*   ಮಂಡಳಿಗೆ ಶಾಶ್ವತ ಕಾರ್ಯದರ್ಶಿ ಕೂಡ ನೇಮಕ*   ಸಾವಿರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ *   ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ  

ಬೆಂಗಳೂರು(ಸೆ.24): ಮುಂದಿನ 10 ದಿನಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿ ಆ ಮಂಡಳಿಗೆ ಶಾಶ್ವತ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆಶ್ವಾಸನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಗುರುವಾರ ಕಲ್ಯಾಣ ಕರ್ನಾಟಕದ(Kalyana Karnataka) ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಆರ್ಥಿಕ ಮತ್ತು ಇನ್ನಿತರೆ ಅಭಿವೃದ್ಧಿ ವಿಚಾರ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ಮಾತ್ರ ನೇಮಕವಾಗಿದ್ದು, ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಹೇಳಿದ್ದಾರೆ. ಅಲ್ಲದೇ, ಶಾಶ್ವತ ಕಾರ್ಯದರ್ಶಿ ನೇಮಕಕ್ಕೂ ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು. 

ಮಂಡಳಿಯಲ್ಲಿ ಖಾಲಿ ಇರುವ ಎಂಜಿನಿಯರ್ ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು. ನೇಮಕಾತಿಗೆ ಸಂಬಂಧಿಸಿದಂತೆ ಕೋವಿಡ್‌ನಿಂದಾಗಿ ಹೊರಡಿಸಿರುವ ನಿರ್ಬಂಧವನ್ನು ತಕ್ಷಣವೇ ತೆರವು ಮಾಡಲಾಗುವುದು. 20 ಸಾವಿರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ 1500 ಕೋಟಿ ರು. ಅನುದಾನ ನೀಡಲಾಗುತ್ತಿದೆ. ಅಲ್ಲದೇ, 500 ಕೋಟಿ ರು. ಇದ್ದು, ಒಟ್ಟು ಎರಡು ಸಾವಿರ ಕೋಟಿ ರು. ಖರ್ಚು ಮಾಡಲು ಸೂಕ್ತ ಸೂಚನೆ ನೀಡಲಾಗುವುದು. ಮಾರ್ಚ್ ವೇಳೆಗೆ ಅನುಷ್ಠಾನ ಗೊಳಿಸುವಂತೆ ಸಂಬಂಧಪಟ್ಟ ಏಜೆನ್ಸಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

ಮೊದಲ ಬಾರಿಗೆ ಯಡಿಯೂರಪ್ಪಗೆ ಜೈ ಎಂದ ಯತ್ನಾಳ್‌..!

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಂಬಂಧ ಮೇಲ್ವಿಚಾರಣೆ ಮಾಡಲು ರಚನೆ ಮಾಡಿರುವ ಘಟಕವು (ಸೆಲ್) ಬೆಂಗಳೂರಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಕಲಬುರಗಿಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಆ ಭಾಗದ ಅಭಿವೃದ್ಧಿ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಮಾಡಲು ಅನುಕೂಲವಾಗಲಿದೆ. ಇದಲ್ಲದೇ, ಟೆಕ್‌ಸ್ಟೈಲ್ ಮತ್ತು ಐಟಿ ಪಾರ್ಕ್ ಬಂದ್ ಆಗಿದ್ದು, ಅದನ್ನು ಪುನರ್ ಆರಂಭಿಸಲು ಐಟಿ ಮತ್ತು ಕೈಗಾರಿಕೆ ಸಚಿವರಿಗೆ ಸೂಚನೆ ನೀಡಲಾಗುವುದು.

371 ಜೆ ಅಶೋತ್ತರಗಳನ್ನು ಪೂರ್ತಿ ಮಾಡಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಅಲ್ಲಿನ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತದೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.