ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈವರೆಗೂ ಮಳೆಯಾಗಿಲ್ಲ. ಎಲ್ಲೂ ಶೇ.10ರಷ್ಟು ಬಿತ್ತನೆ ಕಾರ್ಯವೂ ಆಗಿಲ್ಲ. ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಎದುರಾಗಿದೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 

ದಾವಣಗೆರೆ(ಜು.06): ರಾಜ್ಯದಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯಕ್ಕೂ ಗರ ಬಡಿದಿದ್ದು, ರಾಜ್ಯವನ್ನು ಬರ ಪೀಡಿತವೆಂದು ಘೋಷಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಬುಧವಾರ ಸಂಸದ ಡಾ.ಜಿ.ಎಂ.ಸಿದ್ದೇಶ್ವರರ 71ನೇ ಜನ್ಮದಿನಾಚರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈವರೆಗೂ ಮಳೆಯಾಗಿಲ್ಲ. ಎಲ್ಲೂ ಶೇ.10ರಷ್ಟು ಬಿತ್ತನೆ ಕಾರ್ಯವೂ ಆಗಿಲ್ಲ. ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಎದುರಾಗಿದೆ ಎಂದರು.

ದಾವಣಗೆರೆಯಲ್ಲಿ 25,000 ಎಕ್ರೇಲಿ ಕಾರ್ಗಿಲ್‌ನಿಂದ ರೈತರಿಗೆ ತರಬೇತಿ

ಭೀಕರ ಬರ ಪರಿಸ್ಥಿತಿ ಎದುರಾಗಿದ್ದರೂ ಸರ್ಕಾರ ಮಾತ್ರ ಬರ ಪೀಡಿತ ಪ್ರದೇಶ, ಬರ ಪೀಡಿತ ರಾಜ್ಯವೆಂಬ ಘೋಷಣೆಗೆ ಮೀನ-ಮೇಷ ಎಣಿಸುತ್ತಿರುವುದು ಸರಿಯಲ್ಲ. ಈಗಾಗಲೇ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಬತ್ತಿ ಹೋಗಿವೆ. ರಾಜ್ಯವನ್ನು ಬರ ಪೀಡಿತ ರಾಜ್ಯವೆಂದು ಘೋಷಣೆ ಮಾಡುವಂತೆ ನಮ್ಮವರು ಸದನದ ಒಳ ಮತ್ತು ಹೊರಗೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬರ ಪರಿಸ್ಥಿತಿ ಇದ್ದರೂ ಕಾಂಗ್ರೆಸ್‌ ಸರ್ಕಾರ ಕಣ್ಣು ಮುಚ್ಚಿ ಕೂತಿದೆ. ಇನ್ನಾದರೂ ಸರ್ಕಾರ ಕಣ್ಣು ತೆರೆಯಲಿ. ವಿಳಂಬ ನೀತಿ ಅನುಸರಿಸದೆ, ನೀರಿಲ್ಲದೆ ಜನ ಪರದಾಡುತ್ತಿರುವ ಪ್ರದೇಶಗಳನ್ನು ಬರ ಪೀಡಿತ ಪ್ರದೇಶವೆಂದು ತಕ್ಷಣ ಘೋಷಿಸಲಿ. ಈ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುವುದು ಸರಿಯೂ ಅಲ್ಲ ಎಂದು ಹೇಳಿದರು.