Asianet Suvarna News Asianet Suvarna News

ಅಯೋಧ್ಯೆ ಬಾಲರಾಮನ ಪ್ರಾಣಪ್ರತಿಷ್ಠೆಯಲ್ಲಿ ಸುಳ್ಯದ ಪುರೋಹಿತ ಕೆ ಗಣಪತಿ ಭಟ್ ಭಾಗಿ

ಜಗತ್ತಿನ ಅತಿ ನಿರೀಕ್ಷೆಯ ಸಂದರ್ಭಗಳಲ್ಲೊಂದಾಗಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು ಆಯ್ಕೆಯಾಗಿದ್ದು, ಪ್ರತಿಷ್ಠಾಪನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Ganapathi purohit from Sulya participates in the death of Balarama in Ayodhya rav
Author
First Published Jan 21, 2024, 6:30 AM IST

ವಿಶೇಷ ವರದಿ

 ಸುಳ್ಯ (ಜ.21) : ಜಗತ್ತಿನ ಅತಿ ನಿರೀಕ್ಷೆಯ ಸಂದರ್ಭಗಳಲ್ಲೊಂದಾಗಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು ಆಯ್ಕೆಯಾಗಿದ್ದು, ಪ್ರತಿಷ್ಠಾಪನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕೆಮನಬಳ್ಳಿಯ ಶಾರದಾ ಮತ್ತು ಗೋಪಾಲಕೃಷ್ಣ ಭಟ್ ಅವರ ಪುತ್ರರಾದ ಡಾ. ಕೆ. ಗಣಪತಿ ಭಟ್. ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕ್ರತ ವಿ.ವಿಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಅಯೋಧ್ಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀರಾಮನ ಪ್ರಾಣ ಪ್ರತಿಷ್ಠೆಯಿಂದ ಪ್ರತಿ ಜೀವ ಸಂಕುಲಕ್ಕೆ ಆನಂದ: ಕಲ್ಲಡ್ಕ ಪ್ರಭಾಕರ ಭಟ್

ಕಾಶಿಯ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ.

ರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ನೇಮಕವಾಗಿರುವ 101 ಮಂದಿ ಪ್ರಧಾನ ಪುರೋಹಿತರಲ್ಲಿ ಡಾ.ಕೆ. ಗಣಪತಿ ಭಟ್ ಒಬ್ಬರು. ಅಲ್ಲದೆ ಇವರ ನಾಯಕತ್ವದಲ್ಲಿ 40 ಮಂದಿ ಆರ್ಚಕರು ಇದ್ದು, ಇವರಿಗೆ ನಾಯಕರಾಗಿ ಇರಲಿದ್ದಾರೆ. ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮಿಕಾಂತ್ ದೀಕ್ಷಿತ್ ಅವರು ಡಾ. ಕೆ. ಗಣಪತಿ ಭಟ್ ಅವರ ಹೆಸರನ್ನು ಸೂಚಿಸಿದ್ದು, ಡಾ. ಕೆ. ಗಣಪತಿ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗದ ಏಕೈಕ ಅರ್ಚಕರಾಗಿದ್ದಾರೆ.

1962 ರಲ್ಲಿ ಜನಿಸಿದ ಡಾ.ಕೆ. ಗಣಪತಿ ಭಟ್ ಜಾಲ್ಸೂರು ಗ್ರಾಮ ಕೆಮನಬಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ತರಗತಿವರೆಗೆ ಶಿಕ್ಷಣ ಪಡೆದರು. ಬಳಿಕ ಏಳನೇ ತರಗತಿ ವರೆಗೆ ಅಡ್ಕಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದರು. ಪ್ರೌಢ ಶಿಕ್ಷಣವನ್ನು ಪೆರ್ನಾಜೆಯ ಪ್ರೌಢಶಾಲೆಯಲ್ಲಿ ಪಡೆದರು. 1976 ರಲ್ಲಿ ಕಾಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ಋಗ್ವೇದದಲ್ಲಿ ಪದವಿ ಶಿಕ್ಷಣ ಪಡೆದರು.

ಸಂಸ್ಕೃತದಲ್ಲಿ ಪದವಿ ಶಿಕ್ಷಣದ ಬಳಿಕ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಲ್ಲಿ ಶಾಸ್ತ್ರ ಅಧ್ಯಯನ ವಿಷಯದಲ್ಲಿ ಎಂ.ಎ. ಪದವಿ ಪಡೆದರು. ಬಳಿಕ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಪಿ.ಎಚ್.ಡಿ ಪದವಿ ಪಡೆದರು. ಅಲ್ಲದೆ ಮದ್ರಾಸ್ ವಿ.ವಿ.ಯಲ್ಲಿ ಸಂಸ್ಕೃತ ವೇದಾಂತ ಮತ್ತು ನ್ಯಾಯ ಶಾಸ್ತ್ರ ವಿಷಯದಲ್ಲಿ ಮತ್ತೊಂದು ಎಂ.ಎ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪಡೆದರು. ಭಾರತ ಸರ್ಕಾರ ನಡೆಸಿದ ಯುಜಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಶಿಕ್ಷಣದ ಮೂಲಕ ಸಂಸ್ಕೃತ ಪಾಂಡಿತ್ಯ ಸಂಪಾದಿಸಿದ ಡಾ. ಗಣಪತಿ ಭಟ್ ಕಾಲಡಿಯ ಶಂಕರಾಚಾರ್ಯ ವಿ.ವಿ.ಯಲ್ಲಿ 8 ವರ್ಷ ಉಪನ್ಯಾಸಕರಾಗಿ ಬೋಧನೆ ಮಾಡಿದರು. ಬಳಿಕ ತಿರುಪತಿಯ ರಾಷ್ಟ್ರೀಯ ಸಂಸ್ಕ್ರತ ವಿ.ವಿಯಲ್ಲಿ ಪ್ರೊಫೆಸರ್ ಆಗಿ, ಪರೀಕ್ಷಾಂಗ ಕುಲಸಚಿವರಾಗಿ, ಪ್ರಸ್ತುತ ತಿರುಪತಿ ವಿ.ವಿ.ಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಲ್ಲಿಯವರೆಗೆ ಡಾ. ಕೆ. ಗಣಪತಿ ಭಟ್ ಅವರು 40 ಮಂದಿಗೆ ಪಿ.ಎಚ್.ಡಿ. ಮಾರ್ಗದರ್ಶನ ಮತ್ತು 30 ಮಂದಿಗೆ ಎಂ.ಫಿಲ್ ಗೆ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ. ಕೇರಳ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಪರೀಕ್ಷಾಧಿಕಾರಿಯಾಗಿ, ದೇಶದ ವಿವಿಧ ವಿಶ್ವವಿದ್ಯಾಲಯಗಳ ಪಿ.ಎಚ್.ಡಿ ಮೌಲ್ಯಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಯೋಧ್ಯೆಗೆ ತೆರಳಿದ ಕರ್ನಾಟಕ ಸೇರಿ ಹಲವು ರಾಜ್ಯಗಳ ವೀರಶೈವ ಮಠಾಧೀಶರು!

ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮಿಕಾಂತ್ ದೀಕ್ಷಿತ್‌ರ ಮೂಲಕ ರಾಮ ಜನ್ಮಭೂಮಿಗೆ ಕಾಲಿರಿಸುವ ಅವಕಾಶ ದೊರೆಯಿತು. ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಧಾರ್ಮಿಕ ವಿಧಿ ನೆರವೇರಿಸಲು ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪವಿತ್ರ ಕ್ಷಣ.

। ಡಾ. ಕೆ. ಗಣಪತಿ ಭಟ್

Follow Us:
Download App:
  • android
  • ios