Asianet Suvarna News Asianet Suvarna News

ಯುದ್ಧಕ್ಕೂ ನಿಯಮ ಹೊಂದಿದ್ದ ಭಾರತ: ಬಿ.ಎಲ್. ಸಂತೋಷ್‌

: ಭಾರತೀಯ ಮೂಲದ ವಿಚಾರಗಳಾದ ರಾಮರಾಜ್ಯ, ಮಹಾತ್ಮ ಗಾಂಧಿಯವರ ಸರ್ವೋದಯ ಮತ್ತು ದೀನದಯಾಳ್‌ ಉಪಾಧ್ಯಾಯ ಅವರ ಅಂತ್ಯೋದಯ ಪರಿಕಲ್ಪನೆಗಳೆಲ್ಲವೂ ಪರಸ್ಪರ ಒಂದಕ್ಕೊಂದು ಪೂರಕವಾಗಿವೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದ್ದಾರೆ.

India had rules for war says  BL Santosh bengalururav
Author
First Published Sep 26, 2022, 6:05 AM IST

ಬೆಂಗಳೂರು (ಸೆ.26) : ಭಾರತೀಯ ಮೂಲದ ವಿಚಾರಗಳಾದ ರಾಮರಾಜ್ಯ, ಮಹಾತ್ಮ ಗಾಂಧಿಯವರ ಸರ್ವೋದಯ ಮತ್ತು ದೀನದಯಾಳ್‌ ಉಪಾಧ್ಯಾಯ ಅವರ ಅಂತ್ಯೋದಯ ಪರಿಕಲ್ಪನೆಗಳೆಲ್ಲವೂ ಪರಸ್ಪರ ಒಂದಕ್ಕೊಂದು ಪೂರಕವಾಗಿವೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದ್ದಾರೆ. ಭಾನುವಾರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಆಯೋಜಿಸಿದ್ದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯರ 106ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾತನಾಡಿದರು.

ಭಾರತೀಯರ ಬದುಕು, ಮೌಲ್ಯಗಳು ಗಟ್ಟಿಯಾಗಿ ಪ್ರತಿಪಾದಿಸಿದ ದೀನ್‌ ದಯಾಳ್‌ ಅಪರೂಪದ ದೇಶಪ್ರೇಮಿ: ಸಿಎಂ

ದೀನದಯಾಳ್‌ ಉಪಾಧ್ಯಾಯ ಅವರ ವಿಚಾರಗಳು ಕಾಲಾತೀತವಾಗಿದೆ. ಅವರು ವಿಚಾರ ಮಂಡನೆ ಮಾಡುವ ಸಂದರ್ಭದಲ್ಲಿ ಇದ್ದಷ್ಟೆಪ್ರಸ್ತುತತೆಯನ್ನು ಈಗಲೂ ಉಳಿಸಿಕೊಂಡಿದೆ. ಮುಂದೆಯೂ ಉಳಿಸಿಕೊಳ್ಳಲಿದೆ. ಜನಸಾಮಾನ್ಯರ ದೈನಂದಿನ ಚಟುವಟಿಕೆಗಳನ್ನು ಆಧಾರಿಸಿ ಅವರು ವಿಚಾರಗಳನ್ನು ಮಂಡಿಸಿದ್ದಾರೆ. ಅವರು ಸಿದ್ಧಾಂತ ಮತ್ತು ಜೀವನ ಮೌಲ್ಯಗಳ ವಿಷಯದಲ್ಲಿ ಯಾವತ್ತೂ ರಾಜಿಯಾಗಲಿಲ್ಲ ಎಂದರು.

ಇಂದು ತಂತ್ರಜ್ಞಾನ ಮಾನವನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮಾನವನ ಮನಸ್ಸನ್ನು ಸಂಕುಚಿತಗೊಳಿಸುತ್ತಿದೆ. ನಗರೀಕರಣದಿಂದಾಗಿ ಕಳೆದ 20-30 ವರ್ಷಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಬಡವರು ಮಧ್ಯಮ ವರ್ಗಕ್ಕೆ ಏರಿಕೆ ಕಂಡಿದ್ದಾರೆ. ಆದರೆ ಇದೇ ವೇಳೆ ಮಾನವನ ಬಾಂಧವ್ಯಗಳು ದೂರವಾಗಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನ ಸಂವೇದನೆ, ಮಿಡಿತ ಮತ್ತು ಮಾನವೀಯ ಮೌಲ್ಯಗಳ ಸ್ಪರ್ಶ ಹೊಂದಿಲ್ಲದಿದ್ದರೆ ಜಗತ್ತಿಗೆ ಹಾನಿಯಾಗುತ್ತದೆ. ನನ್ನಿಂದ ಎಲ್ಲವೂ ಸಾಧ್ಯ ಎಂಬ ಅಹಂಕಾರದ ಪಾಶ್ಚಾತ್ಯ ಧೋರಣೆಯಿಂದ ಒಳಿತಾಗದು. ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಯಾವುದೇ ವಿಚಾರ, ವ್ಯಕ್ತಿ ಅಂತಿಮ ಎಂಬ ಮನೋಭಾವ ಇಲ್ಲ. ಆದ್ದರಿಂದ ಭಾರತ ಎಂದಿಗೂ ಯಾವುದೇ ಸಂಘರ್ಷಕ್ಕೆ ಪೋಷಣೆ ನೀಡಿಲ್ಲ. ಯುದ್ಧಕ್ಕೂ ನಿಯಮ ಹೊಂದಿದ್ದ ದೇಶ ಭಾರತ ಎಂದು ಹೇಳಿದರು.

63 ಅಡಿ ಎತ್ತರದ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಜಗತ್ತಿನ ಮುಂದುವರಿದ ದೇಶಗಳು ಎಂದು ಕರೆಸಿಕೊಳ್ಳುವ ಕುಟೀಲ ನೀತಿಯನ್ನು ಅನುಸರಿಸುತ್ತಿವೆ. ಅನ್ಯ ದೇಶಗಳಿಗೆ ಒಳ್ಳೆಯದಾಗಲಿ ಎಂಬ ಮನೋಭಾವ ಹೊಂದಿಲ್ಲದ ಈ ದೇಶಗಳು ಇತರ ದೇಶಗಳನ್ನು ತಮ್ಮ ಹಿತಕ್ಕಾಗಿ ಬಳಸಿಕೊಳ್ಳುತ್ತಿವೆ. ಕೆಲವು ದಶಕಗಳ ಹಿಂದೆ ಉದಾರ ಮನೋಭಾವ ಹೊಂದಿದ್ದ ಇರಾನ್‌ನಂತಹ ದೇಶ ಮೂಲಭೂತವಾದಿಗಳ ಕಪಿಮುಷ್ಠಿಗೆ ಸಿಲುಕಲು ಅಮೆರಿಕ ಕಾರಣವಾಯಿತು ಎಂದು ಸಂತೋಷ್‌ ವಿವರಿಸಿದರು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌, ಬೆಂಗಳೂರು ಮಹಾನಗರದ ಸಂಘಚಾಲಕ ಡಾ ಎಂ.ಕೆ.ಶ್ರೀಧರ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios