Asianet Suvarna News Asianet Suvarna News

ಸಿಡಿ ಪ್ರಕರಣ ಬಗ್ಗೆ ಸಿಎಂ ಜತೆ ಚರ್ಚಿಸುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 

I Will Discuss the CD case with the CM Says Home Minister Araga Jnanendra gvd
Author
First Published Feb 2, 2023, 11:05 AM IST

ಬೆಂಗಳೂರು (ಫೆ.02): ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸೀಡಿ ಪ್ರಕರಣವನ್ನು ಸಿಬಿಐಗೆ ಕೊಡುವ ವಿಷಯ ಸಂಬಂಧ ರಮೇಶ್‌ ಜಾರಕಿಹೊಳಿ ನನಗೆ ಮಾಹಿತಿ ನೀಡಿದ್ದಾರೆ. 

ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಮಾಡಬೇಕಾಗುತ್ತದೆ. ಅಂತಿಮವಾಗಿ ಅವರೇ ನಿರ್ಣಯ ಕೈಗೊಳ್ಳುತ್ತಾರೆ. ಯಾರೇ ಆಗಲಿ ಸೀಡಿ ಮೂಲಕ ಯಾರನ್ನಾದರೂ ತೇಜೋವಧೆ ಮಾಡುವುದು ತಪ್ಪು. ಆ ರೀತಿ ಏನಾದರೂ ಇದ್ದರೆ ಅಂಥವರ ವಿರುದ್ಧ ಕಾನೂನಿನ ಕಠಿಣ ಕ್ರಮವಾಗಲಿದೆ ಎಂದರು.

ಚುನಾವಣೆ ಹಿನ್ನೆಲೆ ವರ್ಗಾವಣೆ: ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಸ್ಯಾಂಟ್ರೋ ರವಿ ಪ್ರಕರಣದ ತನಿಖಾಧಿಕಾರಿಯನ್ನು ವರ್ಗಾವಣೆ ಮಾಡಿರುವುದು ನಾವಲ್ಲ. ಚುನಾವಣೆ ಆಯೋಗದ ಸೂಚನೆ ಮೇರೆಗೆ ವರ್ಗಾವಣೆ ಆಗಿದೆ. ಆಯೋಗದ ನಿಯಮಗಳು ಕಠಿಣವಾಗಿದ್ದು, ಈ ನಿಯಮದಡಿ ವರ್ಗಾವಣೆಯ ಕ್ರಮವಾಗಿದೆ ಎಂದು ಸಮಜಾಯಿಷಿ ನೀಡಿದರು.

ಸಿಡಿ ಕೇಸ್‌ ಸಿಬಿಐಗೆ ವಹಿಸುವಂತೆ ಡಿಕೆಶಿ ಒತ್ತಾಯಿಸಲಿ: ಕೆ.ಎಸ್‌.ಈಶ್ವರಪ್ಪ

ಮಲ್ಲಂದೂರು ಜನರ ಜೀವ​ನ​ವೇ ಪವಾಡ: ನೂರಾರು ವರ್ಷಗಳಿಂದ ಮಲ್ಲಂದೂರು ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಕುಟುಂಬಗಳ ಭೂಮಿ ದಾಖಲೆಗಳು ಕ್ರಮಬದ್ಧ ಆಗಿಲ್ಲದ ಕಾರಣ ಅತಂತ್ರದಿಂದಲೇ ಬದುಕು ಸಾಗಿಸುವಂತಾಗಿದೆ. ಮಲ್ಲಂದೂರಿನಲ್ಲಿ ಜನರು ಬದುಕು ಸಾಗಿಸುತ್ತಿರುವುದೇ ಒಂದು ಪವಾಡವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿ​ಪ್ರಾ​ಯ​ಪ​ಟ್ಟರು. 

ಆಗುಂಬೆ ಸಮೀಪದ ಮಲ್ಲಂದೂರಿನ ಶಾಲಾ ಆವರಣದಲ್ಲಿ ಸಂಜೆ ನಡೆದ ಗ್ರಾಮಸ್ಥರು ಹಾಗೂ ತಾಲೂಕಿನ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ನಂತರ ಮಾತನಾಡಿದ ಅವ​ರು, ಭೂ ಸುಧಾರಣೆ ಕಾಯ್ದೆ ​ಜಾರಿಗೊಂಡು ಐದು ದಶಕಗಳೇ ಕಳೆದಿವೆ. ಆದರೂ ಇಲ್ಲಿನ ರೈತರಿಗೆ ಈವರೆಗೆ ಭೂಮಿ ಹಕ್ಕು ದೊರೆತಿಲ್ಲ. ಈ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಭೂ ಸುಧಾರಣೆ ಕಾಯ್ದೆಯಡಿ ಮಂಜೂರಾದ ಸಾಗುವಳಿ ಪ್ರದೇಶವನ್ನು ಸರ್ವೇ ಮಾಡಿ ರೈತರಿಗೆ ದಾಖಲೆ ಒದಗಿಸಲು ನಾಳೆಯಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಅರಣ್ಯ ಇಲಾಖೆ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಕೇವಲ ಕಾನೂನು ಕಾಯ್ದೆ ನೆಪ ಹೇಳದೇ ಮಾನವೀಯ ನೆಲೆಯಲ್ಲಿ ರೈತರ ನೆರವಿಗೆ ಮುಂದಾಗಬೇಕು. ಭೂ ಅರಣ್ಯ ಹಕ್ಕು ಕಾಯ್ದೆ ನಿಯಮದಂತೆ 75 ವರ್ಷಗಳಿಗಿಂತ ಮುಂಚಿತವಾಗಿ ಜನರು ಇಲ್ಲಿ ವಾಸ ಮಾಡುತ್ತಿರುವುದಕ್ಕೆ ದಾಖಲೆ ಇದೆ. ಇದೇ ಆಧಾರದಲ್ಲಿ ಜಮೀನಿನ ದಾಖಲೆ ಸಕ್ರಮಗೊಳಿಸಬಹುದಾಗಿದೆ. ಗ್ರಾಮದಲ್ಲಿ ಇರೋದೆ 72 ಕುಟುಂಬಗಳು. ಇನಾಂ ಭೂಮಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದ್ದು, ಕೂಡಲೇ ರೈತರು ಅರ್ಜಿ ಸಲ್ಲಿಸಬೇಕು. ಈ ಸಮಸ್ಯೆಯನ್ನು ಬಗೆಹರಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸರ್ವೆ ಮಾಡುವ ಮೂಲಕ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಆದೇಶಿಸಿದರು.

ಗ್ರಾಮಕ್ಕೆ ಮಂಜೂರಾಗಿದ್ದ ಕುಡಿಯುವ ನೀರಿನ ಯೋಜನೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೆಸ್ಕಾಂ ಅಧಿ​ಕಾ​ರಿ​ಗಳು ಬಾಕಿ ಇರುವ ವಿದ್ಯುತ್‌ ಸಂಪರ್ಕಗಳನ್ನು ಕೂಡಲೇ ಕಲ್ಪಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ .440 ಕೋಟಿ ವೆಚ್ಚದಲ್ಲಿ ತುಂಗಾನದಿಯಿಂದ ನೀರನ್ನೆತ್ತಿ ಕುಂದಾದ್ರಿ ಬೆಟ್ಟದ ಮೂಲಕ ಶುದ್ಧೀಕರಿಸಿದ ನೀರಿನ ಸೌಲಭ್ಯ ಒದಗಿಸಲು ಟೆಂಡರ್‌ ಕೂಡ ಆಗಿದೆ. ನನ್ನ ಹಿಂದಿನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ನಂತರದ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂದೂ ಹೇಳಿದರು.

ವಿಡಿಯೋ ಕಾಲ್‌ನಲ್ಲಿ ಸಹೋದ್ಯೋಗಿ ಆತನ ಹೆಂಡತಿ ತೋರಿಸಿಲ್ಲ ಎಂದು ಹೊಟ್ಟೆಗೆ ಇರಿತ: ಆರೋಪಿ ಬಂಧನ

ರೈತರ ಪ್ರಶ್ನೆಗಳಿಗೆ ಉತ್ತರಿಸಿದ ತಹಸೀಲ್ದಾರ್‌ ಅಮೃತ್‌ ಆತ್ರೇಶ್‌, ನಿಮ್ಮಗಳ ಅನುಭವದಲ್ಲಿರುವ ಭೂಮಿ ವಿಸ್ತೀರ್ಣವನ್ನು ಅಳತೆ ಮಾಡಿ ದಾಖಲೆ ಮಾಡಿಕೊಡುತ್ತೇವೆ. ಆದರೆ ಇದಕ್ಕೆ ಪೂರ್ಣ ಸಹಕಾರ ಅಗತ್ಯ. ಎಲ್ಲಕ್ಕಿಂತ ಮೊದಲು ಅರ್ಜಿ ಸಲ್ಲಿಸಬೇಕು ಹಾಗೂ ದಾಖಲೆ ಸರಿಪಡಿಸುವ ಸಂದರ್ಭದಲ್ಲಿ ಎಲ್ಲರ ಸಹಕಾರವೂ ಅಗತ್ಯ. ರಸ್ತೆ ರಿಪೇರಿ, ಮೊಬೈಲ್‌ ಟವರ್‌ ಸ್ಥಾಪನೆ, ಗನ್‌ ಲೈಸೆನ್ಸ್‌ ಸರಳೀಕರಣ, ಬಸ್‌ ಸೌಲಭ್ಯ ಹಾಗೂ ಶಾಲಾ ಕಟ್ಟಡ ರಿಪೇರಿ ಮುಂತಾದ ಅಗತ್ಯ ಸವಲತ್ತುಗಳನ್ನು ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

Follow Us:
Download App:
  • android
  • ios