ತೋಟಗಾರಿಕಾ ಇಲಾಖೆಯಿಂದ ರೈತರ ನೆರವಿಗೆ ಹೊಸ ಕೇಂದ್ರ
ಅಗತ್ಯವಿರುವ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಆಯ್ದ ತೋಟಗಾರಿಕಾ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.
ಬೆಂಗಳೂರು (ಮಾ.29): ರೈತರು ಬೆಳೆಯಬಹುದಾದ ಬೆಳೆಗಳು ಮತ್ತು ಅವುಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಆಯ್ದ ತೋಟಗಾರಿಕಾ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಮತ್ತು ಬೆಂಗಳೂರು ಕೃಷಿ ವಿವಿಯ ಸಹಯೋಗದೊಂದಿಗೆ ‘ಅಗ್ರೊ ಕ್ಲೈಮೆಟಿಕ್ ಝೋನ್’ (ಕೃಷಿ ಭೌಗೋಳಿಕ ವಲಯ) ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದ್ದು, ಈ ಕೇಂದ್ರಗಳಲ್ಲಿ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.
ಆ ಮೂಲಕ ಐಐಎಚ್ಆರ್ ಮತ್ತು ಕೃಷಿ ವಿವಿಗಳಲ್ಲಿ ಅಭಿವೃದ್ಧಿ ಪಡಿಸಿದ ಹೊಸ ಹೊಸ ತಂತ್ರಜ್ಞಾನಗಳು, ಅಧಿಕ ಇಳುವರಿ ಕೊಡುವ ಹೊಸ ತಳಿಗಳ (ಹೂವು, ಹಣ್ಣು, ತರಕಾರಿ ಬೆಳೆಗಳು) ಬಗ್ಗೆ ಈ ಕೇಂದ್ರಗಳ ಮೂಲಕ ರೈತರಿಗೆ ಮಾಹಿತಿಯನ್ನು ಒದಗಿಸಲಿದೆ. ಜೊತೆಗೆ, ಕೃಷಿ ವಿವಿಯ ವಿಜ್ಞಾನಿಗಳು ಮತ್ತು ತಜ್ಞರು ರಾಜ್ಯದ ಯಾವ ಭಾಗದ ರೈತರು ಯಾವ ಮಾದರಿಯ ಭೂಮಿ ಹೊಂದಿದ್ದಾರೆ. ಅಲ್ಲಿನ ವಾತಾವರಣ ಎಂಥದ್ದು, ಆ ಭೂಮಿಯಲ್ಲಿ ಎಂತಹ ಬೆಳೆ ಸೂಕ್ತ ಎಂಬುದನ್ನು ರೈತರಿಗೆ ವಿವರಿಸಲಿದ್ದಾರೆ.
ತೋಟಗಾರಿಕೆಯಿಂದ ರೈತರಿಗೆ ವರ್ಷವಿಡೀ ಭರ್ಜರಿ ಆದಾಯ ..
ರಾಜ್ಯದಲ್ಲಿ ಸುಮಾರು 400ಕ್ಕೂ ಹೆಚ್ಚು ತೋಟಗಾರಿಕೆ ಕ್ಷೇತ್ರಗಳಿವೆ. ಇವುಗಳ ಪೈಕಿ ಮೊದಲ ಹಂತದಲ್ಲಿ ಹತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ಕಿಯೋಸ್ಕ್ಗಳನ್ನು ಅಳವಡಿಸಲಾಗುವುದು. ಈ ಕಿಯೋಸ್ಕ್ಗಳ ಮೂಲಕ ರೈತರಿಗೆ ಬೇಕಾದ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಈಗಾಗಲೇ ರೈತರಿಗೆ ಬೇಕಾದ ಸಸಿಗಳನ್ನು ನೀಡಲಾಗುತ್ತಿದೆ. ಆದರೆ, ಐಐಎಚ್ಆರ್ ಮತ್ತು ಕೃಷಿ ವಿವಿ ಜೊತೆಗೆ ಹೊಸ ತಂತ್ರಜ್ಞಾನಗಳು ಮತ್ತು ಅಧಿಕ ಇಳುವರಿ ಕೊಡುವ ಹೊಸ ತಳಿಗಳ ಬಗ್ಗೆ ಮಾಹಿತಿ ಸಿಗುತ್ತಿರಲಿಲ್ಲ. ಇದೀಗ ಈ ಮಾಹಿತಿಯೊಂದಿಗೆ ರೈತರಿಗೆ ಅಗತ್ಯ ತರಬೇತಿಗಳನ್ನು ಕೂಡ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ಬಿ. ಫೌಜಿಯಾ ತರುನ್ನಂ ತಿಳಿಸಿದರು.
ತೋಟಗಾರಿಕಾ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಮಾದರಿ ತಾಕುಗಳನ್ನೂ ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಐಐಎಚ್ಆರ್ನೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ ಎಂದು ಅವರು ವಿವರಿಸಿದರು.
ಯಾವ ಮಾಹಿತಿ ಲಭ್ಯ?:
ಈ ಕಿಯೋಸ್ಕ್ಗಳಲ್ಲಿ ರೈತರಿಗೆ ಅಧಿಕ ಇಳುವರಿ ಕೊಡುವ ಬಿತ್ತನೆ ಬೀಜಗಳು, ಹಣ್ಣಿನ ಸಸಿಗಳು, ಬೆಳೆ ಕೊಯ್ಲು ಮಾಡಲು ಬೇಕಾದ ಯಂತ್ರೋಪಕರಣಗಳ ಮಾಹಿತಿ, ರೈತ ಉದ್ಯಮಿಗಳಿಗಾಗಿ ಹೊಸ ತಂತ್ರಜ್ಞಾನಗಳು, ಅಂತರ ಬೆಳೆ ಬೇಸಾಯ ಪದ್ಧತಿ, ಕೀಟನಾಶಕಗಳನ್ನು ಹೇಗೆ ಬಳಸಬೇಕು ಮತ್ತು ಎಷ್ಟುಪ್ರಮಾಣದಲ್ಲಿ ಬಳಸಬೇಕು ಎಂಬದರ ಕುರಿತ ಮಾಹಿತಿ, ಜೊತೆಗೆ ರೈತರಿಗೆ ಬೇಕಾದ ಪರಿಕರಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೃಷಿ ತಂತ್ರಜ್ಞಾನ ಮತ್ತು ವಿವಿಧ ಬೆಳೆಗಳ ತಳಿಗಳ ಕುರಿತು ಮಾಹಿತಿ ಪಡೆಯಲು ದೂರದ ಪ್ರದೇಶಗಳಿಂದ ರೈತರು ಬೆಂಗಳೂರು ನಗರಕ್ಕೆ ಬರುವುದನ್ನು ತಪ್ಪಿಸಲಾಗುವುದು. ಅಲ್ಲದೆ, ರೈತರಿಗೆ ತಾವು ಇರುವಲ್ಲಿಗೇ ಮಾಹಿತಿ ತಲುಪಿಸುವುದು ಅಗ್ರೊ ಕ್ಲೈಮೆಟಿಕ್ ವಲಯ ಸ್ಥಾಪನೆಯ ಮುಖ್ಯ ಉದ್ದೇಶ.
-ಬಿ.ಫೌಜಿಯಾ ತರುನ್ನಂ, ನಿರ್ದೇಶಕಿ, ರಾಜ್ಯ ತೋಟಗಾರಿಕೆ ಇಲಾಖೆ