ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಬೇನಾಮಿ ಕೇಸ್ ರದ್ದು
ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬೇನಾಮಿ ಆಸ್ತಿ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಸುಪ್ರೀಂಕೋರ್ಟ್ ಆದೇಶವನ್ನು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ರೆಡ್ಡಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.
ಬೆಂಗಳೂರು (ಡಿ.08): ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬೇನಾಮಿ ಆಸ್ತಿ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಸುಪ್ರೀಂಕೋರ್ಟ್ ಆದೇಶವನ್ನು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ರೆಡ್ಡಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.
ಜನಾರ್ದನ ರೆಡ್ಡಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು 2009ರಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದರು. ಬಳಿಕ 2016ರ ಬೇನಾಮಿ ವ್ಯವಹಾರ ನಿರ್ಬಂಧ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದರು. ಆದರೆ, ಸುಪ್ರೀಂಕೋರ್ಟ್ ತೀರ್ಪು ಜನಾರ್ದನ ರೆಡ್ಡಿ ಅವರಿಗೆ ವರದಾನವಾಗಿದೆ. ಗಣಪತಿ ಡೀಲ್ಕಾಮ್ ಪ್ರೈವೇಟ್ ಲಿ. ಪ್ರಕರಣ ಸಂಬಂಧ ಆಗಸ್ಟ್ನಲ್ಲಿ 2016ರ ಮೊದಲು ನಮೂದಿಸಿದ ವಹಿವಾಟಿಗೆ ಕ್ರಿಮಿನಲ್ ಕಾನೂನು ಕ್ರಮ ಅಗತ್ಯ ಇಲ್ಲ. ಅಂತಹ ಕಾನೂನು ಕ್ರಮಗಳನ್ನು ರದ್ದುಗೊಳಿಸುವಂತೆ ತಿಳಿಸಿತ್ತು.
ರಾಮುಲು ಪಂಚವಟಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ದೇಗುಲಗಳಿಗೆ ಭೇಟಿ
ಈ ತೀರ್ಪಿನ ಅನ್ವಯ ನ್ಯಾಯಾಲಯವು ತಿದ್ದುಪಡಿ ಕಾಯ್ದೆಯನ್ನು 2009ರ ಕೃತ್ಯಕ್ಕೆ ಪೂರ್ವಾನ್ವಯ ಮಾಡುವಂತಿಲ್ಲ ಎಂದು ಹೇಳಿದೆ. ಸುಪ್ರೀಂಕೋರ್ಟ್ನ ತೀರ್ಪು ಆಧರಿಸಿ ನ್ಯಾಯಾಲಯವು ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿದ್ದ ಬೇನಾಮಿ ಆಸ್ತಿ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಬೇನಾಮಿ ಆಸ್ತಿ ಪ್ರಕರಣಗಳಲ್ಲಿ 2016ರ ಕಾನೂನಿನಡಿ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೇಳಿ ಕೇಸು ರದ್ದುಗೊಳಿಸಿದೆ. ಪ್ರಕರಣವನ್ನು ಕೈಬಿಟ್ಟಿರುವುದರಿಂದ ಜನಾರ್ದನರೆಡ್ಡಿ ನಿಟ್ಟಿಸಿರು ಬಿಡುವಂತಾಗಿದೆ.
ಈಗ ಜನರ ಜೊತೆ ಇರಬೇಕು: ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ಕಾರಣಾಂತರಗಳಿಂದ ಬಳ್ಳಾರಿಯಿಂದ ಹೊರಗಿರಬೇಕಿದೆ. ಬೆಂಗಳೂರಲ್ಲಿ ಇರಲು ಇಷ್ಟವಿಲ್ಲ. ಉತ್ತರ ಕರ್ನಾಟಕ, ಬಳ್ಳಾರಿ, ಬೀದರ್ನಿಂದ ಬೆಳಗಾವಿ ವರೆಗೆ ಎಲ್ಲಿಯಾದರೂ ಇರಬೇಕು. ಈ ವಾತಾವರಣ ಮನಸ್ಸಿಗೆ, ಆರೋಗ್ಯಕ್ಕೆ ತೃಪ್ತಿ ನೀಡುತ್ತದೆ. ನಮ್ಮ ಜನರ ಮಧ್ಯ ಇರಬೇಕು ಎನ್ನುವ ಕಾರಣದಿಂದ ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ. 12 ವರ್ಷ ಮನೆಯಲ್ಲಿದ್ದೇನೆ. ಈಗ ಜನರ ಜೊತೆ ಇರಬೇಕು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಪಕ್ಷದ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ. ಇನ್ನೂ ಸಮಯ ಇದೆ. ನಾಯಕರ ಸಂಪರ್ಕ ಅಲ್ಲ. ನಮ್ಮ ಜೊತೆ ಜನರಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ರಾಜಕೀಯ ಜೀವನ ಆರಂಭವಾಗಿದ್ದು, ಆಡ್ವಾನಿಯವರ ರಥಯಾತ್ರೆ ಮೂಲಕ ಕೆಲಸ ಆರಂಭ ಮಾಡಿದ್ದೇವೆ. ಏನಿದ್ದರೂ ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನ ಇರುತ್ತೆ. ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದನ್ನು ಬರುವ ದಿನಗಳಲ್ಲಿ ತಿಳಿಸುತ್ತೇನೆ. ಪಕ್ಷದ ವರಿಷ್ಠರು, ಹಿರಿಯರು, ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಕಾದು ನೋಡುತ್ತೇನೆ ಎಂದರು.
ಜನಾರ್ದನ ರೆಡ್ಡಿ ರಾಜಕೀಯ ರಿ-ಎಂಟ್ರಿ: 18ರ ನಂತರ ಕ್ಷೇತ್ರ ಪ್ರಕಟ?
ಗದಗ ನಗರದಲ್ಲಿ ಶ್ರೀರಾಮುಲು ಮನೆಯಲ್ಲೇ ಇರಲು ಸಿದ್ಧವಾಗಿದ್ದೇನೆ. ರಾಮುಲು ಮನೆ ಅಂದ್ರೆ ಅದು ನಮ್ಮ ಮನೆ. ನಮ್ಮ ಮನೆ ಅಂದ್ರೆ ರಾಮುಲು ಮನೆ. ರಾಜಕೀಯಕ್ಕೂ ಮೀರಿದ ಸ್ನೇಹ, ಪ್ರೀತಿ ಬಾಂಧವ್ಯವಿದ್ದು, ನಾವಿಬ್ಬರೂ ಒಂದೇ ಕುಟುಂಬದವರಂತೆ ಇದ್ದೇವೆ ಎಂದರು.