Asianet Suvarna News Asianet Suvarna News

ನೌಕರ ಮೃತಪಟ್ಟರೆ ಸೋದರಿಗೆ ಅನುಕಂಪ ನೌಕರಿ ಇಲ್ಲ: ಹೈಕೋರ್ಟ್‌

ಮೃತ ನೌಕರನ ಕುಟುಂಬ ಸದಸ್ಯರು ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೇಮಕಾತಿ ಕ್ಲೇಮು ಮಾಡಬೇಕಿದೆ ಎಂದು ಕಾನೂನು ಹೇಳುತ್ತದೆ. ಅದು ಸಹ ಅನಾರೋಗ್ಯದಿಂದ ಸಾವನ್ನಪ್ಪಿದ ಸರ್ಕಾರಿ ನೌಕರನ ಮೇಲೆ ಅಲಂಬಿತರಾಗಿದ್ದೆವು ಎಂಬುದನ್ನು ದೃಢಪಡಿಸುವ ಸಾಕ್ಷ್ಯಾಧಾರಗಳ ಮೇಲೆ ಅನುಕಂಪದ ಉದ್ಯೋಗವನ್ನು ಕ್ಲೇಮು ಮಾಡಬಹುದಾಗಿದೆ. 

If the Employee Dies No Compassionate Job for the Sister Says High Court of Karnataka grg
Author
First Published Sep 14, 2023, 11:25 AM IST

ಬೆಂಗಳೂರು(ಸೆ.14):  ಸರ್ಕಾರಿ ನೌಕರ ಮೃತಪಟ್ಟಲ್ಲಿ ಅವರ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ಉದ್ಯೋಗ ಒದಗಿಸಲು ಕೆಪಿಟಿಸಿಲ್‌ ಮತ್ತು ಬೆಸ್ಕಾಂಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ತುಮಕೂರು ಜಿಲ್ಲೆ ಗೆದ್ಲಹಳ್ಳಿ ನಿವಾಸಿ ಜಿ.ಎಂ. ಪಲ್ಲವಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಮೇಲ್ಮನವಿದಾರೆಯು ಮೃತ ನೌಕರ (ಸಹೋದರ) ಸಾವನ್ನಪ್ಪಿದ ವೇಳೆ ಅವರ ಆದಾಯದ ಮೇಲೆ ತಾನು ಅಲವಂಬಿಸಿದ್ದೆ ಎಂಬುದನ್ನು ದೃಢಪಡಿಸುವ ಸಾಕ್ಷವನ್ನು ಸಲ್ಲಿಸಿಲ್ಲ. ಹಾಗೆಯೇ, ಅನುಕಂಪದ ಉದ್ಯೊಗ ಪಡೆಯಲು ಮೃತ ನೌಕರನ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳು ಇಲ್ಲವಾಗಿದೆ. ಆದ್ದರಿಂದ ಮೇಲ್ಮನವಿದಾರೆಯನ್ನು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಪರಿಗಣಿಸಲು ನಿರಾಕರಿಸಿದ ಏಕ ಸದಸ್ಯ ನ್ಯಾಯಪೀಠದ ಆದೇಶದಲ್ಲಿ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಬೆಂಗಳೂರು ಟ್ರಾಫಿಕ್: ಶಾಲೆ, ಕೈಗಾರಿಕೆಗಳ ಸಮಯ ಬದಲಿಗೆ ಹೈಕೋರ್ಟ್ ಸೂಚನೆ

ಅನುಕಂಪದ ಆಧಾರದ ಮೇಲೆ ನೇಮಕಾತಿಯು ಸಂವಿಧಾನದ 14 ಮತ್ತು 16 ನೇ ವಿಧಿಗಳಲ್ಲಿ ಜಾರಿಗೆ ತಂದಿರುವ ಸಾರ್ವಜನಿಕ ಉದ್ಯೋಗದಲ್ಲಿ ಸಮಾನತೆಯ ಸಾಮಾನ್ಯ ನಿಯಮಕ್ಕೆ ಒಂದು ಅಪವಾದವಾಗಿದೆ. ಹಾಗಾಗಿ, ಅನುಕಂಪದ ಉದ್ಯೊಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನೌಕರರ ಕುಟುಂಬ ಸದಸ್ಯ ವ್ಯಕ್ತಿ ಎಂಬುದಕ್ಕೆ ಕಾನೂನು ರೂಪಕರು ಹಲವು ಪದಗಳನ್ನು ನಿರ್ದಿಷ್ಟ ಪಡಿಸಿರುವಾಗ ಕುಟುಂಬದ ವ್ಯಾಖ್ಯಾನಕ್ಕೆ ನ್ಯಾಯಾಲಯ ಒಂದು ಪದವನ್ನು ಸೇರಿಸಲು ಮತ್ತು ರದ್ದುಪಡಿಸಲು ಸಾಧ್ಯವಿಲ್ಲ. ನಿಯಮಕ್ಕೆ ವಿರುದ್ಧವಾಗಿರುವ ವಾದವನ್ನು ಒಪ್ಪಿದರೆ, ನಿಯಮವನ್ನು ಮತ್ತೆ ಬರೆದಂತಾಗುತ್ತದೆ. ಹಾಗಾಗಿ, ಮೇಲ್ಮನವಿದಾರೆಯ ವಾದ ಹಾಗೂ ಮನವಿ ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ಆದೇದಲ್ಲಿ ವಿವರಿಸಿದೆ.

ಮೃತ ನೌಕರನ ಕುಟುಂಬ ಸದಸ್ಯರು ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೇಮಕಾತಿ ಕ್ಲೇಮು ಮಾಡಬೇಕಿದೆ ಎಂದು ಕಾನೂನು ಹೇಳುತ್ತದೆ. ಅದು ಸಹ ಅನಾರೋಗ್ಯದಿಂದ ಸಾವನ್ನಪ್ಪಿದ ಸರ್ಕಾರಿ ನೌಕರನ ಮೇಲೆ ಅಲಂಬಿತರಾಗಿದ್ದೆವು ಎಂಬುದನ್ನು ದೃಢಪಡಿಸುವ ಸಾಕ್ಷ್ಯಾಧಾರಗಳ ಮೇಲೆ ಅನುಕಂಪದ ಉದ್ಯೋಗವನ್ನು ಕ್ಲೇಮು ಮಾಡಬಹುದಾಗಿದೆ ಎಂಧು ತಿಳಿಸಿದೆ.

ಕರ್ನಾಟಕ ನಾಗರೀಕ ಸೇವೆಗಳ ಅನುಕಂಪದ ಆಧಾರದ ನೇಮಕಾತಿ ನಿಯಮಗಳು 1996ರ 2(1)(ಬಿ) ಪ್ರಕಾರ ಒಂದು ವೇಳೆ ವಿವಾಹಿತ ಪುರುಷ ಸರ್ಕಾರಿ ನೌಕರ ಅನಾರೋಗ್ಯದಿಂದ ಸೇವಾವಧಿಯಲ್ಲಿ ಮೃತಪಟ್ಟಲ್ಲಿ ಅವರನ್ನು ಅವಲಂಭಿಸಿರುವ ವಿಧವಾ ಪತ್ನಿ, ಮಗ ಅಥವಾ ಮಗಳು (ಅವಿವಾಹಿತೆ, ವಿವಾಹಿತೆ, ವಿಚ್ಛೇದಿತೆ ಹಾಗೂ ವಿಧವೆ) ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಬಹುದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದರಂತೆ ಈ ವ್ಯಾಖ್ಯಾನದಲ್ಲಿ ಸಹೋದರಿಯನ್ನು ಸೇರಿಸಿಲ್ಲ. ಸಹೋದರಿಯನ್ನು ಮೃತ ನೌಕರನ ಕುಟುಂಬದ ಸದಸ್ಯೆಯಾಗಿ ಅರ್ಥೈಸಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ತಿಳಿಸಿದೆ.

Follow Us:
Download App:
  • android
  • ios