ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್‌ ನಿಯಂತ್ರಣಕ್ಕೆ ಸುರಂಗ ರಸ್ತೆ ನಿರ್ಮಾಣಕ್ಕೆ ಗ್ಲೋಬಲ್‌ ಟೆಂಡರ್‌ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.

ಬೆಂಗಳೂರು (ಆ.08): ರಾಜ್ಯದ ರಾಜಧಾನಿಯ ಬೆಂಗಳೂರಿನಲ್ಲಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ಇದಕ್ಕೆ ಗ್ಲೋಬಲ್‌ ಟೆಂಡರ್‌ ಕರೆಯಲಾಗಿದೆ. ಕನಿಷ್ಠ 2 ವಾಹನ ಸಂಚಾರ ಮಾಡುವ ರೀತಿ ಸುರಂಗ ಮಾರ್ಗ ನಿರ್ಮಿಸುವ ಕುರಿತು ಮಾಸ್ಟರ್‌ಪ್ಲಾನ್‌ ಸಿದ್ಧಪಡಿಸಿ ಕೊಡಲು ಕಲೆವರು ಮುಂದೆ ಬಂದಿದ್ದಾರೆ. 

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಿಂದ ಹೊಸೂರು ರಸ್ತೆವರೆಗೆ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಕಾಂಗ್ರೆಸ್‌ ಸರ್ಕಾರ ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದೆ. ಈಗಾಗಲೇ ಕೇಂದ್ರ ಸರ್ಕಾರದ ಮೂಲ ಸೌಕರ್ಯ ಅಭಿವೃದ್ಧಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಮುಕ್ತಿಗೆ ಬೃಹತ್‌ ಯೋಜನೆಗಳನ್ನು ಕೈಗೊಳ್ಳಲಲು ಅನುದಾನಕ್ಕೆ ಮನವಿ ಮಾಡಲಾಗಿದೆ. ಅದರಲ್ಲಿ, ಸುರಂಗ ಮಾರ್ಗ ನಿರ್ಮಾಣವೂ ಒಂದಾಗಿದ್ದು, ಇದನ್ನು ನಿರ್ಮಿಸಲು ಕೇಂದ್ರ ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಮಾಸ್ಟರ್‌ಪ್ಲಾನ್‌ ಮಾಡಿಕೊಂಡು ಬರುವಂತೆ ಸೂಚನೆ ನೀಡಲಾಗಿತ್ತು.

ಸುರಂಗ ರಸ್ತೆಯಲ್ಲಿ ಕನಿಷ್ಠ 2 ವಾಹನ ಸಂಚರಿಸಬೇಕು: ಬೆಂಗಳೂರು ಸುರಂಗ ಮಾರ್ಗ ನಿರ್ಮಾಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಬೆಂಗಳೂರಿನಲ್ಲಿ 150 ಕಿ.ಮೀ ಟ್ರಾಫಿಕ್ ಕಂಜಸ್ಟ್ ಮಾಡಲು ಟನಲ್, ಫ್ಲೈ ಓವರ್ ಕೇಂದ್ರ ಮೂಲ ಸೌಕರ್ಯ ಅಭಿವೃದ್ಧಿ ಸಚಿವಾಲಯದಿಂದ ಸೂಚಿಸಲಾಗಿದೆ. ಈ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಿಕೊಂಡು ಬರಲು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಗ್ಲೋಬಲ್ ಹಂತದಲ್ಲಿ ಗೊತ್ತಾಗಲಿ ಅಂತ ಅಭಿಪ್ರಾಯ ಸಂಗ್ರಹ ಮಾಡಲು ವಿಸ್ತರಣೆ ಮಾಡಿದ್ದೇನೆ. ಸುರಂಗ (ಟನಲ್) ರಸ್ತೆಗೆ ಗ್ಲೋಬಲ್ ಟೆಂಡರ್ ಕರೆದಿದ್ದೇವೆ. ಟನಲ್ ಒಳಗೆ ಕನಿಷ್ಠ ಎರಡು ವಾಹನ ಹೋಗುವ ರೀತಿ ಇರಬೇಕು. ಅದನ್ನ ಸ್ಟಡಿ ಮಾಡಿ ವರದಿ ಕೊಡಲು ಕೆಲವರು ಮುಂದೆ ಬರ್ತಿದ್ದಾರೆ ಎಂದು ಮಾಹಿತಿ ನೀಡಿದರು.

ನಗರದೊಳಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ: ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಮುಕ್ತಿಗೆ ದೆಹಲಿಯಲ್ಲಿ ಕೇಂದ್ರ ಸಚಿವರನ್ನ ಭೇಟಿಯಾದೆ. ಯಶವಂತಪುರ, ಬಳ್ಳಾರಿ, ಹೊಸೂರು, ಮೈಸೂರು ರಸ್ತೆಯ ಹೆದ್ದಾರಿಗಳ ಸಂಪರ್ಕಗಳನ್ನು ತಂದು ನಗರಕ್ಕೆ ಬಿಟ್ಟಿದ್ದೀರಿ. ಇದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ. ಇದರ ಬಗ್ಗೆ ಕೇಂದ್ರವೂ ಗಮನಹರಿಸುವಂತೆ ಮನವಿ ಮಾಡಿದ್ದೇನೆ. ಇನ್ನು ನಗರದಲ್ಲಿ ವಿಪರೀತ ಆಗುತ್ತಿರುವ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಮನವಿ ರಾಜ್ಯ ಸರ್ಕಾರದ ವತಿಯಿಂದ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ 70 ಸಾವಿರ ಸಲಹೆ: ಇನ್ನು ಬೆಂಗಳೂರು ಸಿಟಿ ರೋಡ್ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಹೇಗೆ ಮಾಡಬಹುದು ಅಂತ ಸಭೆ ಕರೆಯಲಾಗಿತ್ತು. 70 ಸಾವಿರಕ್ಕೂ ಹೆಚ್ಚು ಸಲಹೆ ಬಂದಿತ್ತು. ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರ ವರೆಗೂ ಸಲಹೆ ನೀಡಿದ್ದಾರೆ. ಅದನ್ನ ವರ್ಗೀಕರಣ ಮಾಡಿ ಕೊಡಲು ಕೆಲ ಇನ್ಸ್ಟಿಟ್ಯೂಟ್ ಗೆ ಕೊಟ್ಟಿದ್ದೇವೆ‌. ಇನ್ನು ಬೆಂಗಳೂರಿನ ಕೆಲ ಭಾಗ ಯೋಜನಾಬದ್ಧವಾಗಿದೆ. ಆದರೆ, ಕೆಲವೆಡೆ ಯೋಜನಾಬದ್ಧವಾಗಿಲ್ಲ. ಇದರ ಬಗ್ಗೆ ಪ್ಲಾನ್ ಮಾಡಿಕೊಂಡು ಬರಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.