Asianet Suvarna News Asianet Suvarna News

ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಇನ್ನಿಲ್ಲ!

ನಿತ್ಯೋತ್ಸವ ಕವಿ ಕೆ. ಎಸ್ ನಿಸಾರ್ ಅಹಮದ್ ಇನ್ನಿಲ್ಲ| ನಿಸಾರ್‌ ಅಹಮದ್ ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ| ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದ ಕೊಡುಗೆಗೆ ಪಂಪಶ್ರೀ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಕವಿ

Indian Poet Kannada Poet KS Nissar Ahmed Dies At 84
Author
Bangalore, First Published May 3, 2020, 2:15 PM IST

ಬೆಂಗಳೂರು(ಮೇ.03): ಕನ್ನಡ ನಾಡು, ನುಡಿಯನ್ನು ಪದಗಳಲ್ಲಿ ವರ್ಣಿಸಿ ಜೋಗದ ಸಿರಿ ಬೆಳಕಿನಲ್ಲಿ ಎಂಬ ಕವಿತೆ ಬರೆದ ಕರುನಾಡಿನ ಹಿರಿಯ ಕವಿ, ಪಂಪ ಪ್ರಶಸ್ತಿ ಪುರಸ್ಕೃತ ಕೆ. ಎಸ್. ನಿಸಾರ್ ಅಹಮದ್ ಇನ್ನಿಲ್ಲ.

"

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕನ್ನಡದ ಹಿರಿಯ ಸಾಹಿತಿ ನಿಸಾರ್ ಅಹಮದ್(84) ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.

ಒಂದೇ ದಿನ 3 ಪುಸ್ತಕ, ಸಾವಣ್ಣ ಪ್ರಕಾಶನ ಹೊಸ ಸಾಹಸ

ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಶ್ರೀ ಅಹಮದ್ ರವರ ಪೂರ್ಣ ಹೆಸರು 'ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್. ಕನ್ನಡ ಸಾಹಿತ್ಯ ಲೋಕಕ್ಕೆ ಇವರು ನೀಡಿದ್ದ ಅಪಾರ ಕೊಡುಗೆಗೆ ಪಂಪ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದರೂ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದರು.

ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 5 ಫೆಬ್ರವರಿ 1936 ರಲ್ಲಿ ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994 ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.

Indian Poet Kannada Poet KS Nissar Ahmed Dies At 84

ನಿಸಾರ್ ಅಹಮದ್ ಸುಮಾರು 25 ಕೃತಿಗಳನ್ನು ರಚಿಸಿದ್ದು, ನಿತ್ಯೋತ್ಸವ ಹಾಗೂ ಗಾಂಧಿ ಬಜಾರ್ ಇವರ ಪ್ರಸಿದ್ಧ ಕವನ ಸಂಕಲನಗಳು. ಅಲ್ಲದೇ ಕನ್ನಡದಲ್ಲಿ ಪ್ರಥಮ ಬಾರಿಗೆ ಭಾವಗೀತೆ ಕ್ಯಾಸೆಟ್ ತಂದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ.

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ....

ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅಪಾರ ಸಾಹಿತ್ಯ ಭಂಡಾರವನ್ನು ಬಿಟ್ಟು ಅಗಲಿದ್ದಾರೆ. ಕನ್ನಡ ಸಾರಸತ್ವ ಲೋಕಕ್ಕೆ ಸಿಡಿಲು ಎರಗಿದಂತಹ ಸುದ್ದಿ ಬಂದು ಅಪ್ಪಳಿಸಿದೆ.

ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಂದು ಜನಿಸಿದರು. 1959ರಲ್ಲಿ ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು. ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತ ಸಾಹಿತ್ಯ ಕೃಷಿ ಆರಂಭಿಸಿದರು.

'ಕುವೆಂಪು ಅವರಿಗೆ ನೋಬೆಲ್ ನೀಡಿ' 

21 ಕವನ ಸಂಕಲನ, 14 ವೂಚಾರಿಕ ಕೃತಿ, ಮಕ್ಕಳ ಶಾಹಿತ್ಯ, ಅನುವಾದ, ಸಂಪಾದನಾ ಗ್ರಂಥ ಎಲ್ಲದರಲ್ಲಿಯೂ ನಿಸಾರ್ ಪ್ರೌಢಮೆ ಸಾಧಿಸಿದ್ದರು .

ಗಾಂಧಿಬಜಾರು ಮತ್ತು ನಿತ್ಯೋತ್ಸವ ದೊಡ್ಡ ಹೆಸರು ತಂದುಕೊಟ್ಟವು. ನಿತ್ಯೋತ್ಸವ ಗೀತೆ ಕನ್ನಡ ನಾಡಿನಲ್ಲಿ ತನ್ನದೆ ಹೊಸ ಸಂಗೀತ ಮತ್ತು ಸಾಹಿತ್ಯ ಲೋಕ ಸೃಷ್ಟಿಗೆ ಕಾರಣವಾಯಿತು.

ಸುಗಮ ಕ್ಷೇತ್ರಕ್ಕೂ ನಿಸಾರ್ ಅಹಮದ್ ಕವನಗಳಿಗೂ ಬಿಡಸಲಾರದ ನಂಟು.  ನಿಸಾರ್ ಕವನಗಳನ್ನು ಆಧರಿಸಿದ ಆಲ್ಬಂಗಳು ಸದಭಿರುಚಿಯ ಹೊಸ ಕೇಳುಗ ಲೋಕ ಸೃಷ್ಟಿಗೆ ಕಾರಣವಾಯಿತು .

ನಿಸಾರ್ ಅಹಮದ್  ಅವರನ್ನು ಸಾಹಿತ್ಯ ಲೋಕ ಸಂವೇದನಾಶೀಲ ಕವಿ ಎಂದೇ ಕೊಂಡಾಡುತ್ತದೆ.  1978 ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ. ಸುಗಮ ಸಂಗೀತದೊಂದಿಗೆ ಬೆಸೆದುಕೊಂಡಿದೆ.  ನಾಡಗೀತೆ, ರೈತಗೀತೆಯೊಂದಿಗಿನ ಸ್ಥಾನವನ್ನು ನಿತ್ಯೋತ್ಸವ ಕವಿತೆ ಹೊಂದಿದೆ.

ಸಂವೇದನೆ, ವಿಡಂಬನೆ, ತಿಳಿಹಾಸ್ಯ ನಿಸಾರ್ ಅಹಮದ್ ಅವರ ವಿಶೇಷತೆ. ಚಿಂತನೆ, ಜಾಗೃತಿ, ಮತ್ತು ವೈಚಾರಿಕತೆ ಇನ್ನೊಂದು ಆಯಾಮ. ಶೇಕ್ಸ್ ಪೀಯರ್ ನಾಟಕಗಳನ್ನು ಕನ್ನಡಕ್ಕೆ ಕಾವ್ಯಾತ್ಮಕವಾಗಿಯೇ ತಂದ ಅನುವಾದಕ. ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ಬಾಂಧವ್ಯ ಹೊಂದಿದ್ದ ಲೇಖಕ. ಗೋಕಾಕ್ ಚಳವಳಿಯಲ್ಲಿ ಕನ್ನಡದ ಹೋರಾಟಕ್ಕೆ ಕೈಜೋಡಿಸಿದ್ದ ಚೇತನ ನಮ್ಮಿಂದ ಮರೆಯಾಗಿದೆ. ಕನ್ನಡ ಸಾಹಿತ್ಯ ಲೋಕ ಅತ್ಯುತ್ತಮ ವಿಮರ್ಶಕರನ್ನು ಕಳೆದುಕೊಂಡಿದೆ. 

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಅಂಡಲೆಯುವ ನಾವು ನೀವು –
ಕುರಿಗಳು ಸಾರ್ ಕುರಿಗಳು;

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನ್ನದಿದ್ದರು ತೇಗುತಿರುವ,
ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ
ನಾವು ನೀವು ಅವರು ಇವರು
ಕುರಿಗಳು ಸಾರ್ ಕುರಿಗಳು.

ಈ ಕವಿತೆ ಸಹ ಅಷ್ಟೆ ಪ್ರಸಿಸ್ಥಿ ಹೊಂದಿತ್ತು.  ರಾಜಕೀಯದ  ಸ್ಥಿತಿಗತಿಯನ್ನು ತಮ್ಮ ಕವನದ ಮೂಲಕವೇ ವಿಡಂಬನೆಗೆ ಎಳೆದು ತಂದಿದ್ದರು

ಪ್ರಶಸ್ತಿ ಪುರಸ್ಕಾರಗಳು
* 2006 ರ ಮಾಸ್ತಿ ಪ್ರಶಸ್ತಿ
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಗೊರೂರು ಪ್ರಶಸ್ತಿ
*  ಅನಕೃ ಪ್ರಶಸ್ತಿ
*  ಕೆಂಪೇಗೌಡ ಪ್ರಶಸ್ತಿ
* ಪಂಪ ಪ್ರಶಸ್ತಿ
*  1981 ರ ರಾಜ್ಯೋತ್ಸವ ಪ್ರಶಸ್ತಿ
* 2003 ರ ನಾಡೋಜ ಪ್ರಶಸ್ತಿ
*  2006 ರ ಅರಸು ಪ್ರಶಸ್ತಿ
ಅಲ್ಲದೇ 2006ರ  ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಮುಂಬೈನೊಂದಿಗೂ ನಂಟು: ಮುಂಬೈ ಕನ್ನಡಿಗರೊಂದಿಗೂ ನಿಸಾರ್ ವಿಶೇಷ ಬಾಂಧವ್ಯ ಹೊಂದಿದ್ದರು.  ಮುಂಬಯಿಯಲ್ಲಿ ಪ್ರತಿ ವರ್ಷವೂ, 'ಮುಂಬಯಿ ವಿಶ್ವವಿದ್ಯಾಲಯ,' ಹಾಗೂ 'ಮೈಸೂರ್ ಆಸೋಸಿಯೇಷನ್' ಜಂಟಿಯಾಗಿ ಈ ಉಪನ್ಯಾಸ ಮಾಲಿಕೆಯನ್ನು ಆಯೋಜಿಸುತ್ತಾ ಬಂದಿದ್ದು  2011  ರ ಸಾಲಿನ, 'ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಡಾ.ಕೆ.ಎಸ್.ನಿಸಾರ್ ಅಹಮದ್, ಆಹ್ವಾನಿತ ಭಾಷಣಕಾರರಾಗಿ ಆಗಮಿಸಿ ತಿಳಿವಳಿಕೆ ಹೆಚ್ಚಿಸಿದ್ದರು .


 

 

Follow Us:
Download App:
  • android
  • ios