ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ವಿಳಂಬಕ್ಕೆ ಇಲಾಖೆಗಳ ನಡುವಿನ ಸಂಘರ್ಷವೇ ಕಾರಣ. ಈ ಬಗ್ಗೆ ಮಾಹಿತಿ ಇಲ್ಲದೇ ತಪ್ಪು ಮಾಹಿತಿ ನಿಡಿದ್ದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದನದಲ್ಲಿ ಕ್ಷಮೆಯಾಚನೆ ಮಾಡಿದರು. ಪೂರ್ಣ ವಿವರ ಇಲ್ಲಿದೆ.

ಬೆಂಗಳೂರು/ಬೆಳಗಾವಿ (ಡಿ.17): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮೀ' ಯೋಜನೆಯಡಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಪಾವತಿಯಾಗದ ವಿಚಾರ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಕುರಿತು ಸದನದಲ್ಲಿ ಪ್ರತಿಪಕ್ಷಗಳು ನಡೆಸಿದ ತೀವ್ರ ಹೋರಾಟಕ್ಕೆ ಮಣಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇಲಾಖೆಯ ಲೋಪಕ್ಕೆ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ಇಲಾಖೆಗಳ ನಡುವಿನ ಸಂಘರ್ಷ

ಗೃಹಲಕ್ಷ್ಮೀ ಹಣ ವಿಳಂಬಕ್ಕೆ ಮುಖ್ಯ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಣಕಾಸು ಇಲಾಖೆ ನಡುವಿನ ಸಮನ್ವಯದ ಕೊರತೆ. 2023ರ ಆಗಸ್ಟ್‌ನಿಂದ ಮಹಿಳಾ ಇಲಾಖೆಯೇ ನೇರವಾಗಿ ಹಣ ಪಾವತಿ ಮಾಡುತ್ತಿತ್ತು. ಆದರೆ, 2025ರ ಫೆಬ್ರವರಿಯಿಂದ ಹಣಕಾಸು ಇಲಾಖೆಯು ಪಾವತಿ ಪ್ರಕ್ರಿಯೆಯನ್ನು ತಾಲ್ಲೂಕು ಪಂಚಾಯತ್‌ಗಳ ಮೂಲಕ ನಡೆಸುವ ಹೊಸ ನಿಯಮ ಜಾರಿಗೆ ತಂದಿತು. ಈ ಹೊಸ ನೀತಿಯಿಂದಾಗಿ ತಾಂತ್ರಿಕ ಗೊಂದಲ ಸೃಷ್ಟಿಯಾಯಿತು.

ವಿಳಂಬಕ್ಕೆ ಕಾರಣವಾದ ತಾಂತ್ರಿಕ ಲೋಪಗಳು:

ಪ್ರಸ್ತಾವನೆ ಸಲ್ಲಿಕೆಯಲ್ಲಿ ವಿಫಲ: ತಾಲ್ಲೂಕು ಪಂಚಾಯತ್‌ಗಳು ನಿಗದಿತ ಅವಧಿಯಲ್ಲಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ವಿಫಲವಾದವು.

ಆರ್ಥಿಕ ವರ್ಷದ ಅಂತ್ಯ: ಮಾರ್ಚ್ 31ಕ್ಕೆ ಹಳೆಯ ಆರ್ಥಿಕ ವರ್ಷ ಮುಕ್ತಾಯಗೊಂಡಿದ್ದರಿಂದ, ಹಳೆಯ ಬಾಕಿ ನೀಡಲು ಹಣಕಾಸು ಇಲಾಖೆ ತಾಂತ್ರಿಕ ಕಾರಣಗಳನ್ನು ಒಡ್ಡಿ ನಕಾರ ವ್ಯಕ್ತಪಡಿಸಿತು.

ಸಚಿವರ ಮನವಿಗೆ ಸ್ಪಂದಿಸದ ಅಧಿಕಾರಿಗಳು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಳೆಯ ಬಾಕಿ ಬಿಡುಗಡೆಗೆ ಹಣಕಾಸು ಇಲಾಖೆಗೆ ಹಲವು ಬಾರಿ ಒತ್ತಾಯಿಸಿದರೂ, ಮುಖ್ಯಮಂತ್ರಿಗಳ ಅಧೀನದಲ್ಲಿರುವ ಈ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಇದು ಸಚಿವರಿಗೆ ಸದನದಲ್ಲಿ ತೀವ್ರ ಮುಜುಗರ ಉಂಟುಮಾಡಿದೆ.

ಯೋಜನೆಯ ಅಂಕಿ-ಅಂಶಗಳು (ಒಂದು ನೋಟ)

ಯೋಜನೆ ಜಾರಿ: ಜೂನ್ 6, 2023

ಮಾಸಿಕ ಮೊತ್ತ: 2,000 ರೂ.

ಒಟ್ಟು ಫಲಾನುಭವಿಗಳು: 1.26 ಕೋಟಿ ಮಹಿಳೆಯರು

ಒಟ್ಟು ವೆಚ್ಚ: ಈವರೆಗೆ 54,000 ಕೋಟಿ ರೂ.

ಫಲಾನುಭವಿಗಳಿಗೆ ಸಂದಾಯ: ಇಲ್ಲಿಯವರೆಗೆ ಪ್ರತಿ ಫಲಾನುಭವಿಗೆ ಅಂದಾಜು 46,000 ರೂ. ಸಿಕ್ಕಿದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಕೈತಪ್ಪಿರುವುದರಿಂದ ಲಕ್ಷಾಂತರ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಈಗ ಏಪ್ರಿಲ್‌ನಿಂದ ಮಾತ್ರ ಹಣ ಪಾವತಿಗೆ ಅನುಮತಿ ನೀಡಿದ್ದು, ಹಳೆಯ ಎರಡು ತಿಂಗಳ ಬಾಕಿ ಹಣ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿಗೂಢವಾಗಿದೆ.