Asianet Suvarna News Asianet Suvarna News

ಈಶ್ವರಪ್ಪಗೆ ಸಚಿವ ಸ್ಥಾನ ನೀಡಿ: ಹಿಂದುಳಿದ ಒಕ್ಕೂಟ ಒತ್ತಾಯ

ಕುರುಬ ಸಮಾಜದ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರನ್ನು ಪುನಃ ಸಚಿವ ಸ್ಥಾನ ನೀಡಬೇಕು. ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ ಅವರ ಸದಸ್ಯದ ಅವಧಿ ಮುಗಿಯುವವರೆಗೂ ಪರಿಷತ್ತಿನ ಸಭಾಪತಿಯಾಗಿ ಮುಂದುವರೆಸಬೇಕು ಎಂದು ಹಿಂದುಳಿದ ದಲಿತ ಸಮುದಾಯಗಳ (ಹಿಂದ) ಒಕ್ಕೂಟ ಅಧ್ಯಕ್ಷ ಕೆ.ಮುಕುಡಪ್ಪ ಆಗ್ರಹಿಸಿದರು. 

hinda union urges bjp to give minister position to ks eshwarappa gvd
Author
First Published Nov 10, 2022, 8:26 AM IST

ಬೆಂಗಳೂರು (ನ.10): ಕುರುಬ ಸಮಾಜದ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರನ್ನು ಪುನಃ ಸಚಿವ ಸ್ಥಾನ ನೀಡಬೇಕು. ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ ಅವರ ಸದಸ್ಯದ ಅವಧಿ ಮುಗಿಯುವವರೆಗೂ ಪರಿಷತ್ತಿನ ಸಭಾಪತಿಯಾಗಿ ಮುಂದುವರೆಸಬೇಕು ಎಂದು ಹಿಂದುಳಿದ ದಲಿತ ಸಮುದಾಯಗಳ (ಹಿಂದ) ಒಕ್ಕೂಟ ಅಧ್ಯಕ್ಷ ಕೆ.ಮುಕುಡಪ್ಪ ಆಗ್ರಹಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜದ ನಾಯಕ ಕೆ.ಎಸ್‌. ಈಶ್ವರಪ್ಪ ಅವರ ಮೇಲೆ ಹೊರಿಸಲಾದ ಆರೋಪವು ನಿರಾಧಾರ ಎಂಬುದು ಸರ್ಕಾರದ ತನಿಖೆಯಿಂದಲೇ ಸಾಬೀತಾಗಿದೆ. 

ಹೀಗಾಗಿ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಪ್ರಬಲವಾಗಿ ಕಟ್ಟುವಲ್ಲಿ ಅವಿರತ ಶ್ರಮಿಸಿರುವ ಈಶ್ವರಪ್ಪ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡುವುದರಿಂದ ಪಕ್ಷಕ್ಕೆ ಮತ್ತಷ್ಟುಬಲ ಬರುತ್ತದೆ ಎಂದು ಹೇಳಿದರು. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಎಸ್‌.ಈಶ್ವರಪ್ಪ ಅವರನ್ನು ಸಚಿವರನ್ನಾಗಿ ಪುನಃ ನೇಮಿಸಬೇಕು. ರಾಜ್ಯದ ಮೂರನೇ ಅತಿ ದೊಡ್ಡ ಸಮುದಾಯವಾದ ಕುರುಬ ಸಮಾಜಕ್ಕೆ 194 ಕ್ಷೇತ್ರಗಳಲ್ಲಿ ಬಲವಿದೆ. ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೆ ಬಿಜೆಪಿ ಕುರುಬ ಸಮಾಜಕ್ಕೆ ಮಾನ್ಯತೆ ಕೊಡುತ್ತದೆ ಎಂಬ ಸಂದೇಶ ಹೋಗಬೇಕು. ಕುರುಬ ಸಮುದಾಯ ಕಾಂಗ್ರೆಸ್‌ ಪಕ್ಷದ ಕಡೆ ವಾಲುವುದನ್ನು ತಡೆಯಲು ಸುಲಭವಾಗುತ್ತದೆ ಎಂದರು.

ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ, ಎಲ್ಲೇ ನಿಂತ್ರೂ ಸೋಲ್ತಾರೆ: ಈಶ್ವರಪ್ಪ

ಕಳೆದ 40 ವರ್ಷದಿಂದ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದೆವು. ಆದರೆ, ಅವರಿಂದ ಕುರುಬ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿ ಸರ್ಕಾರ ಕಾಗಿನೆಲೆ ಕ್ಷೇತ್ರ ಅಭಿವೃದ್ಧಿಗೆ 40 ಕೋಟಿ ರು. ಅನುದಾನ ನೀಡಿದೆ. ಯಡಿಯೂರಪ್ಪ ಅವರು ಕನಕದಾಸ ಜಯಂತಿಯನ್ನು ಸರ್ಕಾರವೇ ಆಚರಿಸುವಂತೆ ಘೋಷಿಸಿದ್ದಾರೆ. ಹೀಗಾಗಿ ಕುರುಬ ಸಮುದಾಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕನಕಶ್ರೀ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಟಿ.ಬಿ.ಬಳಿಗಾವಿ, ನಿವೃತ್ತ ಐಎಎಸ್‌ ಅಧಿಕಾರಿ ಪುಟ್ಟಸ್ವಾಮಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಕೆ.ಪಿ.ನಾಗೇಶ್‌, ಪರಮೇಶ್‌ ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸತೀಶ್‌ ಜಾರಕಿಹೊಳಿ ಹಿಂದುಗಳ ಕ್ಷಮೆ ಕೇಳಲಿ: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತು ಆಡದಿದ್ದರೆ ಕೆಲವರಿಗೆ ತಿಂದ ಅನ್ನ ಕರಗುವುದಿಲ್ಲ. ಇದೀಗ ಹಿಂದು ಧರ್ಮದ ಕುರಿತಾಗಿ ಕಾಂಗ್ರೆಸ್‌ ಮುಖಂಡ ಸತೀಶ್‌ ಜಾರಿಕಿಹೊಳಿ ಅವಹೇಳನಕಾರಿ ಮಾತುಗಳನ್ನು ಆಡಿದ್ದು, ಅವರು ಈ ಕೂಡಲೇ ಹಿಂದುಗಳ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್‌ ಜಾರಕಿಹೊಳಿ ನೀಡಿದ ಹೇಳಿಯನ್ನು ಅವರದೇ ಪಕ್ಷದ ರಾಷ್ಟ್ರೀಯ ಮುಖಂಡ ಸುರ್ಜಿತ್‌ ವಾಲಾ ಖಂಡನೆ ಮಾಡಿದ್ದಾರೆ. ಹೀಗಿದ್ದರೂ ಕೂಡ ತಮ್ಮ ಮಾತಿಗೆ ಬದ್ಧ ಎನ್ನುವ ಮೂಲಕ ಜಾರಕಿಹೊಳಿ ಸೊಕ್ಕಿನ ಮಾತುಗಳನ್ನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯಗೆ ಬಿಜೆಪಿ ಬಿಟ್ಟು ಬೇರೆ ಮಾತಾಡಲು ಏನಿದೆ?: ಕೆ.ಎಸ್‌.ಈಶ್ವರಪ್ಪ

ಹಿಂದು ಧರ್ಮದ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿರುವ ಸತೀಶ್‌ ಜಾರಕಿಹೊಳಿ ಮೇಲೆ ಕಾಂಗ್ರೆಸ್ಸಿಗರಿಗೆ ಶಕ್ತಿ ಇದ್ದರೆ ಕ್ರಮ ಕೈಗೊಳ್ಳಲಿ. ಪಕ್ಷದಿಂದ ಅಮಾನತು ಮಾಡಲಿ. ಸೋನಿಯಾ ಗಾಂಧಿ ಹಾಗೂ ಮುಸಲ್ಮಾನರನ್ನು ಮೆಚ್ಚಿಸುವ ಸಲುವಾಗಿ ಈ ರೀತಿ ಮಾತನಾಡುತ್ತಿದ್ದಾರೆ. ವಾಲ್ಮೀಕಿ ರಕ್ತ ಹಂಚಿಕೊಂಡು ಜಾರಕಿಹೊಳಿ ಹುಟ್ಟಿದ್ದಾರೆ. ಮೊದಲು ಹಿಂದುಗಳಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದುಗಳು ಬುದ್ಧಿ ಕಲಿಸುವುದು ನಿಶ್ಚಿತ ಎಂದರು. ಜನ ಸಂಕಲ್ಪ ಯಾತ್ರೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅದ್ಧೂರಿಯಾಗಿ ಸಿದ್ದರಾಮೋತ್ಸವ ಅಚರಿಸಿಕೊಂಡರಲ್ಲಾ, ಆ ಕಾರ್ಯಕ್ರಮದ ಲೆಕ್ಕವನ್ನು ಮೊದಲು ಕೊಡಲಿ. ಆಮೇಲೆ ಟೀಕೆ ಮಾಡಲಿ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios