ಪಿಂಚಣಿ ಹಣ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಪಿಂಚಣಿ ಹಣ ಪಡೆದುಕೊಳ್ಳುವವರು ಇಲ್ಲೊಮ್ಮೆ ಗಮನಿಸಿ. ಪಿಂಚಣಿ ವಿಚಾರವಾಗಿ ಸರ್ಕಾರ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ.
ವಿಧಾನಸಭೆ (ಫೆ.02): ಮಾಸಾಶನ ಪಿಂಚಣಿ ಮೊತ್ತವು ಬ್ಯಾಂಕ್ನಲ್ಲಿ ಒಂದು ವರ್ಷಗಳ ಕಾಲ ಬಳಕೆಯಾಗದೆ ಹಾಗೆಯೇ ಉಳಿದರೆ ಸರ್ಕಾರವು ಆ ಮೊತ್ತವನ್ನು ಜಪ್ತಿ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಬಿಜೆಪಿ ಸದಸ್ಯ ರಾಜೇಶ್ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 4.19 ಲಕ್ಷ ಮಂದಿ ಮರಣ ಹೊಂದಿದ್ದು, ಇವರಿಗೂ ಪಿಂಚಣಿ ಹೋಗುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ರಾಜ್ಯ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ ! ಮನೆಗೆ ಹಣ
ಕೆಲವರು ಎರಡ್ಮೂರು ಕಡೆಯಿಂದಲೂ ಪಿಂಚಣಿ ಪಡೆಯುತ್ತಿದ್ದರು. ಇದನ್ನು ಪತ್ತೆ ಮಾಡಿ ರದ್ದು ಮಾಡಲಾಗಿದೆ. ಅಕ್ರಮವಾಗಿ ಪಿಂಚಣಿ ಹೋಗುತ್ತಿರುವುದಕ್ಕೆ ಕಡಿವಾಣ ಹಾಕುವುದರಿಂದ ರಾಜ್ಯದ ಬೊಕ್ಕಸಕ್ಕೆ 504 ಕೋಟಿ ರು. ಉಳಿತಾಯವಾಗಲಿದೆ. ನೇರವಾಗಿ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಹೋಗಲಿದೆ. ಒಂದು ವರ್ಷ ಕಾಲ ಬ್ಯಾಂಕ್ನಲ್ಲಿನ ಹಣ ಬಳಕೆಯಾಗದೆ ಉಳಿದಿದ್ದರೆ ಅಂಥ ಮೊತ್ತವನ್ನು ಜಪ್ತಿ ಮಾಡಲಾಗುವುದು ಎಂದು ಹೇಳಿದರು.
ಬಂಟ್ವಾಳ ತಾಲೂಕಿನಲ್ಲಿ 36,887 ಫಲಾನುಭವಿಗಳಿದ್ದು, 460ಕ್ಕೂ ಹೆಚ್ಚು ಮಂದಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸೇರಿ ಕೆಲ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ಅವರಿಗೆ ಪಿಂಚಣಿ ಹೋಗುತ್ತಿಲ್ಲ. ದಾಖಲೆಗಳನ್ನು ಸಲ್ಲಿಸಿದ ಕೂಡಲೇ ಪಿಂಚಣಿ ಹಣ ಪಾವತಿಯಾಗಲಿದೆ ಎಂದು ಇದೇ ವೇಳೆ ಅಶೋಕ್ ಮಾಹಿತಿ ನೀಡಿದರು.