ಜಿಲ್ಲೆಯಲ್ಲಿ ಇಂದು ಸಹ ಸೂತಕದ ಛಾಯೆ ಮುಂದುವರೆದಿದ್ದು, ಹೃದಯಾಘಾತಕ್ಕೆ ಮತ್ತೋರ್ವ ಯುವಕ ಬಲಿಯಾಗಿದ್ದಾನೆ. ಹಾಸನ ಜಿಲ್ಲೆಯಲ್ಲಿ ಈಗಾಗಲೇ ಹೃದಯಾಘಾತ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿದ್ದು, ಇದೀಗ 27 ವರ್ಷದ ಸಂಜಯ್ ಮೃತಪಟ್ಟಿದ್ದಾನೆ.
ಹಾಸನ (ಜು.01): ಜಿಲ್ಲೆಯಲ್ಲಿ ಇಂದು ಸಹ ಸೂತಕದ ಛಾಯೆ ಮುಂದುವರೆದಿದ್ದು, ಹೃದಯಾಘಾತಕ್ಕೆ ಮತ್ತೋರ್ವ ಯುವಕ ಬಲಿಯಾಗಿದ್ದಾನೆ. ಹಾಸನ ಜಿಲ್ಲೆಯಲ್ಲಿ ಈಗಾಗಲೇ ಹೃದಯಾಘಾತ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿದ್ದು, ಇದೀಗ 27 ವರ್ಷದ ಸಂಜಯ್ ಮೃತಪಟ್ಟಿದ್ದಾನೆ. ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಸಂಜಯ್ಗೆ ಬಿಪಿ ಹೆಚ್ಚಾಗಿ ಹೃದಯಾಘಾತ ಆಗಿರೊ ಬಗ್ಗೆ ಮಾಹಿತಿ ದೊರಕಿದೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ನಿನ್ನೆ ಸಂಜೆ ಎದೆ ನೋವು ಎಂದು ಸೋಮನಹಳ್ಳಿ ಪ್ರಾಥಮಿಕ ಆಸ್ಪತ್ರೆಗೆ ಸಂಜಯನನ್ನ ಆತನ ಸ್ನೇಹಿತರು ಕರೆದೊಯ್ದಿದ್ದರು. ಈ ವೇಳೆ ಸಂಜಯ್ಗೆ ನಡೆಯಲೂ ಆಗದ ಸ್ಥಿತಿಯಿತ್ತು. ಕೂಡಲೆ ಯುವಕನ ಬಿಪಿ ಪರೀಕ್ಷೆ ಮಾಡಿದ್ದ ವೈದ್ಯರು, 220ಕ್ಕೂ ಅಧಿಕ ಪ್ರಮಾಣದಲ್ಲಿ ಬಿಪಿ ಇದ್ದ ಬಗ್ಗೆ ಮಾಹಿತಿ ನೀಡಿದರಲ್ಲದೇ, ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ರೆಫರ್ ಮಾಡೋ ವೇಳೆಯೇ ಸಂಜಯ್ ಹಠಾತ್ ಸಾವನಪ್ಪಿದ್ದ. ಇನ್ನು ಎರಡುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸಂಜಯ್ ಸಾವಿನ ಬಗ್ಗೆ ಅನುಮಾನದ ದೂರನ್ನು ಸಂಬಂಧಿಕರು ನೀಡಿದ್ದಾರೆ. ಹಳ್ಳಿ ಮೈಸೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಕೇಸ್ ದಾಖಲಾಗಿದೆ.
ಇನ್ನು ನಿನ್ನೆ ಒಂದೇ ದಿನ ಹಾಸನ ಜಿಲ್ಲೆಯಲ್ಲಿ ಆರು ಹೃದಯಾಘಾತ ಪ್ರಕರಣ ವರದಿಯಾಗಿದ್ದು, ಜೂನ್ 27 ರಂದು ಈಶ್ವರಪ್ಪ ಹಾಗು ಜೂನ್ 30 ರಂದು ಕುಮಾರ್(53) ಲೇಪಾಕ್ಷಿ(51), ಮುತ್ತಯ್ಯ(58) ಸತ್ಯನಾರಾಯಣ ರಾವ್(63) ಹಾಗು ಸಂಜಯ್(27) ಸಾವನಪ್ಪಿದ್ದರು. ಸದ್ಯ ಹಾಸನ ಜಿಲ್ಲೆಯಲ್ಲಿ 24ಕ್ಕೆ ಹೃದಯಾಘಾತ ಸಾವು ಪ್ರಕರಣಗಳು ಏರಿದ್ದು, 40 ದಿನಗಳಲ್ಲಿ 24 ಜನರಿಗೆ ಹೃದಯಾಘಾತ ಆಗಿರೊ ಬಗ್ಗೆ ವರದಿಯಾಗಿದೆ. ಅಸಹಜ ಸಾವು ಪ್ರಕರಣಗಳಲ್ಲಿ ಮರಣೊತ್ತರ ಪರೀಕ್ಷೆ ನಡೆಸಲು ಡಿಸಿ ನಿರ್ದೇಶನ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ಸಂಜಯ್ ಮೃತದೇಹ ಸ್ಥಳಾಂತರಿಸಲಾಗಿದೆ.
