ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನರೇ ತಮ್ಮ ಮುಂದಿನ ನಡೆ ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ಪಕ್ಷದಿಂದ ಆಹ್ವಾನ ಬಂದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಮೈಸೂರು (ಜುಲೈ.10): ನಾನು ಜೆಡಿಎಸ್‌ನಲ್ಲಿ ಇರಬೇಕಾ, ಬೇಡವಾ? ಬಿಜೆಪಿಗೆ ಅಥವಾ ಕಾಂಗ್ರೆಸ್‌ಗೆ ಹೋಗಬೇಕಾ ಎಂದು ನನ್ನ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಬುಧವಾರ ಸ್ಪಷ್ಟಪಡಿಸಿದರು.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀನು ಬರದಿದ್ದರೆ ಸರ್ಕಾರ ಉಳಿಯಲ್ಲ ಬಾ ಅಂತ ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್‌ ಆಗಲಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ನನ್ನ ಯಾರೂ ಕರೆದಿಲ್ಲ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ. ಕಾಂಗ್ರೆಸ್, ಬಿಜೆಪಿ ಯಾರೂ ಕರೆದಿಲ್ಲ ಎಂದು ಹೇಳಿದರು.

25 ವರ್ಷ ಸಿದ್ದರಾಮಯ್ಯ ಜೊತೆ ಇದ್ದು, ಸಿದ್ದರಾಮಯ್ಯ ವಿಪಕ್ಷ ನಾಯಕ, ಸಿಎಂ ಆದಾಗ ಯಾವ ರೀತಿ ಕೆಲಸ ಮಾಡಿಕೊಂಡು ಬಂದಿದೀನಿ ಅನ್ನೋದು ಬೇರೆ ಶಾಸಕರಿಗೆ ಗೊತ್ತಿಲ್ಲ. ನಾನು ದೊಡ್ಡ ನಾಯಕನ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಕ್ಷೇತ್ರ ಇದು ಎಂದರು.

ನಾನು ಜೆಡಿಎಸ್ ಶಾಸಕ. ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿಲ್ಲ. ಈ ಹಿಂದೆ 20 ತಿಂಗಳು ಯಡಿಯೂರಪ್ಪಗೆ ಅಧಿಕಾರ ಕೊಡಲಿಲ್ಲ ಅಂತ ಬೆಂಬಲ ನೀಡಿದ್ದೆ. ಇನ್ನು ನಮ್ಮ ಅವಧಿ 3 ವರ್ಷ ಇದೆ. ನನಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೊಡಲಿಲ್ಲ ಅಂತ ಬೇಸರವಿದೆ. ಹಿರಿಯನಾಗಿದ್ದು ನನಗೆ ಅವಕಾಶ ಕೊಡಲಿಲ್ಲ. ಸುರೇಶ್ ಬಾಬುಗೆ ಕುಮಾರಸ್ವಾಮಿ ಅಧಿಕಾರ ಕೊಟ್ಟರು. ಸದ್ಯ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.