ಬೆಂಗಳೂರಿನ ಎಂ.ಜಿ. ರಸ್ತೆಯಲ್ಲೂ ಅಂಚೆ ಇಲಾಖೆಯ 'ಪಾರ್ಸೆಲ್ ಆನ್ ವೀಲ್ಸ್' ಸೇವೆ ಆರಂಭ
ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಮನೆಮನೆಗೆ ಪಾರ್ಸೆಲ್ ತಲುಪಿಸುವ ವಿನೂತನ ಸೇವೆ ಪಾರ್ಸೆಲ್ ಆನ್ ವೀಲ್ಸ್ ಸೇವೆಯನ್ನು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿಯೂ ಆರಂಭಿಸಲಾಗಿದೆ.
ವರದಿ -ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜೂ.26): ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಮನೆಮನೆಗೆ ಪಾರ್ಸೆಲ್ ತಲುಪಿಸುವ ವಿನೂತನ ಸೇವೆ ಪಾರ್ಸೆಲ್ ಆನ್ ವೀಲ್ಸ್ ಸೇವೆಯನ್ನು ಪೀಣ್ಯ, ಅಬ್ಬಿಗೆರೆ ಭಾಗದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿತ್ತು. ಈ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಇದೀಗ ಬೆಂಗಳೂರಿನ ಇತರ ಭಾಗಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಇದರನ್ವಯ ಬೆಂಗಳೂರಿನ ಎಂ.ಜಿ. ರೋಡ್ ನಲ್ಲಿ ಇಂದು ನೂತನ ಅಂಚೆ ವಾಹನಕ್ಕೆ ಚಾಲನೆ ನೀಡಲಾಯಿತು.
ಏನಿದು ಪಾರ್ಸೆಲ್ ಆನ್ ವೀಲ್ಸ್ ಸರ್ವೀಸ್? : ಹಿಂದೆಲ್ಲಾ ಯಾವುದಾದರೂ ಪಾರ್ಸೆಲ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಂಚೆ ಮೂಲಕ ಕಳುಹಿಸಬೇಕು ಅಂತಿದ್ದರೆ ಸ್ಥಳೀಯ ಅಂಚೆ ಕಚೇರಿಗೆ ಹೋಗಬೇಕಾಗಿತ್ತು. ಇವತ್ತಿನ ಬ್ಯುಸಿ ಜಮಾನದಲ್ಲಿ ಮನೆ ಬಾಗಿಲಿಗೆ ಬಂದು ಪಾರ್ಸೆಲ್ ತೆಗೆದುಕೊಂಡು ಹೋಗುವ ಡೋಂಜೋದಂತಹ ವ್ಯವಸ್ಥೆಗಳಿರುವಾಗ ಕಚೇರಿಯವರೆಗೆ ಪಾದ ಸವೆಸುವವರು ಕಡಿಮೆ. ಹಾಗಾಗಿ ಪೋಸ್ಟ್ ಆಫೀಸ್ ನಲ್ಲೂ ಅಂತಹದ್ದೊಂದು ವ್ಯವಸ್ಥೆ ಇದ್ದರೆ ಹೇಗೆ? ಅನ್ನೋ ಪರಿಕಲ್ಪನೆಯಲ್ಲಿ ಆರಂಭಿಸಲಾದ ಯೋಜನೆಯೇ 'ಪಾರ್ಸೆಲ್ ಆನ್ ವೀಲ್ಸ್' ಆಗಿದೆ. ಇದಕ್ಕಾಗಿ ಒಂದು ನಂಬರ್ ಅನ್ನು ಕೊಡಲಾಗಿದ್ದು ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಅಂಚೆ ವಾಹನವೇ ಮನೆ ಬಾಗಿಲಿಗೆ ಹೋಗಿ ಪಾರ್ಸೆಲ್ ಅನ್ನು ಕಲೆಕ್ಟ್ ಮಾಡಿ ತಲುಪಿಸಬೇಕಾದ ಜಾಗಕ್ಕೆ ತಲುಪಿಸುತ್ತಾರೆ.
ಕೆಂಪೇಗೌಡ ಪ್ರಶಸ್ತಿಗೆ ಜಯದೇವ ಆಸ್ಪತ್ರೆ, ನಿತಿನ್ ಕಾಮತ್, ಅದಿತಿ ಅಶೋಕ್ ಆಯ್ಕೆ: 5 ಲಕ್ಷ ರೂ. ನಗದು ಘೋಷಣೆ
ಭರ್ಜರಿ ಜನರ ಸ್ಪಂದನೆ: ಅಂಚೆ ಕಚೇರಿಯ ಈ ಹೊಸ ಸೇವೆಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು ಈಗಾಗಲೇ 20 ದಿನಗಳಲ್ಲಿ 1,100ಕ್ಕೂ ಅಧಿಕ ಪಾರ್ಸೆಲ್ ಬುಕ್ ಆಗಿದೆ. ಪೀಣ್ಯ, ಅಬ್ಬಿಗೆರೆ ವಲಯ ಇಂಡಸ್ಟ್ರಿಯಲ್ ಏರಿಯಾ ಆಗಿದ್ದು ಇದೀಗ ಅದೇ ರೀತಿಯ ರೆಸ್ಪಾನ್ಸ್ ಎಂ.ಜಿ. ರೋಡ್ ನಲ್ಲೂ ದೊರೆಯಲಿದೆ ಎಂದು ಅಂಚೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದ ಸ್ವಾತಂತ್ರ್ಯದಲ್ಲೂ ಅಂಚೆ ಇಲಾಖೆಯ ಪಾತ್ರ ಬಹುದೊಡ್ಡದಿದೆ. ಇದಾದ ನಂತರ, ಫೋನು, ಮೊಬೈಲ್ ಬರುವುದಕ್ಕೆ ಮುನ್ನ ಎಲ್ಲ ಸಂಬಂಧಗಳ ಸಂಪರ್ಕ ಕೊಂಡಿಯಾಗಿದ್ದ ಅಂಚೆ ಇಲಾಖೆ ಇತ್ತೀಚೆಗೆ ತನ್ನ ಪ್ರಸಿದ್ಧಿಯನ್ನು ಕಳೆದುಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಆಧುನಿಕ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಬದಲಾಗುತ್ತಾ ಬಂದಿದ್ದು, ಅಂಚೆ ಸೇವೆಯ ಜೊತೆಗೆ, ಬ್ಯಾಂಕ್ ರೀತಿಯಲ್ಲಿ ಸೇವೆಯನ್ನು ಆರಂಭಿಸಿತ್ತು. ಈಗ ಪಾರ್ಸೆಲ್ ಸೇವೆಯನ್ನೂ ಆರಂಭಿಸಿದೆ.
Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ
ಇತರ ಕೊರಿಯರ್ ವ್ಯವಸ್ಥೆಗಳಿಗಿಂತ ಭಿನ್ನ: ಭಾರತೀಯ ಅಂಚೆ ಇಲಾಖೆಯ ನೆಟ್ವರ್ಕ್ ತುಂಬಾ ವಿಶಾಲವಾಗಿದ್ದು ಹಳ್ಳಿ ಹಳ್ಳಿಗಳನ್ನು ತಲುಪುವ ಭಾರತದ ಏಕೈಕ ವ್ಯವಸ್ಥೆಯಾಗಿದೆ. ಇದರ ಜೊತೆಗೆ ವಿದೇಶಿ ಅಂಚೆ ಕಚೇರಿಗಳೊಂದಿಗೂ ಭಾರತೀಯ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಭಾರತದ ಯಾವುದೇ ಹಳ್ಳಿಯಲ್ಲಿ ಕುಳಿತು ವಿದೇಶದಲ್ಲಿರುವವರಿಗೂ ಸಂದೇಶ ಕಳುಹಿಸಬಹುದಾಗಿದೆ.