ಫಿಲಂ ಸಿಟಿ ಕೊನೆಗೂ ಮೈಸೂರಿಗೆ ಎತ್ತಂಗಡಿ| ಇದು ಫೈನಲ್‌?| ಮೇಲ್ಮನೆಯಲ್ಲಿ ಸಚಿವ ಸಿ.ಸಿ.ಪಾಟೀಲ್‌ ಘೋಷಣೆ| ನಂಜನಗೂಡಿನ ಹಿಮ್ಮಾವುನಲ್ಲಿ 110 ಎಕರೆ ಜಾಗ| 

ವಿಧಾನ ಪರಿಷತ್‌(ಮಾ.18): ಕಡೆಗೂ ಅಂತಾರಾಷ್ಟ್ರೀಯ ಚಿತ್ರ ನಗರಿಯನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಜಾಗತಿಕ ಗುಣಮಟ್ಟದ ಚಿತ್ರನಗರಿ ನಿರ್ಮಾಣಕ್ಕೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಅಗತ್ಯ ಜಮೀನು ಲಭ್ಯವಿಲ್ಲದ ಕಾರಣ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದ 110.08 ಎಕರೆ ಜಾಗದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಚಿತ್ರನಗರಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ವಾರ್ತಾ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಉದ್ಯಮಿ ಬಿ. ಆರ್‌. ಶೆಟ್ಟಿಯ ವಿಶ್ವದೆಲ್ಲೆಡೆ ಆಸ್ತಿ ಜಪ್ತಿ ಆದೇಶ!

ರಾಜ್ಯ ಸರ್ಕಾರ 2015ರಲ್ಲಿ ಚಿತ್ರನಗರಿ ನಿರ್ಮಾಣ ಸಂಬಂಧ ಮೈಸೂರು ಜಿಲ್ಲೆಯ ಹಿಮ್ಮಾವು ಗ್ರಾಮದಲ್ಲಿ 110.08 ಎಕರೆ ಜಾಗವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಮಂಜೂರು ಮಾಡಿತ್ತು. ಚಿತ್ರ ನಿರ್ಮಾಣದ ಜೊತೆಗೆ ಪ್ರವಾಸೋದ್ಯಮ, ಹೋಟೆಲ…, ಮನರಂಜನೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಚಿತ್ರನಗರಿ ನಿರ್ಮಾಣ ಸಂಬಂಧ ಈ ಜಮೀನನ್ನು 2017ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಲಾಗಿತ್ತು. ಆದರೆ ಬಳಿಕ ಬೆಂಗಳೂರಲ್ಲಿ ಸ್ಥಾಪಿಸುವುದಾಗಿ ತಿಳಿಸಲಾಗಿತ್ತು. ಹೀಗಾಗಿ ಗೊಂದಲ ಉಂಟಾಗಿತ್ತು.

ಮೈಸೂರಲ್ಲೇ ಸ್ಥಾಪನೆ- ಸಚಿವ:

ಶೂನ್ಯ ವೇಳೆಯಲ್ಲಿ ಜೆಡಿಎಸ್‌ ಸದಸ್ಯ ಸಂದೇಶ ನಾಗರಾಜ್‌ ಅವರು ಪ್ರಸ್ತಾಪಿಸಿದ ಚಿತ್ರನಗರಿ ವಿಚಾರ ಕುರಿತು ಮಾತನಾಡಿದ ಸಚಿವ ಪಾಟೀಲ್‌, ‘ಕನ್ನಡ ಚಿತ್ರೋದ್ಯಮವನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 2020-21ನೇ ಸಾಲಿನ ಆಯವ್ಯಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ನಗರದಲ್ಲಿ 500 ಕೋಟಿ ರು. ವೆಚ್ಚದಲ್ಲಿ ಜಾಗತಿಕ ಗುಣಮಟ್ಟದ ಚಿತ್ರನಗರಿ ಸ್ಥಾಪಿಸುವುದಾಗಿ ಘೋಷಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬೆಂಗಳೂರು ಸುತ್ತಮುತ್ತ ಚಲನಚಿತ್ರ ನಗರಿ ಮತ್ತು ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪಿಸಲು ಸೂಕ್ತವಾದ ಸುಮಾರು 50ರಿಂದ 70 ಎಕರೆ ಜಮೀನು ಒದಗಿಸುವಂತೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಗೃಹ ಮಂಡಳಿಗೆ ಪತ್ರ ಬರೆದಿತ್ತು. ಆದರೆ, ಬೆಂಗಳೂರು ಸುತ್ತಮುತ್ತ ಜಾಗತಿಕ ಗುಣಮಟ್ಟದ ಚಿತ್ರನಗರಿ ಸ್ಥಾಪನೆಗೆ ಅಗತ್ಯವಿರುವ ಜಮೀನು ಲಭ್ಯವಿಲ್ಲ ಎಂಬ ವರದಿ ಬಂದಿದೆ. ಹೀಗಾಗಿ ಬೆಂಗಳೂರು ಬದಲು ಮೈಸೂರಿನ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದರು.

ಫಿಲ್ಮ್‌ ಸಿಟಿ ಮೈಸೂರಲ್ಲಾಗಬೇಕು, ಹಿರಿಯರು ನಿರ್ಧರಿಸಲಿ: ಯಶ್!

ಇದೀಗ ಆ ಜಮೀನು ಒಳಗೊಂಡಂತೆ ಸದರಿ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ವರ್ಗಾಯಿಸಿಕೊಂಡು ಯೋಜನೆ ಅನುಷ್ಠಾನಗೊಳಿಸುವುದಾಗಿ ಸಚಿವ ಸಿ.ಸಿ.ಪಾಟೀಲ್‌ ಹೇಳಿದರು.