ಅಪ್ಪಾಜಿ ಕ್ಯಾಂಟೀನ್ನಲ್ಲಿ 1 ರೂ.ಗೆ ಊಟ ವಿತರಣೆ
ನಮ್ಮ ಅಪ್ಪಾಜಿ ಕ್ಯಾಂಟೀನ್’ಗೆ 3 ವರ್ಷ: .1ಕ್ಕೆ ಊಟ ವಿತರಣೆ| ಊಟ ವಿತರಿಸಿದ ಮಾಜಿ ಶಾಸಕ ಟಿ.ಎ.ಶರವಣ| ಕೊರೋನಾದಿಂದಾಗಿ ಬಹಳಷ್ಟು ಜನರಿಗೆ ಪೌಷ್ಟಿಕಾಂಶವುಳ್ಳ ಊಟದ ವ್ಯವಸ್ಥೆ ಇಲ್ಲದಂತಾಗಿದೆ| ಇಂತಹ ವೇಳೆಯಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಕಬ್ಬಿಣಾಂಶವುಳ್ಳ ನವಣೆ, ತರಕಾರಿ ಮತ್ತು ಸೊಪ್ಪಿನ ತಿಂಡಿ ಮತ್ತು ಊಟವನ್ನು ನೀಡುವ ಕಾರ್ಯವನ್ನ ಅಪ್ಪಾಜಿ ಕ್ಯಾಂಟೀನ್ ಮಾಡುತ್ತಿದೆ|
ಬೆಂಗಳೂರು(ಆ.07): ಕಾಂಗ್ರೆಸ್ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್ಗೆ ಸೆಡ್ಡು ಹೊಡೆದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೆಸರಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಆರಂಭಿಸಿರುವ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗೆ ಮೂರು ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಭೋಜನವನ್ನು ಗ್ರಾಹಕರಿಗೆ 1ಕ್ಕೆ ಊಟ ನೀಡಲಾಯಿತು.
ನಗರದ ಹನುಮಂತನಗರದಲ್ಲಿ ಪ್ರಾರಂಭಿಸಿರುವ ನಮ್ಮ ಅಪ್ಪಾಜಿ ಕ್ಯಾಂಟೀನ್ಗೆ ಗುರುವಾರ ಮೂರು ವರ್ಷವಾಗಿದೆ. ಈ ಸಂಭ್ರಮದ ಪ್ರಯುಕ್ತ ಗುರುವಾರ ಮಧ್ಯಾಹ್ನ 12ರಿಂದ 2ರವರೆಗೆ ಕೇವಲ 1ಕ್ಕೆ ಊಟ ನೀಡಲಾಯಿತು. ರಾಗಿ ಮುದ್ದೆ, ಅನ್ನ, ಸಾಂಬಾರ್ ವಿತರಣೆ ಮಾಡಲಾಯಿತು. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಶರವಣ ಅವರೇ ಊಟವನ್ನು ವಿತರಿಸಿದರು. ನೂರಾರು ಜನರು ಮಧ್ಯಾಹ್ನದ ಊಟ ಸವಿದರು.
ಅಪ್ಪಾಜಿ ಕ್ಯಾಂಟೀನ್ನಲ್ಲಿ 1 ರು.ಗೆ ಊಟ: ರೋಗ ನಿರೋಧಕ ಹೆಚ್ಚಿಸುವ ಆಹಾರ ಲಭ್ಯ
ಕೊರೋನಾದಿಂದಾಗಿ ಬಹಳಷ್ಟು ಜನರಿಗೆ ಪೌಷ್ಟಿಕಾಂಶವುಳ್ಳ ಊಟದ ವ್ಯವಸ್ಥೆ ಇಲ್ಲದಂತಾಗಿದೆ. ಇಂತಹ ವೇಳೆಯಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಕಬ್ಬಿಣಾಂಶವುಳ್ಳ ನವಣೆ, ತರಕಾರಿ ಮತ್ತು ಸೊಪ್ಪಿನ ತಿಂಡಿ ಮತ್ತು ಊಟವನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ಪ್ರತಿದಿನವೂ ಶುಚಿ ಮತ್ತು ರುಚಿಯಾದ ಕಷಾಯ, ತಿಂಡಿ, ಊಟವನ್ನು ಅತ್ಯಂತ ಕಡಿಮೆ ದರಲ್ಲಿ ನೀಡಲಾಗುತ್ತಿದೆ. ಶರವಣ ಅವರು ಸ್ವಂತ ಶಕ್ತಿಯಿಂದ ರುಚಿಯಾದ ಆಹಾರವನ್ನು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನೀಡುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಉಪಹಾರಕ್ಕೆ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್ ಜತೆಗೆ ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆ, ಅನ್ನ ಸಾಂಬಾರ್, ರೈಸ್ ಬಾತ್ ನೀಡಲಾಗುತ್ತಿದೆ. ಪ್ರತಿದಿನವೂ ಸಾವಿರಾರು ಜನ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಮೂರು ವರ್ಷದಿಂದ ಅಪ್ಪಾಜಿ ಕ್ಯಾಂಟೀನ್ ನಡೆಸುತ್ತಿದ್ದೇನೆ. ಸ್ವಂತ ಶಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದು, ಎಲ್ಲರ ಸಹಕಾರ ಬೇಕು. ಕೊರೋನಾ ಸಮಯವಾದರಿಂದ ನವಣೆ, ಸಜ್ಜೆಯಂತಹ ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ಮಾಜಿ ಶಾಸಕ ಟಿ.ಎ.ಶರವಣ ಅವರು ತಿಳಿಸಿದ್ದಾರೆ.