾವಿ ರಾಜಕಾರಣಿಗಳ ಜೊತೆಯೂ ನಂಟು ಹೊಂದಿದ್ದರಾದರೂ ಕೊರೋನಾ ರಣಕೇಕೆ ಹಿನ್ನೆಲೆಯಲ್ಲಿ ಯಾರೂ ಅಂತಿಮ ದರ್ಶನಕ್ಕೆ ಬರುವ ಸಾಧ್ಯತೆ ಇಲ್ಲ. 

ಆಸ್ಪತ್ರೆ ಬಳಿ KSRP ತುಕಡಿ: 
ಜೀವನ್ ಭಿಮಾ ನಗರ ಠಾಣಾ ಪೊಲೀಸರು, ಕೆಎಸ್ಆರ್‌ಪಿ ತುಗಡಿಯನ್ನು ನಿಯೋಜಿಸಿಲಾಗಿದ್ದು, ಬಿಗಿ ಬಂದೋಬಸ್ತು ನಿಯೋಜಿಸಲಾಗಿದೆ. ಬಳೆಗ್ಗೆ 9:30ಕ್ಕೆ ಆಸ್ಪತ್ರೆಯಿಂದ ಬಿಡದಿಗೆ ಮೃತದೇಹ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದು, ಸುದ್ದಿ ತಿಳಿದು ಆಸ್ಪತ್ರೆ ಬಳಿ‌ ಬೆಂಬಲಿಗರು ಆಗಮಿಸುತ್ತಿದ್ದಾರೆ. ಆದರೆ, ಯಾರನ್ನೂ ಆಸ್ಪತ್ರೆಯೊಳಗೆ ಬಿಡದೇ, ಪೊಲೀಸರು ತಡೆಯುತ್ತಿದ್ದಾರೆ. ಬಿಡದಿಯ ನಿವಾಸದಲ್ಲಿ ಅಭಿಮಾನಿಗಳು, ಬೆಂಬಲಿಗರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು, ಎನ್ನಲಾಗಿದೆ. 

ಸ್ಥಳಕ್ಕೆ ಎಸಿಪಿ ರವಿಪ್ರಸಾದ್ ಹಾಗೂ ಜೀವನ್ ಭೀಮಾನಗರ ಇನ್ಸ್ಪೆಕ್ಟರ್ ಭೇಟಿ ನೀಡಿದ್ದಾರೆ. 

ಕೆಲವು ವರ್ಷಗಳ ಹಿಂದೆ ಸುವರ್ಣನ್ಯೂಸ್‌ನೊಂದಿಗೆ ಮಾತನಾಡಿದ್ದ ರೈ:

"

 

"

"

Follow Us:
Download App:
  • android
  • ios