ರಾಹುಲ್ ಗಾಂಧಿ ಪ್ರತಿಭಟನೆಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಮರಗಳನ್ನು ಕಡಿದು ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು, ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಆ.2): ಆಗಸ್ಟ್ 5, 2025ರಂದು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಅಕ್ರಮ ಮತ್ತು ಬಿಜೆಪಿಯ ಅಧಿಕಾರ ದುರುಪಯೋಗದ ವಿರುದ್ಧ ನಡೆಸಲಿರುವ ಪ್ರತಿಭಟನೆಗೆ ಅಡ್ಡಿಯಾಗುವ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಹತ್ತಾರು ವರ್ಷಗಳಿಂದ ಬೆಳೆಸಿದ್ದ ಮರಗಳನ್ನು ಕಡಿದು ಹಾಕಿದ ಗಂಭೀರ ಆರೋಪ ಕೇಳಿಬಂದಿದೆ.

ಉಪ್ಪಾರ್‌ಪೇಟೆ ಪೊಲೀಸ್ ಠಾಣೆಯ ಮಹದೇವಸ್ವಾಮಿ ಸೂಚನೆಯಂತೆ ಮರಗಳನ್ನು ಕಡಿಯಲಾಗಿದ್ದು, ಅವರ ಸಮ್ಮುಖದಲ್ಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಘಟನೆಯ ವಿವರ:

ರಾಹುಲ್ ಗಾಂಧಿಯವರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಿದ್ದಾರೆ. ಆದರೆ, ಪ್ರತಿಭಟನೆಗೆ ಮರಗಳು ಅಡ್ಡಿಯಾಗಲಿವೆ ಎಂಬ ನೆಪವೊಡ್ಡಿ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಪೊಲೀಸರ ಸಮ್ಮುಖದಲ್ಲೇ ಮರಗಳನ್ನು ಕಡಿದು ನಾಶಪಡಿಸಿದ್ದಾರೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ನಡೆದರೂ ಈ ಕೃತ್ಯಕ್ಕೆ ಬಿಬಿಎಂಪಿಯ ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ (DCF) ಏನು ಕ್ರಮ ಕೈಗೊಳ್ಳಲಿದ್ದಾರೆ? ಮಹದೇವಸ್ವಾಮಿ ವಿರುದ್ಧ ಬಿಬಿಎಂಪಿ ದೂರು ಕೊಡ್ತಾರಾ? ಅಥವಾ ಜಾಣ ಕುರುಡರಂತೆ ಸುಮ್ಮನಾಗ್ತಾರಾ? ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಪ್ರತಿಭಟನೆಗೆ ಬಿಜೆಪಿ ತಿರುಗೇಟು:

ಚುನಾವಣೆಯಲ್ಲಿ ಹೀನಾಯ ಸೋಲನ್ನು ಮರೆಮಾಚಲು ರಾಹುಲ್ ಗಾಂಧಿ ಇಂತಹ ಹತಾಶ ಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ. ಕಳೆದ ಚುನಾವಣೆಯಲ್ಲಿ ವಂಶಪಾರಂಪರ್ಯಕ್ಕಿಂತ ದೇಶದ ಅಭಿವೃದ್ಧಿಗೆ ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಅಕ್ರಮದ ಆರೋಪಗಳಿಗೆ 100% ಪುರಾವೆ ಇದ್ದರೆ, ಬೀದಿ ನಾಟಕದ ಬದಲು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ.

ಮರಗಳ ಮಾರಣಹೋಮಕ್ಕೆ ಬೆಂಗಳೂರಿಗರು ಕಿಡಿ:

ಹತ್ತಾರು ವರ್ಷಗಳಿಂದ ಬೆಳೆಸಿದ್ದ ಮರಗಳನ್ನು ಕಡಿದಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಬಿಬಿಎಂಪಿ ಮತ್ತು ಸಂಬಂಧಪಟ್ಟ ಇಲಾಖೆಗಳು ಯಾವ ಕಾನೂನಾತ್ಮಕ ಕ್ರಮ ಕೈಗೊಳ್ಳಲಿವೆ ಎಂಬುದು ಕಾದುನೋಡಬೇಕಾಗಿದೆ. ಫ್ರೀಡಂ ಪಾರ್ಕ್‌ನ ಈ ಘಟನೆ ರಾಜಕೀಯ ಮತ್ತು ಪರಿಸರ ಸಂಬಂಧಿತ ಚರ್ಚೆಗೆ ಕಾರಣವಾಗಿದೆ.