ಆರೋಗ್ಯ ಸಮಸ್ಯೆ ಎದುರಾದಾಗ, ಹಬ್ಬ ಹರಿದಿನಗಳಲ್ಲಿ, ಮಕ್ಕಳ ವಿದ್ಯಾಭ್ಯಾಸ ಸೇರಿ ಕೊನೆಗೆ ಊಟಕ್ಕೂ ಆರ್ಥಿಕ ಸಂಕಷ್ಟ ಎದುರಿಸಿದ ಅನುಭವ ಇವರಿಗಿದೆ. ಪ್ರತಿನಿತ್ಯದ ಗಸ್ತಿನ ಜೊತೆಗೆ ಫೈರ್ ಲೈನ್, ಕಾಡಿಚ್ಚು ತಡೆ, ಹುಲಿ-ಆನೆ ಸರಯಂಥ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಸದಾ ತೊಡಗಿರುತ್ತಾರೆ. 

ಮಯೂರ್‌ ಹೆಗಡೆ

Add Asianetnews Kannada as a Preferred SourcegooglePreferred

ಬೆಂಗಳೂರು(ಜ.09): ರಾಜ್ಯದ ಹಲವು ಇಲಾಖೆಗಳ ಹೊರಗುತ್ತಿಗೆ ಸಿಬ್ಬಂದಿ ಕಾಯಮಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರು ಸದ್ಯಕ್ಕಂತೂ ಕಾಯಂ ಬಗ್ಗೆ ಚಕಾರ ಎತ್ತುತ್ತಿಲ್ಲ. ಏಕೆಂದರೆ, ಅವರಿಗೆ ಸಂಬಳವೇ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಹೊರಗುತ್ತಿಗೆ ಅರಣ್ಯ ವೀಕ್ಷಕರ ಬೇಡಿಕೆ- ಸಮಯಕ್ಕೆ ಸರಿಯಾಗಿ ಸಂಬಳ ಕೊಡಿ ಸ್ವಾಮಿ ಎಂಬುದು ಮಾತ್ರ. ದಶಕಗಳಿಂದ ಈ ಸಮಸ್ಯೆ ಅನುಭವಿಸುತ್ತಿರುವ ಹೊರಗುತ್ತಿಗೆ ಅರಣ್ಯ ವೀಕ್ಷಕರ ಈ ಕೂಗು ಅರಣ್ಯ ರೋದನವಾಗಿದೆ.

ಕಳೆದ ಅಕ್ಟೋಬರ್ ಬಳಿಕ ರಾಜ್ಯದ ಅರಣ್ಯ ಇಲಾಖೆಯ ಹಲವು ವಿಭಾಗಗಳ ಹೊರಗುತ್ತಿಗೆ ಸಿಬ್ಬಂದಿಗೆ ವೇತನವಾಗಿಲ್ಲ. ಇದಕ್ಕೂ ಮುನ್ನ ಆರು ತಿಂಗಳವರೆಗೆ ಸಂಬಳವಾಗದ ಉದಾಹರಣೆಯೂ ಇದೆ. ಇಲಾಖೆಯ 'ಎ, ಬಿ, ಸಿ' ಹಂತದ ಅಧಿಕಾರಿಗಳು ಒಂದು ದಿನ ಸಂಬಳ ವಿಳಂಬವಾದರೂ ಸುಮ್ಮನಿರಲ್ಲ. ಆದರೆ, ಕೆಳಹಂತದ ಸಿಬ್ಬಂದಿಯ ಸಂಬಳದ ಕಡತವನ್ನೇ ಮರೆತುಬಿಡುತ್ತಾರೆ ಎಂಬ ಆರೋಪವಿದೆ.

ಅರಣ್ಯ ಇಲಾಖೆ ಅಕ್ರಮಕ್ಕೆ ದಾಖಲೆ ಕೊಡುವೆ, ತನಿಖೆ ನಡೆಸುವ ತಾಕತ್ತು ಖಂಡ್ರೆಗೆ ಇದೆಯಾ?: ಕುಮಾರಸ್ವಾಮಿ

ಇಲಾಖೆಯಲ್ಲಿ 'ಸಿ' ಗ್ರೂಪ್ 308, 'ಡಿ' ಗ್ರೂಪ್‌ನಲ್ಲಿ 2421 ದಿನಗೂಲಿ ನೌಕರರಿದ್ದಾರೆ. ಇದರಲ್ಲಿ ಗಸ್ತು ನಿರ್ವಾಹಕರು, ನಿಸ್ತಂತು ನಿರ್ವಾಹಕ, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು ಸೇರಿದ್ದಾರೆ. ಜೊತೆಗೆಂ ಹುಲಿ ಸಂರಕ್ಷಿತ ಪ್ರದೇಶ, 13 ವನ್ಯಜೀವಿ ಅಭಯಾ ರಣ್ಯಗಳಲ್ಲಿ ಕಳ್ಳಬೇಟೆ ತಡೆ ವಿಶೇಷ ಕಾರ್ಯಾಚರಣೆ ಗಿರುವ 1600ಕ್ಕೂ ಹೆಚ್ಚಿನ ಅರಣ್ಯ ವೀಕ್ಷಕ ದಿನಗೂಲಿ ನೌಕರರಿಗೆ ಸಂಬಳ ಅನಿಶ್ಚಿತವಾಗಿದೆ.

ಆರೋಗ್ಯ ಸಮಸ್ಯೆ ಎದುರಾದಾಗ, ಹಬ್ಬ ಹರಿದಿನಗಳಲ್ಲಿ, ಮಕ್ಕಳ ವಿದ್ಯಾಭ್ಯಾಸ ಸೇರಿ ಕೊನೆಗೆ ಊಟಕ್ಕೂ ಆರ್ಥಿಕ ಸಂಕಷ್ಟ ಎದುರಿಸಿದ ಅನುಭವ ಇವರಿಗಿದೆ. ಪ್ರತಿನಿತ್ಯದ ಗಸ್ತಿನ ಜೊತೆಗೆ ಫೈರ್ ಲೈನ್, ಕಾಡಿಚ್ಚು ತಡೆ, ಹುಲಿ-ಆನೆ ಸರಯಂಥ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಸದಾ ತೊಡಗಿರುತ್ತಾರೆ. 

ಅಕ್ಟೋಬರ್ ಸಂಬಳ ಆಗಿದೆ. ಅನುದಾನದ ಕೊರತೆ ಇಲ್ಲ. ಆದರೆ ಬಳಕೆ ಬಗ್ಗೆ ತಾಂತ್ರಿಕ ಸಮಸ್ಯೆಗಳಿದ್ದವು. ಮುಖ್ಯ ಕಾವ್ಯದರ್ಶಿ ಜೊತೆಗೆ ಸಭೆ ನಡೆಸಿ ಶೀಘ್ರವೇ ಬಾಕಿ ಸಂಬಳ ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.