ಭಾಷಣ ಮಾಡುವಾಗ ಪಕ್ಕದ ಮಸೀದಿಯಿಂದ ಆಜಾನ್ ಶಬ್ದ ಕೇಳಿಬಂದ ಹಿನ್ನೆಲೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ 10 ನಿಮಿಷ ಮೌನವಾದ ಪ್ರಸಂಗ ನಡೆಯಿತು. ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡುತ್ತಿದ್ದರು. ಈ ವೇಳೆ ಪಕ್ಕದ ಮಸೀದಿಯಿಂದ ಆಜಾನ್ ಘೋಷಣೆ ಕೇಳಿಬಂತು. ಶಬ್ದ ಕೇಳಿಸುತ್ತಿದ್ದಂತೆಯೇ 10 ನಿಮಿಷಗಳ ಕಾಲ ಭಾಷಣ ನಿಲ್ಲಿಸಿ ಖರ್ಗೆ ಮೌನವಾದರು

ಕಲಬುರಗಿ (ಏ.17): ಭಾಷಣ ಮಾಡುವಾಗ ಪಕ್ಕದ ಮಸೀದಿಯಿಂದ ಆಜಾನ್ ಶಬ್ದ ಕೇಳಿಬಂದ ಹಿನ್ನೆಲೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ 10 ನಿಮಿಷ ಮೌನವಾದ ಪ್ರಸಂಗ ನಡೆಯಿತು. ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡುತ್ತಿದ್ದರು. ಈ ವೇಳೆ ಪಕ್ಕದ ಮಸೀದಿಯಿಂದ ಆಜಾನ್ ಘೋಷಣೆ ಕೇಳಿಬಂತು. ಶಬ್ದ ಕೇಳಿಸುತ್ತಿದ್ದಂತೆಯೇ 10 ನಿಮಿಷಗಳ ಕಾಲ ಭಾಷಣ ನಿಲ್ಲಿಸಿ ಖರ್ಗೆ ಮೌನವಾದರು. 

Add Asianetnews Kannada as a Preferred SourcegooglePreferred

ಆಜಾನ್ ಮುಗಿಯುತ್ತಿದ್ದಂತೆಯೇ, ಆಯ್ತಾ? ಎಂದು ಖರ್ಗೆ ಪ್ರಶ್ನಿಸಿ ಮಾತು ಮುಂದುವರೆಸಿದರು. ಈ ವೇಳೆ ಸಭೆಯಲ್ಲಿ ಬಹು ಸಂಖ್ಯೆಯಲ್ಲಿ ಸೇರಿದ್ದ ಮುಸಲ್ಮಾನರು ಜೋರಾಗಿ ಕರತಾಡನ ಮಾಡುವ ಮೂಲಕ ಖರ್ಗೆ ನಡೆಯನ್ನು ಸ್ವಾಗತಿಸಿದರು.

ಸಿಬಿಐ, ಇ.ಡಿ, ಐಟಿ ಬಳಸಿ ಬಿಜೆಪಿಯಿಂದ ಕುತಂತ್ರ:

ಬಿಜೆಪಿಯವರು ಇ.ಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಗುರಾಣಿಯಂತೆ ಬಳಸಿ ಕಾಂಗ್ರೆಸ್‌ ಅನ್ನು ಹಣಿಯುವ ಯತ್ನಕ್ಕೆ ಮುಂದಾಗಿದ್ದಾರೆ. ಆದರೆ, ಬಿಜೆಪಿಯ ಈ ಕುತಂತ್ರಕ್ಕೆ ನಾವು ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ನೀವಿಬ್ಬರೂ ಒಗ್ಗಟ್ಟಾಗಿ ಇರದಿದ್ದರೆ ಮೋದಿ - ಶಾ ದಾಳಿ ಮಾಡ್ತಾರೆ: ಸಿದ್ದು, ಡಿಕೆಗೆ ಖರ್ಗೆ ಎಚ್ಚರಿಕೆ!

ನಗರದಲ್ಲಿ ಬುಧವಾರ ನಡೆದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು. ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಯ ವಿಚಾರದಲ್ಲಿ ಇ.ಡಿಯವರು ಸೋನಿಯಾ ಗಾಂಧಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರುವ ಪ್ರಕರಣ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಖರ್ಗೆ, ಕಾಂಗ್ರೆಸ್‌ ಹಣಿಯಲು ಬಿಜೆಪಿಯವರು ಇ.ಡಿ (ಜಾರಿ ನಿರ್ದೇಶನಾಲಯ), ಸಿಬಿಐ (ಕೇಂದ್ರೀಯ ತನಿಖಾ ದಳ), ಐಟಿ (ಆದಾಯ ತೆರಿಗೆ ಇಲಾಖೆ)ಸಂಸ್ಥೆಗಳನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯ ಈ ಕುತಂತ್ರಕ್ಕೆ ನಾವು ಜಗ್ಗೋದಿಲ್ಲ, ಬಗ್ಗೋದಿಲ್ಲ. ನ್ಯಾಷನಲ್‌ ಹೆರಾಲ್ಡ್‌ ಸೇರಿದಂತೆ 3 ಪತ್ರಿಕೆಗಳನ್ನು 1937ರಲ್ಲಿ ನೆಹರೂ ಅವರು ಸ್ಥಾಪಿಸಿ ಜನರು ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಪ್ರಯತ್ನಿಸಿದ್ದರು. ಅಂತಹ ಪತ್ರಿಕೆಯ ಮೇಲೆ ಇ.ಡಿ ದಾಳಿ ನಡೆಸಿ ಸೋನಿಯಾ ಮೇಲೆ ಕೇಸ್‌ ದಾಖಲಿಸಲಾಗಿದೆ. ಬಿಜೆಪಿಯವರಿಗೆ ಈ ವಿಷಯದಲ್ಲಿ ನಾಚಿಕೆಯಾಗಬೇಕು ಎಂದು ಖರ್ಗೆ ಮಾತಿನಲ್ಲೇ ತಿವಿದರು.

ಸಂಘ ಪರಿವಾರದವರ ಪತ್ರಿಕೆಯಾಗಿರುವ ಆರ್ಗನೈಸರ್, ದೇಶದ ಜನರ ಒಗ್ಗಟ್ಟು ಕೆಡಿಸುವ ಕೆಲಸ ಮಾಡುತ್ತಿದೆ. ಅದರ ವಿರುದ್ಧ ಯಾಕೆ ಯಾವುದೇ ಕ್ರಮವಿಲ್ಲ?. ದೇಶಭಕ್ತಿಗೆ ಸ್ಫೂರ್ತಿಯಾಗಿದ್ದ ನ್ಯಾಷನಲ್‌ ಹೆರಾಲ್ಡ್‌ ಮೇಲೇಕೆ ಕೇಸ್‌?. ನೀವೇನು ಅದಕ್ಕೆ ಚಂದಾ ಕೊಟ್ಟಿದ್ದೀರಾ?. ನಿಮ್ಮದೇನು ಗಂಟು ಹೋಗುತ್ತದೆ? ಎಂದು ಅವರು ಕಿಡಿಕಾರಿದರು.

ದನ್ನೂ ಓದಿ:ಪ್ರಧಾನಿ ಮೋದಿ ಗಂಡ್ಸು, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ: ಸಂಸದ ಜಿಗಜಿಣಗಿ ಕಿಡಿ

ಇತ್ತೀಚಿನ ದಿನಗಳಲ್ಲಿ ಆರ್ಗನೈಸರ್‌ ಪತ್ರಿಕೆಯಲ್ಲಿ ಬಂದಿರುವ ಲೇಖನವನ್ನು ಖರ್ಗೆ ಪ್ರಸ್ತಾಪಿಸಿದರು. ಈಗ ವಕ್ಫ್ ಆಗಿದೆ. ಮುಂದೆ ಕ್ರಿಶ್ಚಿಯನ್‌ ಸಮುದಾಯದ ಬಳಿ ಇರುವ 7 ಕೋಟಿ ಹೆಕ್ಟೇರ್ ಜಮೀನಿನ ಸರದಿ ಎಂದು ಆರ್ಗನೈಜರ್ ಬರೆದಿತ್ತು. ಬಳಿಕ, ಆ ಮಾತನ್ನು ವಾಪಸ್ ಪಡೆದುಕೊಂಡಿತ್ತು. ಈ ಬಗ್ಗೆ ನನ್ನ ಬಳಿ ಸಾಕ್ಷ್ಯ ಇದೆ. ದೇಶದ ಐಕ್ಯತೆ ಒಡೆಯುವ ಆರೆಸ್ಸೆಸ್‌ ಪತ್ರಿಕೆ ಬಗ್ಗೆ ಮೌನ ಯಾಕೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಕುಟುಂಬದಲ್ಲಿ ದೇಶಕ್ಕಾಗಿ ಇಬ್ಬರ ಪ್ರಾಣ ಹೋಗಿದೆ. ಆ ಕುಟುಂಬ ಅಷ್ಟಾದರೂ ಹೆದರದೆ ದೇಶಸೇವೆಗೆ ಬದ್ಧವಾಗಿದೆ. ತ್ಯಾಗ-ಬಲಿದಾನದ ಪ್ರತೀಕವಾಗಿರುವ ಗಾಂಧಿ ಕುಟುಂಬ ನಿಮ್ಮ ಐಟಿ, ಇಡಿ, ಸಿಬಿಐಯಂತಹ ಪೊಳ್ಳು ದಾಳಿಗಳಿಗೆ ಹೆದರೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.