ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೊಲೆಗಡುಕರು, ಹಣವಂತರಿಗೆ ಹೆಚ್ಚಿನ ಗೌರವವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.

ಬೆಳಗಾವಿ (ಆ.29): ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೊಲೆಗಡುಕರು, ಹಣವಂತರಿಗೆ ಹೆಚ್ಚಿನ ಗೌರವವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕನ್ನಡ ನಾಡು, ನುಡಿ ವಿಚಾರದಲ್ಲಿಹೋರಾಟ ಮಾಡಿದ್ದ ವೇಳೆ 16 ದಿನ ಜೈಲಿನಲ್ಲಿದ್ದೆ. ಆ ವೇಳೆ ಜೈಲರ್‌ಗೆ ಸಿಂಗಲ್‌ ಇಡ್ಲಿ ಕೇಳಿದ್ದೆ. ಹೊರಗಿನ ಆಹಾರ ತರಲಾಗದು. ಜೈಲಿನಲ್ಲಿ ನೀಡುವ ಆಹಾರವನ್ನು ತಿನ್ನುವಂತೆ ಹೇಳಿದರು. ಚಿತ್ರನಟ ದರ್ಶನನಂತಹಣವಂತರಿಗೆ ಎಲ್ಲ ವ್ಯವಸ್ಥೆಯನ್ನು ಕೊಡುತ್ತಾರೆ. ಜೈಲಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

Add Asianetnews Kannada as a Preferred SourcegooglePreferred

ಪರಪ್ಪನ ಅಗ್ರಹಾರದಲ್ಲಿ ಸಿಬ್ಬಂದಿ ಹಣ ಇದ್ದವರಿಗೆ ಬೀಡಿ, ಸಿಗರೇಟ್‌, ಎಣ್ಣೆ, ಡ್ರಗ್ಸ್‌, ಗಾಂಜಾ ಎಲ್ಲವನ್ನೂ ಕೊಡುತ್ತಾರೆ. ಬಡಕೈದಿಗಳಿಗೆ ಔಷಧ ಮಿಶ್ರಿತ ಆಹಾರ ನೀಡುತ್ತಾರೆ. ಹಣ ಇದ್ದವರಿಗೆ ಹೊರಗಿನ ಆಹಾರ ಕೊಡುತ್ತಾರೆ. ಕೊಲೆಗಡುಕರು, ಕ್ರಿಮಿನ್ಲ್‌ಗಳಿಗೆ ಎಲ್ಲಿಲ್ಲದ ರಕ್ಷಣೆ, ಆತಿಥ್ಯ ನೀಡುತ್ತಿರುವ ಪರಪ್ಪನ ಅಗ್ರಹಾರದ ಕೆಟ್ಟ ವ್ಯವಸ್ಥೆ ಬಗ್ಗೆ ನಾನೇ ಒಂದು ಪುಸ್ತಕ ಬರೆದಿದ್ದೇನೆ ಎಂದರು. ಪರಪ್ಪನ ಅಗ್ರಹಾರ ಅವ್ಯವಸ್ಥೆ ಬೆಳಕಿಗೆ ಬಂದಿದ್ದು, ಕೂಡಲೇ ಮುಖ್ಯಮಂತ್ರಿಗಳು ಗೃಹಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಗ್ಯಾಂಗ್ ಅನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಸಂಬಂಧ ನ್ಯಾಯಾಲಯದ ಆದೇಶವನ್ನು ಅಧಿಕೃತವಾಗಿ ಬುಧವಾರ ಬೆಳಗ್ಗೆ ಸ್ವೀಕರಿಸಲಾಯಿತು. ಅಲ್ಲದೆ ವಿಶೇಷ ಸೌಲಭ್ಯ ಪಡೆದ ಪ್ರಕರಣದ ಕುರಿತು ಪರಪ್ಪನ ಅಗ್ರಹಾರ ಪೊಲೀಸರ ಮಹಜರ್ ಹಾಗೂ ವಿಚಾರಣೆ ಬಾಕಿ ಇತ್ತು. ಹೀಗಾಗಿ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ತಡವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ದರ್ಶನ್ ಗ್ಯಾಂಗ್ ಸ್ಥಳಾಂತರ ಬಗ್ಗೆ ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ಕಲುಬರಗಿ, ಧಾರವಾಡ, ವಿಜಯಪುರ ಹಾಗೂ ಮೈಸೂರು ಸೆಂಟ್ರಲ್ ಜೈಲುಗಳ ಮುಖ್ಯ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿದೆ. 

13 ವಿಶ್ವವಿದ್ಯಾಲಯಗಳಿಗೆ 80 ಮಂದಿ ಸಿಂಡಿಕೇಟ್‌ ಸದಸ್ಯರ ನೇಮಕ: ಸರ್ಕಾರ ಆದೇಶ

ಆರೋಪಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಆಯಾ ಜೈಲಿನ ಅಧಿಕಾರಿಗಳು ನೀಡಲಿದ್ದಾರೆ. ಜೈಲಿಗೆ ಕರೆದೊಯ್ಯುವಾಗ ಸೂಕ್ತ ಭದ್ರತೆ ಕಲ್ಪಿಸುವಂತೆ ಸಹ ಬೆಂಗಳೂರು ನಗರ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನಲ್ಲಿ ಸಿಗರೆಟ್ ಸೇದಿದ ಹಾಗೂ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮಾಡಿದ ಸ್ಥಳದಲ್ಲಿ ಪೊಲೀಸರು ಮಹಜರ್ ನಡೆಸಬೇಕಿತ್ತು. ಅಲ್ಲದೆ ಜೈಲಿನಲ್ಲೇ ಆರೋಪಿಗಳಾದ ದರ್ಶನ್‌, ಅವರ ಆಪ್ತ ನಾಗರಾಜ್‌, ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಹಾಗೂ ಧರ್ಮನನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆ ಮುಗಿದ ನಂತರ ಅವರನ್ನು ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.