ಬೆಂಗಳೂರಿಂದ ಚೆನ್ನೈ, ಕೊಯಮತ್ತೂರಿಗೂ ಈ ರೈಲು ಪ್ರಸ್ತಾಪ, ಅನುಮೋದನೆ ಸಿಕ್ಕಿದೆ ದಕ್ಷಿಣ ಭಾರತದಲ್ಲಿ ಮೊದಲ ಸಲ ವಂದೇ ಭಾರತ್‌ ಸಂಚಾರ

ಹುಬ್ಬಳ್ಳಿ(ಸೆ.15): ಬೆಂಗಳೂರಿನಿಂದ ಹುಬ್ಬಳ್ಳಿ ಸೇರಿದಂತೆ ಮೂರು ನಗರಗಳಿಗೆ ಅತ್ಯಾಧುನಿಕ, ಅತಿವೇಗದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ನೈಋುತ್ಯ ರೇಲ್ವೆ (ಎಸ್‌ಡಬ್ಲ್ಯುಆರ್‌) ಮುಂದಾಗಿದೆ. ಈ ಕುರಿತು ಅದು ರೈಲ್ವೆ ಮಂಡಳಿಗೆ ಪ್ರಸ್ತಾವ ಸಲ್ಲಿಸಿದೆ. ಒಂದು ವೇಳೆ ರೈಲ್ವೆ ಮಂಡಳಿ ಪ್ರಸ್ತಾಪವನ್ನು ಅನುಮೋದಿಸಿದರೆ ಶೀಘ್ರವೇ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಬೆಂಗಳೂರು- ಹುಬ್ಬಳ್ಳಿ, ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು- ಕೊಯಮತ್ತೂರು ನಡುವೆ ವಂದೇಭಾರತ್‌ ರೈಲುಗಳ ಸಂಚಾರ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಜನಪ್ರಿಯತೆ ಹಾಗೂ ಕಾರ್ಯಸಾಧತೆ ಆಧಾರದ ಮೇರೆಗೆ ವಂದೇ ಭಾರತ ರೈಲಿಗೆ ಈ ಮೂರು ಮಾರ್ಗಗಳನ್ನು ಪ್ರಸ್ತಾಪಿಸಲಾಗಿದೆ. ಒಂದು ವೇಳೆ ಅನುಮೋದನೆ ಸಿಕ್ಕಿದರೆ ದಕ್ಷಿಣ ಭಾರತದಲ್ಲಿ ಈ ರೈಲುಗಳ ಮೊದಲ ಸಂಚಾರವಾಗಲಿದೆ.

ಮೊಟ್ಟೆ, ಮಾಂಸವಿಲ್ಲದ ಆಹಾರ, ಇದು ದೇಶದ ಮೊದಲ ಸಸ್ಯಾಹಾರಿ ರೈಲು!

ಮೂರು ವರ್ಷಗಳ ಹಿಂದೆ ಭಾರತೀಯ ರೈಲ್ವೆ ಚಾಲನೆ ನೀಡಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಗಂಟೆಗೆ 130 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಜೊತೆಗೆ ವಿಶಾಲ ಕಿಟಕಿ, ಉತ್ತಮ ಆಹಾರ ಸೌಲಭ್ಯ, ಮನರಂಜನೆ ವ್ಯವಸ್ಥೆ, ರೈಲಿನೊಳಗೆ ವೈಫೈ ಸೇವೆ, ಸ್ವಯಂಚಾಲಿತ ಬಾಗಿಲು, ಬಯೋವ್ಯಾಕ್ಯುಮ್‌ ಟಾಯ್ಲೆಟ್‌ ಮೊದಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಹೊಸ ರೈಲು ಸಂಚಾರ ಆರಂಭವಾದರೆ ಈ ಮಾರ್ಗಗಳಲ್ಲಿ ಸಂಚರಿಸಲು ವಿಮಾನಯಾನಕ್ಕೆ ಅವಲಂಬಿತರಾಗಿದ್ದ ಜನರು ಇನ್ನು ವಂದೇ ಭಾರತ ಎಕ್ಸ್‌ಪ್ರೆಸ್‌ನತ್ತ ಮುಖ ಮಾಡಬಹುದು ಎಂಬ ನಿರೀಕ್ಷೆಯಿದೆ ಎನ್ನಲಾಗಿದೆ.