* ಯೋಜನೆ- ಟೆಸ್ಟಿಂಗ್‌, ಟ್ರೇಸಿಂಗ್‌, ಟ್ರ್ಯಾಕಿಂಗ್‌, ಟ್ರೀಟ್ಮೆಂಟ್‌, ಟೆಕ್ನಾಲಜಿ ಸೂತ್ರ* ಐಎಎಸ್‌ ಅಧಿಕಾರಿ ವಿ. ಪೊನ್ನುರಾಜ್‌ ಸಮಿತಿಯ ಮುಖ್ಯಸ್ಥ* ಪ್ರತಿ ವಾರ ತನ್ನ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ ಈ ತಂಡ 

ಬೆಂಗಳೂರು(ಜೂ.10): ರಾಜ್ಯದಲ್ಲಿ ಕೋವಿಡ್‌-19 ಪ್ರಕರಣದಲ್ಲಿ ನಿರಂತರ ಇಳಿಕೆ ದಾಖಲಾಗುತ್ತಿದ್ದರೂ ಕೋವಿಡ್‌ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಾಹಿಸುವ ಶಂಕಿತರ ಟ್ರೆಸಿಂಗ್‌ (ಪತ್ತೆ ಹಚ್ಚುವಿಕೆ), ಟೆಸ್ಟಿಂಗ್‌ (ಪರೀಕ್ಷೆ), ಟ್ರಾಕಿಂಗ್‌ (ಚಲನ ವಲನದ ಮೇಲೆ ನಿಗಾ). ಟ್ರಿಟ್ಮೆಂಟ್‌ (ಚಿಕಿತ್ಸೆ) ಮತ್ತು ಟೆಕ್ನಾಲಜಿ (ತಂತ್ರಜ್ಞಾನ) ಎಂಬ ಈ ’5 ಟಿ’ಗಳು ವ್ಯವಸ್ಥಿತವಾಗಿ ಜಾರಿಯಲ್ಲಿರುವಂತೆ ನೋಡಿಕೊಳ್ಳಲು ಸರ್ಕಾರ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ.

ರಾಜ್ಯ ಕೋವಿಡ್‌ ವಾರ್‌ ರೂಮ್‌ನ ಉಸ್ತುವಾರಿ ಐಎಎಸ್‌ ಅಧಿಕಾರಿ ವಿ. ಪೊನ್ನುರಾಜ್‌ ಈ ಸಮಿತಿಯ ಮುಖ್ಯಸ್ಥರಾಗಿರಲಿದ್ದಾರೆ. ಬಿಬಿಎಂಪಿಯ ವಿಶೇಷ ಆಯುಕ್ತ ಡಿ. ರಂದೀಪ್‌, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ. ಅನುರಾಧ ಚಂದ್ರಶೇಖರ್‌, ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಬಿಸ್ವಜಿತ್‌ ಮಿಶ್ರಾ, ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಪಿನ್‌ ಸಿಂಗ್‌, ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, ಗಣಿ ವಿಭಾಗದ ಹರೀಶ್‌, ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್‌ ನ ಯೋಜನಾ ನಿರ್ವಹಕ ಶರತ್‌ ಎಚ್‌.ಎಸ್‌. ಸಮಿತಿಯ ಸದಸ್ಯರಾಗಿರುತ್ತಾರೆ.

ರಾಜ್ಯದಲ್ಲಿ ಕೊರೋನಾ ಕೊಂಚ ಏರಿಕೆ, ಪಾಸಿಟಿವಿಟಿ ಶೇ.6.68ಕ್ಕೆ ಇಳಿಕೆ: ಇಲ್ಲಿದೆ ಜೂ. 09ರ ಅಂಕಿ-ಸಂಖ್ಯೆ

ಈ ತಂಡವು ಪ್ರತಿ ವಾರ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಪರಿಹಾರ ಪೋರ್ಟಲ್‌, ಮೊಬೈಲ್‌ ಮೂಲಕ ಸಂಪರ್ಕಿತರ ಪತ್ತೆ, ಕ್ವಾರಂಟೈನ್‌ ವಾಚ್‌, ಕಂಟೈನ್‌ಮೆಂಟ್‌ ವಲಯ, ಹಾಸಿಗೆ ನಿರ್ವಹಣೆಗಾಗಿರುವ ಎಸ್‌ಎಎಸ್‌ಟಿ ಪೊರ್ಟಲ್‌. ಕೋವಿಡ್‌ ಹಾಸಿಗೆ ನಿರ್ವಹಣಾ ವ್ಯವಸ್ಥೆಯ ಆನ್‌ಲೈನ್‌ ಮತ್ತು ನೈಜ ಸಮಯದ ನಿರ್ವಹಣೆ, ಖಾಸಗಿ ಆಸ್ಪತ್ರೆಗಳಲ್ಲಿನ ಐಎಲ್‌ಐ ಮತ್ತು ಸಾರಿ ರೋಗಿಗಳ ಸರ್ವೇಕ್ಷಣೆ ವ್ಯವಸ್ಥೆಗಳಿವೆ. ಇವೆಲ್ಲವನ್ನೂ ಒಂದು ಗೂಡಿಸಿ ಮಾಹಿತಿ ಉತ್ತಮ ನಿರ್ವಹಣೆ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿದೆ.