ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ೨೨ ವರ್ಷದ ಲಾರಿ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮದುವೆಯಾಗಿ ಕೇವಲ ಮೂರು ವಾರಗಳಾಗಿದ್ದ ಈ ಯುವಕನ ಅಕಾಲಿಕ ಮರಣವು ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ. ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ.
ಕಲಬುರಗಿ (ಜುಲೈ.9): ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು, ಆತಂಕ ಹೆಚ್ಚಳರಾಜ್ಯದಾದ್ಯಂತ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಹಾಸನದಲ್ಲಿ ಕಳೆದ ಒಂದು ತಿಂಗಳಲ್ಲಿ 30ಕ್ಕೂ ಹೆಚ್ಚು ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದರೆ, ಮೈಸೂರಿನಲ್ಲಿಯೂ ಇದೇ ರೀತಿಯ ಸಾವಿನ ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿದೆ. ಧಾರವಾಡದಲ್ಲೂ ಯುಪಿಎಸ್ಸಿ ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಇದೀಗ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ 22 ವರ್ಷದ ಲಾರಿ ಚಾಲಕ ಮೋಹಸಿನ್ ಒಶಾ ಪಟೇಲ್ ಹೃದಯಾಘಾತದಿಂದ ದಾರುಣವಾಗಿ ಮೃತಪಟ್ಟ ಘಟನೆ ರಾಜ್ಯದಲ್ಲಿ ಹೃದಯಾಘಾತದ ಸರಣಿ ಸಾವುಗಳ ಬಗ್ಗೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಮದುವೆಯಾಗಿ ಕೇವಲ ಮೂರು ವಾರಗಳಾಗಿದ್ದ ಮೋಹಸಿನ್, ಮೋಹರಂ ಹಬ್ಬದ ಸಂಭ್ರಮಕ್ಕಾಗಿ ತಮ್ಮ ಊರಿಗೆ ಬಂದಿದ್ದರು. ಆದರೆ, ದಿಢೀರನೆ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕನ ಅಕಾಲಿಕ ಸಾವು ಕುಟುಂಬ ಮತ್ತು ಗ್ರಾಮವಾಸಿಗಳಲ್ಲಿ ಆಘಾತ ಮೂಡಿಸಿದೆ.
