ನಮಗೂ ಅಧಿಕಾರ ಬೇಕು: ಆರ್.ಅಶೋಕ
'ನಾವೇನೂ ಸನ್ಯಾಸಿಗಳಲ್ಲ. ನಮಗೂ ರಾಜ್ಯದ ಅಭಿವೃದ್ಧಿ ಕನಸಿದೆ. ಹಾಗಂತ ನಾವೇನೂ ಸರಕಾರವನ್ನು ಕೆಡವಲು ಯತ್ನಿಸುತ್ತಿಲ್ಲ. ಆ ಕೆಲಸವನ್ನು ಕಾಂಗ್ರೆಸ್ನ ಅತೃಪ್ತ ಆತ್ಮಗಳೇ ಮಾಡುತ್ತವೆ,' ಎನ್ನುವ ಮೂಲಕ ಮಾಜಿ ಡಿಸಿಎಂ ಆರ್. ಅಶೋಕ ನಮಗೂ ಅಧಿಕಾರ ಬೇಕು, ನಾವೇನೂ ಸನ್ಯಾಸಿಗಳಲ್ಲಿ ಎಂದು ಹೇಳಿದ್ದಾರೆ.
ಮಂಡ್ಯ: 'ಕೇವಲ 38 ಸೀಟುಗಳನ್ನು ಪಡೆದ ಜೆಡಿಎಸ್ ಅಧಿಕಾರ ನಡೆಸುತ್ತೆ ಎಂದಾದರೆ, ಬಿಜೆಪಿ ಏಕೆ ಅಧಿಕಾರ ನಡೆಸಬಾರದು? ನಮಗೂ ಅಧಿಕಾರ ಬೇಕು,' ಎಂದು ಮಾಜಿ ಡಿಸಿಎಂ ಆರ್. ಅಶೋಕ ಹೇಳಿದ್ದಾರೆ.
'ನಾವೇನೂ ಸನ್ಯಾಸಿಗಳಲ್ಲ. ನಮಗೂ ರಾಜ್ಯದ ಅಭಿವೃದ್ಧಿ ಕನಸಿದೆ. ಹಾಗಂತ ನಾವೇನೂ ಸರಕಾರವನ್ನು ಕೆಡವಲು ಯತ್ನಿಸುತ್ತಿಲ್ಲ. ಆ ಕೆಲಸವನ್ನು ಕಾಂಗ್ರೆಸ್ನ ಅತೃಪ್ತ ಆತ್ಮಗಳೇ ಮಾಡುತ್ತವೆ,' ಎಂದರು.
ರಕ್ಷಣಾ ಇಲಾಖೆಯ ಅವ್ಯವಹಾರದ ಬಗ್ಗೆ ಮಾತನಾಡಿದ ಅವರು, 'ಇದು ಉಭಯ ದೇಶಗಳ ಒಪ್ಪಂದ. ಹಿಂದಿನ ಸರಕಾರವೇ ಇದಕ್ಕೆ ಸಹಿ ಮಾಡಿದೆ. ಉಭಯ ರಾಷ್ಟ್ರಗಳ ಪ್ರಧಾನಿಗಳು, ರಕ್ಷಣಾ ಸಚಿವರೂ ಸಹಿ ಮಾಡಿದ್ದಾರೆ,' ಎಂದು ಮಾಧ್ಯಮದೊಂದಿಗೆ ಮಾತನಾಡುತ್ತ ಹೇಳಿದರು.
ಮೋದಿ ಮೇಲಿಲ್ಲ ಕಪ್ಪು ಚುಕ್ಕಿ:
'ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಪ್ರಧಾನಿ ಮೋದಿಯವರು ಅಧಿಕಾರ ನಡೆಸುತ್ತಿದ್ದಾರೆ. ಆದರೆ, ಹಿಂದಿನ ಸರಕಾರದಲ್ಲಿ 2ಜಿ ಹಗರಣ ಹಾಗೂ ಕಾಮನ್ವೆಲ್ತ್ ಹಗರಣದಲ್ಲಿ ಭಾಗಿಯಾದ ಅನೇಕ ಸಂಸದರು ಜೈಲಿಗೆ ಹೋಗಿದ್ದಾರೆ. ಆದರೆ, ಪಾರದರ್ಶಕ ಆಡಳಿತ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ,' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಟೀಕೆಗೆ ಪ್ರತಿಕ್ರಿಯೆ:
'ರಾಹುಲ್ ಒಬ್ಬ ಹುಡುಗಾಟದ ಹುಡುಗ. ವಿದೇಶಕ್ಕೆ ಹೋಗಿ ಭಾಷಣ ಮಾಡುವಾಗ ದೇಶದ ಮಾನ ಹರಜಾಕಿದ್ದಾರೆ. ಅವರ ಮನೆತನದಿಂದ ಅವರಿಗೆ ಗೌರವ ಸಿಕ್ಕಿದೆ. ಆದರೆ ಅವರು ಮನೆತನವನ್ನ ಮರೆತು ಮಾತನಾಡುತ್ತಿದ್ದಾರೆ,' ಎಂದು ರಾಹುಲ್ ಜರ್ಮನಿಯಲ್ಲಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದರು.
'ಇದೊಂದು ಎರಡು ನಾಲಿಗೆಯ ಎಡಬಿಡಂಗಿ ಸರಕಾರ. ಗೋಮುಖ ವ್ಯಾಘ್ರನಂತೆ ಕಾಂಗ್ರೆಸ್ನ ಮುಖ ಪರಿಚಯವಾಗುತ್ತಿದೆ. ಸರಕಾರ ದಿವಾಳಿಯಾಗಿದೆ. ರಂಗನಾಥ, ಚಾಮಂಡೇಶ್ವರಿ, ಮೇಲುಕೋಟೆ ದೇವಾಲಯಗಳ ಹಣಕ್ಕೂ ಸರಕಾರ ಮುದಾಗಿದೆ. ಸಂಪನ್ಮೂಲ ಕ್ರೂಢೀಕರಣ ಮಾಡದಷ್ಟು ಬೇಜವಾಬ್ದಾರಿ ಈ ಸರಕಾರಕ್ಕಿದೆ. ಅಭಿವೃದ್ದಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ,' ಎಂದು ಆರೋಪಿಸಿದರು.
'ಮಂಡ್ಯದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿಲ್ಲ. ಸಣ್ಣ ನೀರಾವರಿ ಸಚಿವರ ಜಿಲ್ಲೆಯಲ್ಲಿಯೇ ಕೆರೆಗಳು ದುಸ್ಥಿತಿಯಲ್ಲಿವೆ. ಈ ಕಾಂಗ್ರೆಸ್-ಜೆಡಿಎಸ್ ಸರಕಾರ ಮೂರು ತಿಂಗಳಾದರೂ ಟೇಕ್ ಆಫ್ ಆಗಿಲ್ಲ,' ಎಂದು ಆರೋಪಿಸಿದರು.
ಮಂಡ್ಯಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ